“ಪ್ರಾಮಾಣಿಕವಾಗಿ ಹೇಳುತ್ತೇನೆ ಮುಸ್ಲಿಮರಿಲ್ಲದಿದ್ದರೆ ನಾವ್ಯಾರು ಜೀವಂತ ಉಳಿಯುತ್ತಿರಲಿಲ್ಲ”
ಉತ್ಕಲ್ ಎಕ್ಸ್ ಪ್ರೆಸ್ ದುರಂತದಲ್ಲಿ ಬದುಕುಳಿದ ಸಾಧು ಭಗವಾನ್ ದಾಸ್
ಮೀರತ್, ಆ.20: “ನನ್ನ ಮುಂದಿನ ಸೀಟಿಗೆ ನನ್ನ ತಲೆ ಬಡಿದದ್ದು ಇನ್ನೂ ನೆನಪಿದೆ. ಅಪಘಾತದ ತೀವ್ರತೆಗೆ ನಾನು ಕನಿಷ್ಟ 2 ಅಡಿ ಮುಂದಕ್ಕೆ ಎಸೆಯಲ್ಪಟ್ಟಿದ್ದೆ. ನನಗೆ ನೋವಾಗಿತ್ತು ಹಾಗೂ ಎಲ್ಲರ ಆಕ್ರಂದನ ನನಗೆ ಕೇಳುತ್ತಿತ್ತು. ಪ್ರಾಮಾಣಿಕವಾಗಿ ಹೇಳುತ್ತೇನೆ ಆ ಪ್ರದೇಶದಲ್ಲಿ ಮುಸ್ಲಿಮರು ಇರದೇ ಇರುತ್ತಿದ್ದರೆ ನಾವ್ಯಾರು ಜೀವಂತ ಉಳಿಯುತ್ತಿರಲಿಲ್ಲ”… ಹೀಗೆಂದು ಹೇಳಿದವರು ಶನಿವಾರ ಸಂಜೆ ಹಳಿ ತಪ್ಪಿದ ಉತ್ಕಲ್ ಎಕ್ಸ್ ಪ್ರೆಸ್ ರೈಲಿನಲ್ಲಿದ್ದ ಸಾಧು ಭಗವಾನ್ ದಾಸ್ ಮಹಾರಾಜ್.
ತನ್ನ ಇತರ 6 ಮಂದಿ ಸಹವರ್ತಿಗಳೊಂದಿಗೆ ಭಗವಾನ್ ದಾಸ್ ಮಹಾರಾಜ್ ಹರಿದ್ವಾರಕ್ಕೆ ತೆರಳುತ್ತಿದ್ದರು.
“ಆ ಪ್ರದೇಶದಲ್ಲಿ ಮುಸ್ಲಿಮರು ನಮಗೆ ನೀರು ಕೊಟ್ಟರು. ಮಂಚಗಳ ವ್ಯವಸ್ಥೆ ಮಾಡಿ ಖಾಸಗಿ ವೈದ್ಯರನ್ನು ಕರೆಸಿದರು. ಈ ಸಹಾಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದವರು ಹೇಳುತ್ತಾರೆ.
ಇವರ ಜೊತೆಗಿದ್ದ ಇತರ ಮೂವರು ಸಾಧುಗಳು ಗಾಯಗೊಂಡಿದ್ದು, ಅವರನ್ನು ಲಾಲಾ ಲಜಪತರಾಯ್ ಮೆಮೊರಿಯಲ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.
“ನಾವು ದೇವರನ್ನು ನಂಬುತ್ತೇನೆ ಹಾಗೂ ಅಪಘಾತ ನಡೆದ ತಕ್ಷಣವೇ ಆತನ ಶಕ್ತಿಯನ್ನು ಕಂಡಿದ್ದೇವೆ. ಹಿಂದೂ ಮುಸ್ಲಿಮರ ಬಾಂಧವ್ಯವನ್ನು ರಾಜಕೀಯಗೊಳಿಸಲಾಗುತ್ತಿದೆ. ಆದರೆ ಹಿಂದೂ ಮುಸ್ಲಿಂ ಸಮುದಾಯ ಪರಸ್ಪರರನ್ನು ಪ್ರೀತಿಸುತ್ತದೆ” ಎನ್ನುತ್ತಾರೆ ಇನ್ನೊಬ್ಬ ಸಾಧು ಮೋರ್ನಿ ದಾಸ್.