ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುವವರ ಬಗ್ಗೆ ಎಚ್ಚರ: ಶ್ರೀವಿಜಯಾನಂದ ಸ್ವಾಮಿ
ಮಾನವ ಬಂಧುತ್ವ ವಲಯ ಸಮಾವೇಶ

ಉಡುಪಿ, ಆ.20: ಜನಿವಾರದ ಸ್ವಾಮೀಜಿ ಅಲ್ಲ ಎಂಬ ಕಾರಣಕ್ಕೆ ಕೊಲ್ಲೂರು ಶ್ರೀಸದ್ಗುರು ನಿತ್ಯಾನಂದ ಮಠದ ವಿಮಲಾನಂದ ಸ್ವಾಮೀಜಿಯ ಸಮಾಧಿ ತೆರವು ಮಾಡಲು ಮುಂದಾಗಿರುವ ಮನಸ್ಥಿತಿಯು ಹಿಂದುಗಳೆಲ್ಲಾ ಒಂದು ಎಂದು ಒಪ್ಪಲು ಸಿದ್ಧರಿಲ್ಲ ಎಂಬುವುದಕ್ಕೆ ನಿದರ್ಶನ. ಹಾಗಾಗಿ ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುವವರ ಬಗ್ಗೆ ಬಹಳ ಎಚ್ಚರ ವಹಿಸಬೇಕಾಗಿದೆ ಎಂದು ಬೈಲಹೊಂಗಳ ತಾಲೂಕಿನ ಬೇವಿನಕೊಪ್ಪ ಆನಂದ ಮಠದ ನಿತ್ಯಾನಂದ ಧ್ಯಾನ ಕೇಂದ್ರದ ಶ್ರೀವಿಜಯಾನಂದ ಸ್ವಾಮಿ ಹೇಳಿದ್ದಾರೆ.
ಕರ್ನಾಟಕ ಮಾನವ ಬಂಧುತ್ವ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿ ಯಿಂದ ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ಶ್ರೀನಾರಾಯಣ ಗುರು ಸಭಾಭವನ ದಲ್ಲಿ ಆಯೋಜಿಸಲಾದ ಶ್ರೀನಾರಾಯಣ ಗುರುಗಳ ಜಯಂತಿ ಮತ್ತು ಮಂಗ ಳೂರು ವಲಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೋಟ್ಯಂತರ ರೂ. ಹಣ ವೆಚ್ಚ ಮಾಡಿ ರಾಮಮಂದಿರ ಕಟ್ಟುವವರು ಇಂದು ಶಾಲೆಗೆ ಕೊಲ್ಲೂರಿನ ದೇವಸ್ಥಾನದ ಹಣ ನೀಡುವುದನ್ನು ಸ್ಥಗಿತಗೊಳಿಸಿದ ರೆಂದು ಬೀದಿಯಲ್ಲಿ ಭಿಕ್ಷೆ ಬೇಡುವ ನಾಟಕ ಆಡುತ್ತಿರುವುದು ವಿಪರ್ಯಾಸವೇ ಸರಿ. ಒಳ್ಳೆಯ ಕೆಲಸ ಮಾಡಿದರೆ ಹಣಕ್ಕೆ ಯಾವುದೇ ಕೊರತೆ ಆಗಲ್ಲ. ನಾವು ಬದಲಾಗಬೇಕೆ ಹೊರತು ಜಗತ್ತನ್ನು ಬದಲಿಸಲು ನಮಗೆ ಸಾಧ್ಯವಿಲ್ಲ ಎಂದರು.
ಗುರು ಅಂದರೆ ದಾರಿ ತೋರಿಸುವ ಮೈಲುಗಲ್ಲು. ಆದರೆ ಇಂದು ಗುರುಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆಸೆಯನ್ನು ಸುಟ್ಟ ಸನ್ಯಾಸಿಗಳು ಮಾತ್ರ ಗುರುಗಳಾಗಲು ಸಾಧ್ಯ. ಖಾವಿ ತೊಟ್ಟ ಎಲ್ಲರು ಗುರುಗಳಲ್ಲ ಎಂದು ಅರಿಯ ಬೇಕು. ಮತಗಳು ಬೇರೆ ಬೇರೆಯಾಗಿದ್ದರೂ ಎಲ್ಲಾ ಮತಗಳ ಧರ್ಮ ಒಂದೇ ಆಗಿದೆ. ಅದುವೇ ಮಾನವ ಧರ್ಮ ಎಂದು ಅವರು ತಿಳಿಸಿದರು.
ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ಜಾತಿ ಧರ್ಮದ ಹೆಸರಿನಲ್ಲಿ ತುಳಿತಕೊಳಗಾದ ಸಮುದಾಯವನ್ನು ಎಚ್ಚರಿಸಿದ್ದ ನಾರಾಯಣ ಗುರುಗಳು, ಅವರಿಗೆ ಸರಿಯಾದ ದಾರಿಯನ್ನು ತೋರಿಸಿಕೊಟ್ಟರು. ಇದರ ಪರಿಣಾಮ ಇಂದು ಸಮಾಜದಲ್ಲಿ ತಲೆ ಎತ್ತಿ ನಡೆಯುತ್ತಿರುವ ಈ ಸಮು ದಾಯಗಳನ್ನು ಮತ್ತೆ ಧರ್ಮದ ಹೆಸರಲ್ಲಿ ದಾರಿ ತಪ್ಪಿಸುವ ಕೆಲಸ ಮಾಲಾಗುತ್ತಿದೆ ಎಂದು ಆರೋಪಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಟಿ.ಆರ್.ರಘುನಂದನ್ ‘ವೈದಿಕ ಧರ್ಮದ ಅಮಾನವೀಯತೆಯನ್ನು ದಿಕ್ಕರಿಸಿದ ನಾರಾಯಣಗುರು ಪರಂಪರೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ಡಾ.ರಾಜಶೇಖರ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ಯನ್ನು ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೇಡ್ ಡಿಸೋಜ ವಹಿಸಿದ್ದರು.
ಮಂಗಳೂರು ವಿವಿಯ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಸಬಿತಾ, ಮಂಗಳೂರು ಕುದ್ಮಲ್ ರಂಗರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್. ಕೇಶವ ಧರಣಿ, ಡಾ.ಲೀಲಾ, ಕಾಪು ಪುರಸಭೆ ಅಧ್ಯಕ್ಷೆ ಸೌಮ್ಯಾ ಸಂಜೀವ್, ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಅಶೋಕ್ ಎಂ.ಸುವರ್ಣ, ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್, ಮಾನವ ಬಂಧುತ್ವ ವೇದಿಕೆಯ ಉಡುಪಿ ಜಿಲ್ಲಾ ಗೌರವ ಸಂಚಾಲಕ ಪ್ರಭಾಕರ್ ಪೂಜಾರಿ, ಜಿಲ್ಲಾ ಸಮಿತಿಯ ಸದಸ್ಯ ರಾದ ನವೀನ್ ಅಮೀನ್ ಶಂಕರಪು, ಪ್ರಭಾ ವಿ.ಶೆಟ್ಟಿ ಉಪಸ್ಥಿತರಿದ್ದರು.
ಮಂಗಳೂರು ವಲಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ದಿನೇಶ್ ಕೋಟ್ಯಾನ್ ಸ್ವಾಗತಿಸಿದರು. ರಾಜೇಶ್ ದೇವಾಡಿಗ ಪಡುಬಿದ್ರಿ, ಜಯವಂತ ರಾವ್ ಹಿರಿಯಡ್ಕ, ನವ್ಯ ಕಾರ್ಯಕ್ರಮ ನಿರೂಪಿಸಿದರು.







