ಅಯ್ಯುಪ್ಪ ಭಕ್ತರ ಯಾತ್ರೆಗೆ ಅನುದಾನ ನೀಡಿ: ಪೇಜಾವರ ಕಿರಿಯ ಶ್ರೀ
ಉಡುಪಿ, ಆ.20: ಧಾರ್ಮಿಕ ಕ್ಷೇತ್ರವಾಗಿರುವ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಅತ್ಯಂತ ಹೆಚ್ಚು ಭಕ್ತರು ಸಂದರ್ಶಿಸುತ್ತಿದ್ದು, ಈ ಹಿನ್ನೆಲೆ ಯಲ್ಲಿ ಸರಕಾರ ಇಲ್ಲಿಗೆ ಆಗಮಿಸುವ ಭಕ್ತರ ಯಾತ್ರೆಗೆ ಅನುದಾನ ನೀಡಬೇಕು ಎಂದು ಪರ್ಯಾಯ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ನಡೆದ ಕರ್ನಾಟಕ ಶಬರಿ ಮಲೆ ಅಯ್ಯಪ್ಪ ಸೇವಾ ಸಮಾಜಂನ ಉಡುಪಿ ಜಿಲ್ಲಾ ಸಮಿತಿ ರಚನೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಪ್ರಾಚೀನ ಸಂಪ್ರದಾಯದ ವೃತಾಚರಣೆಯನ್ನು ಉಳಿಸಿ, ಬದುಕಿಗೆ ಧಾರ್ಮಿಕ ನೆಲೆಯನ್ನು ನೀಡಿ, ದೇವರ ಸೇವೆಯಲ್ಲಿ ತೊಡಗಿ, ಧರ್ಮವನ್ನು ರಕ್ಷಿಸಿ, ಸಮಾಜವನ್ನು ಒಗ್ಗೂಡಿಸುವ ಕೆಲಸ ಅಯ್ಯಪ್ಪಸ್ವಾಮಿ ಭಕ್ತರಿಂದ ನಡೆಯುತ್ತಿದೆ. ವೃತಾಚರಣೆಗಳು ದಾರಿ ತಪ್ಪದೆ ನಮ್ಮ ಉದ್ದಾರ ನಮ್ಮಿಂದಲೇ ಆಗಬೇಕೆಂದು ಎಂದು ಹೇಳಿದರು.
ಶಬರಿಮಲೆ ಅಯ್ಯಪ್ಪಸೇವಾ ಸಮಾಜದ ರಾಜ್ಯಾಧ್ಯಕ್ಷ ಟಿ.ಬಿ.ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಸ್.ಎನ್.ಕೃಷ್ಣ, ಸಂಘಟಕ ಗಿರೀಶ್ ಜಿ.ಎನ್. ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಅಯ್ಯಪ್ಪ ಭಕ್ತ ವೃಂದದ ಪ್ರತಿನಿಧಿಗಳು ಭಾಗವಹಿಸಿದ್ದರು. ಬೈಕಾಡಿ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು.