ಹಳಿ ದುರಸ್ತಿಯ ಬಗ್ಗೆ ಚಾಲಕನಿಗೆ ಮಾಹಿತಿ ಇರಲಿಲ್ಲ: ಪ್ರಾಥಮಿಕ ತನಿಖೆಯಿಂದ ಬಹಿರಂಗ
ಉತ್ಕಲ್ ಎಕ್ಸ್ ಪ್ರೆಸ್ ದುರಂತ

ಉತ್ತರ ಪ್ರದೇಶ, ಆ.20: ಶನಿವಾರ ಸಂಜೆ ಹಳಿತಪ್ಪಿದ ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್ ರೈಲು ಚಲಿಸುತ್ತಿದ್ದ ಹಳಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಚಾಲಕನಿಗೆ ಮಾಹಿತಿ ನೀಡಿರಲಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಉತ್ಕಲ್ ಎಕ್ಸ್ ಪ್ರೆಸ್ ರೈಲು ಬರುತ್ತಿದ್ದಾಗ 15 ಮೀಟರ್ ಉದ್ದದ ಹಳಿಯನ್ನು ತೆಗೆದು ಬೇರೆಯದನ್ನು ಜೋಡಿಸಲಾಗುತ್ತಿತ್ತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬೇರೆ ಯಾವುದೇ ಆಯ್ಕೆಗಳಿಲ್ಲದೆ ಪ್ರಾಣ ಉಳಿಸುವ ಸಲುವಾಗಿ ಕಾರ್ಮಿಕರು ಅಲ್ಲಿಂದ ಓಡಿದ್ದರು. ನಂತರ ಬದಲಿ ಹಳಿ ಎ-1 ಬೋಗಿಯ ಅಡಿಯಲ್ಲಿ ಪತ್ತೆಯಾಗಿತ್ತು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಕಾಮಗಾರಿ ನಡೆಯುತ್ತಿದೆ ಎನ್ನುವ ಮಾಹಿತಿ ಖಟೌಲಿ ಸ್ಟೇಷನ್ ನ ಸಿಬ್ಬಂದಿಗೂ ಸಿಕ್ಕಿರಲಿಲ್ಲ ಎನ್ನಲಾಗಿದೆ. ಒಂದು ವೇಳೆ ಅಪಾಯದ ಸೂಚನೆ ಸಿಕ್ಕಿದ್ದರೆ ಖಟೌಲಿ ಸ್ಟೇಷನ್ ಗೆ ಉತ್ಕಲ್ ಎಕ್ಸ್ ಪ್ರೆಸ್ ತಲುಪುತ್ತಿರಲಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೀರತ್ ಹಾಗೂ ಮುಝಫ್ಫರ್ ನಗರದ ನಡುವೆ ಅಪಾಯದ ಶಬ್ಧ ಆಗದಿರಲು ಕಾರಣವೇನು ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ.





