ಇಬ್ಬರು ನಿವೃತ್ತ ಯೋಧರ ಸಹಿತ ಮೂವರಿಗೆ ಗ್ರಾಮಸಭಾ ಗೌರವ
ಮೂಡುಬಿದಿರೆ, ಆ. 20: ತೆಂಕಮಿಜಾರು ಗ್ರಾಮಪಂಚಾಯತ್ ನಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮದ ನಿವೃತ್ತ ಯೋಧರಾಗಿರುವ ಎಂ.ಜೆ ಮೊಹಮ್ಮದ್, ಜೋಸೆಫ್ ಪಿರೇರಾ ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿರುವ ಲಿಂಗಪ್ಪ ಗೌಡ ಅವರಿಗೆ ಗ್ರಾಮಸಭಾ ಗೌರವವನ್ನು ನೀಡಲಾಯಿತು.
ಬಂಗಬೆಟ್ಟು ಶಾಲೆಯ ಸಭಾಭವನದಲ್ಲಿನಡೆದ ಗ್ರಾಮಸಭೆಯಲ್ಲಿಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆವಹಿಸಿದ್ದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಉಪತಹಾಶೀಲ್ದಾರ್ ವಾಸು ಶೆಟ್ಟಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪಂಚಾಯತ್ ಉಪಾಧ್ಯಕ್ಷೆ ಹೇಮಾವತಿ ಕುಲಾಲ್ ಸಹಿತ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಆಳ್ವಾಸ್ ಪ್ರಕೃತಿ ಮತ್ತು ಯೋಗ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲೆ ವನಿತಾ ಶೆಟ್ಟಿ, ನೀರ್ಕೆರೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮಾ ಉಪಸ್ಥಿತರಿದ್ದರು. ಪಂಚಾಯತ್ ಸಿಬಂದಿಗಳಾದ ರಾಕೇಶ್ ಭಟ್ ವಾರ್ಷಿಕ ವರದಿಯನ್ನು ನೀಡಿದರು. ಆನಂದ ಅವರು ಜಮಾ ಖರ್ಚಿನ ವಿವರ ನೀಡಿದರು.
ಇದೇ ಸಂದರ್ಭದಲ್ಲಿ ಆಳ್ವಾಸ್ ಪ್ರಕೃತಿ ಮತ್ತು ಯೋಗ ವಿಭಾಗದ ವತಿಯಿಂದ ಉಚಿತ ಚಿಕಿತ್ಸಾ ಶಿಬಿರ ನಡೆಯಿತು.