ಬಹು ಸಂಸ್ಕೃತಿಯ ದೇಶವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ : ಕೆ.ನೀಲಾ
ಡಿವೈಎಫ್ಐ ಸಮ್ಮೇಳನ
ಉಳ್ಳಾಲ, ಆ. 20: ಯುವ ಸಮುದಾಯದಲ್ಲಿ ಮತೀಯವಾದದ ವಿಷ ಬೀಜ ಬಿತ್ತಿ ಅವರ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡಿ ಬಹು ಸಂಸ್ಕೃತಿಯ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿರುವ ಕೋಮುವಾದಿಗಳನ್ನು ಗುರುತಿಸುವ ಕಾರ್ಯ ಡಿವೈಎಫ್ಐ ಸಂಘಟನೆಯಿಂದ ನಡೆಯಬೇಕೆಂದು ಜನಪರ ಚಿಂತಕಿ ಕೆ.ನೀಲಾ ಕರೆ ನೀಡಿದರು.
'ಅಬ್ಬಕ್ಕನ ಮಡಿಲು ಸೌಹಾರ್ದತೆಯ ಕಡಲು' ಎಂಬ ಧ್ಯೇಯ ವಾಕ್ಯದೊಂದಿಗೆ ಉಳ್ಳಾಲ ಡಿವೈಎಫ್ಐ ಘಟಕವು ರವಿವಾರ ಕುತ್ತಾರಿನಲ್ಲಿ ಸಂಘಟಿಸಿದ 13ನೆ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಬಲಿದಾನ ಮಾಡದವರಿಂದು ಅಮಾಯಕ ಯುವಕರಿಗೆ ದೇಶಭಕ್ತಿಯ ಪಾಠ ಕಲಿಸಲು ಹೊರಟಿರುವ ಪರಿಣಾಮವಾಗಿ ಹದಿಹರೆಯದ ಯುವಕರಿಂದು ಮತೀಯ ಗಲಭೆಗಳಲ್ಲಿ ತೊಡಗಿಸಿ ಪ್ರಾಣ ಕಳಕೊಳ್ಳುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಮತೀಯವಾದದ ಕರಳಾ ನರ್ತನ ತಾರಕಕ್ಕೇರಿದ್ದು ಇಂತಹ ಅಹಿತಕರ ಘಟನೆಗಳನ್ನು ಸೃಷ್ಟಿಸುವ ಮೂಲ ಸೂತ್ರಧಾರಿಗಳಾರೆಂದು ಡಿವೈಎಫ್ಐನ ಯುವಕರು ಕಂಡು ಹಿಡಿಯಬೇಕೆಂದು ಕರೆ ನೀಡಿದರು.
ವರ್ಷಕ್ಕೆ 2 ಕೋಟಿ ಜನರಿಗೆ ಉದ್ಯೋಗ ಕಲ್ಪಿಸುತ್ತೇನೆಂದ ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಮಾತು ಸುಳ್ಳಾಗಿದೆ. ಕೇಂದ್ರ ಸರಕಾರದ ಸಮೀಕ್ಷೆಯ ಪ್ರಕಾರವೇ ದೇಶದಲ್ಲಿ ವರ್ಷಕ್ಕೆ 70 ಲಕ್ಷ ಜನರು ಉದ್ಯೋಗ ಕಳಕೊಳ್ಳುತ್ತಿದ್ದಾರೆಂದು ಸಾಬೀತಾಗಿದೆ. ಉತ್ತರ ಕರ್ನಾಟಕದ ಯುವ ಜನರಿಂದು ಕೆಲಸಕ್ಕಾಗಿ ಇತರ ಊರಿಗೆ ಗುಳೇ ಹೋಗುತ್ತಿದ್ದು, ಕೆಲ ಮಹಿಳೆಯರಂತೂ ಕೆಲಸವಿಲ್ಲದೆ ಮೈ ಮಾರಿಕೊಳ್ಳುತ್ತಿದ್ದಾರೆ ಎಂದರು. ಉಳ್ಳಾಲದ ಕಡಲು ದೇಶಾದ್ಯಂತ ಹೆಸರುವಾಸಿಯಾಗಿದೆ. ಕಡಲೆಂದರೆ ಸಮಾನತೆ, ಸಾಮರಸ್ಯ, ಭಯವನ್ನು ಮೆಟ್ಟಿ ನಿಲ್ಲಿಸುವಂತದ್ದು. ಆ ನಿಟ್ಟಿನಲ್ಲಿ ಅಬ್ಬಕ್ಕ ಆಳಿದ ಕಡಲ ನಗರಿಯನ್ನು ಮತ್ತೆ ಸಾಮರಸ್ಯದೆಡೆ ಒಯ್ಯುವ ಕಾರ್ಯ ನಡೆಯಬೇಕೆಂದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಇಂದು ಸಂಘಟನೆಯು ಸಾಮರಸ್ಯದ ಬಗ್ಗೆ ಜಾಥಾ ನಡೆಸಬೇಕಾದರೂ ಪೊಲೀಸರು ಅನುಮತಿ ನೀಡಲು ಹಿಂದು ಮುಂದು ನೋಡಬೇಕಾದ ಪರಿಸ್ಥಿತಿ ಜಿಲ್ಲೆಯಲ್ಲಿ ಉದ್ಭವಿಸಿರುವುದು ಖೇದಕರ. ದೇಶದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಜಿಲ್ಲೆಯ ಕಾರಾಗೃಹದಲ್ಲಿ ಮುಸ್ಲಿಮರು ಮತ್ತು ಹಿಂದೂಗಳಿಗೆ ಪ್ರತ್ಯೇಕ ಜೈಲು ಕೊಠಡಿಗಳನ್ನು ಮಾಡಿರುವುದೇ ಕರಾವಳಿಯಲ್ಲಿ ಕೋಮುವಾದವು ಎಷ್ಟರ ಮಟ್ಟಿಗೆ ಬೇರೂರಿದೆ ಎಂಬುದನ್ನು ತೋರಿಸುತ್ತದೆ. ಅಮಾಯಕ ಯುವಕರು ಕೋಮು ಜ್ವಾಲೆಗೆ ಬಲಿಯಾಗುವುದರ ಬದಲಿಗೆ ಉದ್ಯೋಗಕ್ಕಾಗಿ ಸರಕಾರದ ವಿರುದ್ಧ ಹೋರಾಟ ನಡೆಸಿ ಎಂದು ಕರೆ ನೀಡಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ದೇರಳಕಟ್ಟೆ ಯಿಂದ ಕುತ್ತಾರು ಎಂ.ವೈ.ಎಂ.ಸಭಾಂಗಣದವರೆಗೆ ಡಿವೈಎಫ್ಐ ಕಾರ್ಯಕರ್ತರ ವರ್ಣರಂಜಿತ ರ್ಯಾಲಿ ನಡೆಯಿತು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಮಹಾಬಲ ಟಿ.ದೆಪ್ಪಲಿಮಾರ್ ಅವರು ಸಭಾಧ್ಯಕ್ಷತೆ ವಹಿಸಿಸಿದ್ದರು. ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಗಂಗಾಧರ್ ಉಳ್ಳಾಲ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ಬಿ.ಕೆ.ಇಮ್ತಿಯಾರ್,ಜಿಲ್ಲಾ ಸಮಿತಿ ಅಧ್ಯಕ್ಷರಾದ ದಯಾನಂದ ಶೆಟ್ಟಿ, ಕಾರ್ಯದರ್ಶಿಗಳಾದ ಸಂತೋಷ್ಕುಮಾರ್ ಬಜಾಲ್, ಉಳ್ಳಾಲ ವಲಯ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಕಾರ್ಯದರ್ಶಿಗಳಾದ ಜೀವನ್ರಾಜ್ ಕುತ್ತಾರ್, ಜೊತೆ ಕಾರ್ಯದರ್ಶಿಗಳಾದ ಸುನೀಲ್ ತೇವುಲ,ರಜಾಕ್ ಮೊಂಟೆಪದವು,ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ನಿತಿನ್ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು.