ಸಬ್ಕ ಸಾಥ, ಸಬ್ಕ ವಿಕಾಸ್ ಕರ್ನಾಟಕದಲ್ಲಿ ಮಾತ್ರ ಅಸ್ಥಿತ್ವದಲ್ಲಿದೆ: ಸಿದ್ದರಾಮಯ್ಯ

ತುಮಕೂರು, ಆ.19: ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವ ಸಬ್ಕಾ ಸಾಥ್, ಸಬ್ಕಾ ವಿಕಾಶ್ ನಿಜವಾಗಿಯೂ ಅನುಷ್ಠಾನಕ್ಕೆ ತಂದಿರುವುದು ಕರ್ನಾಟಕದ ಕಾಂಗ್ರೆಸ್ ಸರಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ನಗರಪಾಲಿಕೆ, ನಗರಾಭಿವೃದ್ದಿ ಪ್ರಾಧಿಕಾರ ಸೇರಿದಂತೆ ಸುಮಾರು 16 ವಿವಿಧ ಇಲಾಖೆಗಳಿಂದ ಹಮ್ಮಿಕೊಂಡಿದ್ದ 773 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳು ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತಿದ್ದ ಅವರು, ಕಳೆದ ಮೂರುವರೆ ವರ್ಷಗಳಿಂದಲೂ ಮಾತ್ತೆತ್ತಿದರೆ ಎಲ್ಲರೊಂದಿಗೆ ಎಲ್ಲರ ವಿಕಾಸಕ್ಕಾಗಿ ಎಂದು ಬೊಬ್ಬಿಡುವ ಪ್ರಧಾನಿ ಮೋದಿ, ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗಿಲ್ಲ. ಅಲ್ಪ ಸಂಖ್ಯಾತರು,ದಲಿತರಿಗೆ ಅಭಿವೃದ್ದಿಯ ಲಾಭ ದೊರೆಯದಂತೆ ಮಾಡಿದ್ದಾರೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರಕಾರ, ಅಯಾಯ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಹಣ ಮೀಸಲೀಡುವ ಮೂಲಕ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಎಲ್ಲಾ ವರ್ಗದ ಬಡವರಿಗೂ ಗೌರವಯುತ ಬದುಕಿಗೆ ಅವಕಾಶ ಮಾಡಿಕೊಟ್ಟಿದೆ. ನಿಜವಾದ ಅರ್ಥದಲ್ಲಿ ಎಲ್ಲರ ಅಭಿವೃದ್ದಿ ಶಕ್ತಿಮೀರಿ ಶ್ರಮಿಸುತ್ತಿದೆ ಎಂದರು.
ಮನ್ಕಿ ಬಾತ್ನಿಂದ ಬಡಜನರ ಹೊಟ್ಟೆ ತುಂಬಲ್ಲ: ಪ್ರಧಾನಿ ನರೇಂದ್ರ ಮೋದಿ ಮನ್ಕಿ ಬಾತ್ ಕಾರ್ಯಕ್ರಮದ ಮೂಲಕ ಬಡ ಜನರಿಗೆ ಹಲವಾರು ಬಡ ಜನರಿಗೆ ಹಲವಾರು ಆಶ್ವಾಸನೆಗಳನ್ನು ನೀಡಿದ್ದಾರೆ. ಆದರೆ ಇದುವರೆಗೂ ಒಂದು ಈಡೇರಿಲ್ಲ. ನಮ್ಮದು ಮನ್ ಕಿ ಬಾತ್ ಇಲ್ಲ, ನಮ್ಮದು ಕಾಮ್ ಕಿ ಬಾತ್, ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಮನಸ್ವಿನಿ ಹೀಗೆ ಅನೇಕ ಕಾರ್ಯಕ್ರಮಗಳ ಪ್ರತಿಯೊಬ್ಬ ಜನಸಾಮಾನ್ಯರನ್ನು ತಲುಪಲು ಪ್ರಯತ್ನಿಸಿದ್ದೇವೆ.
ನಮ್ಮ ಈ ಯೋಜನೆಗಳಿಂದ ಬಡವರು ಅನ್ನವಿಲ್ಲದೆ ಹಸಿವಿನಿಂದ ನರಳುವುದು ತಪ್ಪಿದೆ. ಕೆಲಸ ಹುಡುಕಿ ಗುಳೆ ಹೋಗುವುದು ಕಡಿಮೆಯಾಗಿದೆ. ಇಂದಿರಾ ಕ್ಯಾಂಟೀನ್ ಬಗ್ಗೆ ಕೆಲವರು ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ. ಯಾವುದೇ ಜಾಗದ ಮೇಲೆ ಅತಿಕ್ರಮಣ ಮಾಡಿಲ್ಲ. ಬಡವರ ಹೊಟ್ಟೆ ಹಸಿವು ನೀಗಿಸಲು ಬಿ.ಬಿ.ಎಂ.ಪಿ. ಜಾಗದಲ್ಲಿ ಇಂದಿರಾ ಕ್ಯಾಂಟೀನ್ ತೆರೆದಿದ್ದೇವೆ. ಹೊಟ್ಟೆ ಹಸಿವಿನ ಮುಂದೆ ಎಲ್ಲವೂ ಗೌಣ. ಇದು ಹೊಟ್ಟೆ ತುಂಬಿದವರು ಮಾಡುವ ಟೀಕೆ. ಇದಕ್ಕೆ ಜನರೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಮ್ಮದು ಭ್ರಷ್ಟಾಚಾರ ರಹಿತ ಆಡಳಿತ
ನಮ್ಮದು ಬ್ರಷ್ಟಾಚಾರ ರಹಿತ ಆಡಳಿತ, ಕಳೆದ ನಾಲ್ಕು ವರ್ಷಗಳಲ್ಲಿ ನಾನಾಗಲಿ, ನನ್ನ ಸಚಿವ ಸಂಪುಟದ ಸದಸ್ಯರಾಗಲಿ, ಯಾವುದೇ ಗಂಭೀರ ಭ್ರಷ್ಟಾಚಾರಗಳಲ್ಲಿ ತೊಡಗಿಲ್ಲ. ಜೈಲು ವಾಸವನ್ನು ಅನುಭವಿಸಿಲ್ಲ. ರಾಜ್ಯಕ್ಕೆ ಅಮಿತ್ ಶಾ ಬಂದು ಹೋದ ಮೇಲೆ ನಿದ್ದೆಯಿಂದ ಎದ್ದಿರುವ ಯಡಿಯೂರಪ್ಪ ಜೈಲಿಗೆ ಕಳುಹಿಸುವ ಮಾತನಾಡುತ್ತಿದ್ದಾರೆ. ಏಕೆಂದರೆ ಅವರಿಗೆ ಇನ್ನೂ ಜೈಲಿನ ಕನವರಿಕೆ ಹೋಗಿಲ್ಲ. ಮೊದಲು ಅವರು ಜೈಲಿಗೆ ಹೋಗುವುದನ್ನು ತಪ್ಪಿಸಿ ಕೊಳ್ಳಲಿ ನಂತರ ಇತರರ ಬಗ್ಗೆ ಮಾತನಾಡಲಿ. ನಿಜವಾಗಲಿ ಬಿಜೆಪಿ ಪಕ್ಷದರೆ ತಾಕತ್ತಿದ್ದರೆ ಮುಕ್ತವಾಗಿ ಚರ್ಚೆಗೆ ಬರಲಿ, ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ನಾನು ಸಿದ್ದನಿದ್ದೇನೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಬಿಜೆಪಿ ನಡಿಗೆ-ದಲಿತರ ಕಡೆಗೆ ಕೇವಲ ಬೂಟಾಟಿಕೆ
ಮಿಷನ್ 150ರ ಹೆಸರಿನಲ್ಲಿ ಬಿಜೆಪಿ ನಡಿಗೆ ದಲಿತರ ಕಡೆಗೆ ಎಂದು ಹೋರಟ ಬಿಜೆಪಿ ಮುಖಂಡರು, ಹೊಟೇಲ್ನಿಂದ ತರಿಸಿದ ತಿಂಡಿಯನ್ನು ದಲಿತರ ಮನೆಯಲ್ಲಿ ತಿಂದು ಬೂಟಾಟಿಕೆ ಪ್ರದರ್ಶನ ಮಾಡಿದ್ದರು. ದಲಿತರೊಂದಿಗೆ ವೈವಾಹಿಕ ಸಂಬಂಧ ಬೆಳೆಸಿ ಎಂದು ಸವಾಲು ಹಾಕಿದ ನಂತರ ಕಾರ್ಯಕ್ರಮವೇ ನಿಂತು ಹೋಗಿದೆ. ಬಿಜೆಪಿ ಅಧಿಕಾರದಲ್ಲಿದ್ದ 5 ವರ್ಷಗಳಲ್ಲಿ ದಲಿತರ ಅಭಿವೃದ್ದಿಗೆ ಕರ್ಚು ಮಾಡಿದ್ದು ಕೇವಲ 25 ಸಾವಿರ ಕೋಟಿ ಮಾತ್ರ. ಆದರೆ ನಮ್ಮ ಸರಕಾರ ಐದು ವರ್ಷಗಳಲ್ಲಿ ಖರ್ಚು ಮಾಡುತ್ತಿರುವುದು 87 ಸಾವಿರ ಕೋಟಿ ನಿಜವಾಗಿಯೂ ದಲಿತರ ಅಭಿವೃದ್ದಿಗೆ ಶ್ರಮಿಸುತ್ತಿರುವುದು ಯಾವ ಪಕ್ಷ ಎಂಬುದು ಜನರು ಅರ್ಥ ಮಾಡಿಕೊಂಡು ಮುಂದಿನ ಚುನಾವಣೆಯಲ್ಲಿ ಮತ ನೀಡಬೇಕು ಎಂದು ಮನವಿ ಮಾಡಿದರು.
ಕಳೆದ ನಾಲ್ಕು ವರ್ಷದ ಹಿಂದೆ ನೀವುಗಳು ಡಾ.ರಫೀಕ್ ಅಹಮದ್ ಅವರ ಮೇಲೆ ವಿಶ್ವಾಸವಿಟ್ಟು ಅವರಿಗೆ ಅಧಿಕಾರ ನೀಡಿದ್ದೀರಿ. ಅವರು ಸುಮಾರು 773 ಕೋಟಿ ರೂಗಳ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನೀಡುವ ಮೂಲಕ ನಿಮ್ಮಗಳ ವಿಶ್ವಾಸ ಗಳಿಸಿದ್ದಾರೆ. ಇವರದ್ದು ಮಾತು ಕಡಿಮೆ, ಕೆಲಸ ಜಾಸ್ತಿ ಎನ್ನುವ ಪ್ರವೃತ್ತಿ. ಇಂದು ಉದ್ಘಾಟನೆಯಾಗುತ್ತಿರುವ ಮತ್ತು ಶಂಕುಸ್ಥಾಪನೆಯಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳು ನಮ್ಮ ಸರಕಾರದಿಂದ ಮಂಜೂರಾದ ಕಾರ್ಯಕ್ರಮಗಳೇ ಆಗಿವೆ. ನುಡಿದಂತೆ ನಡೆದಿದ್ದೇವೆ. ಪ್ರತಿ ಬಜೆಟ್ ಮಂಡಿಸುವಾಗಲು ನಾವು ಪ್ರಾಣಾಳಿಕೆಯಲ್ಲಿ ನೀಡಿದ ಭರವಸೆ ಮತ್ತು ಬಜೆಟ್ನಲ್ಲಿ ಘೋಷಿಸಬೇಕಾದ ಅಂಶಗಳ ಕುರಿತು ಚರ್ಚಿಸಿ,ಅದಷ್ಟು ಜನರಿಗೆ ನೀಡಿದ್ದ ಭರವಸೆ ಈಡೇರಿಸಲು ಪ್ರಯತ್ನಿಸುತ್ತೇನೆ. ಇದರ ಫಲವಾಗಿಯೇ ಜನರಿಗೆ ಚುನಾವಣೆ ಪೂರ್ವದಲ್ಲಿ ನೀಡಿದ್ದ 165 ಭರವಸೆಗಳಲ್ಲಿ 155ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ.ನಮ್ಮ ಮುಂದಿರುವುದು ಜನಸಾಮಾನ್ಯರೇ ಹೊರತು,ಉದ್ದಿಮಿಗಳು,ಭೂ ಮಾಲೀಕರು, ಕೋಟ್ಯಾಧಿಪತಿಗಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಶಾಸಕ ಡಾ.ರಫೀಕ್ ಅಹಮದ್,ಬಡವರಿಗೆ, ಶ್ರೀಸಾಮಾನ್ಯರಿಗೆ ಹೆಚ್ಚಿನ ಸವಲತ್ತುಗಳು ನಮ್ಮ ಸರಕಾರದಿಂದ ದೊರೆಯಬೇಕು ಎಂಬ ಉದ್ದೇಶದಿಂದ ಇಂದು 410 ಕೋಟಿ ರೂಗಳ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಮತ್ತು 340 ಕೋಟಿ ರೂಗಳ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಒಂದು ಜಾಗದಲ್ಲಿ ಸುಮಾರು 1200 ಆಶ್ರಯ ಮನೆಗಳನ್ನು ನಿರ್ಮಿಸಿರುವುದು ಕರ್ನಾಟಕದಲ್ಲಿ ಇದೇ ಮೊದಲು.ಜಿಲ್ಲೆಯ ಎಲ್ಲಾ ಸಚಿವರು, ಶಾಸಕರ ಸಹಕಾರದಿಂದ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸದರಾದ ಎಸ್.ಪಿ.ಮದ್ದಹನುಮೇಗೌಡ,ಚಂದ್ರಪ್ಪ, ಜಿ.ಪಂ.ಅಧ್ಯಕ್ಷೆ ಲತಾ,ಉಪಾಧ್ಯಕ್ಷೆ ಶಾರದ,ಮೇಯರ್ ರವಿಕುಮಾರ್,ಶಾಸಕ ಕೆ.ಷಡಕ್ಷರಿ,ಹೆಚ್.ಎಂ.ರೇವಣ್ಣ,ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜಿನೀಶ್,ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಮತ್ತಿತರರು ವೇದಿಕೆಯಲ್ಲಿದ್ದರು.







