ಕಳವು ಪ್ರಕರಣ: ಆರು ಮಂದಿಯ ಬಂಧನ; ಸೊತ್ತು ವಶ
ಪುತ್ತೂರು, ಆ. 21: ಪುತ್ತೂರು ಉಪವಿಭಾಗ ವ್ಯಾಪ್ತಿಯ 8 ಮನೆ ಕಳವು, 3 ಕಡೆಗಳಲ್ಲಿ ಅಡಿಕೆ ಕಳವು ಹಾಗೂ 5 ಕಡೆಗಳಲ್ಲಿ ಜಾನುವಾರು ಕಳವು ಮಾಡಿದ ಪ್ರಕರಣದ ಆರು ಮಂದಿ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನಗಳ ಸಹಿತ ಕಳವು ಮಾಡಲಾಗಿರುವ ಒಟ್ಟು 16.56 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಕುಲಕರ್ಣಿ ತಿಳಿಸಿದ್ದಾರೆ.
ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಅಶ್ರಫ್ ಯಾನೆ ಮಹಮ್ಮದ್ ಅಶ್ರಫ್ ಯಾನೆ ತಾರಿಗುಡ್ಡೆ ಅಶ್ರಫ್ (37), ಪುತ್ತೂರು ನಗರದ ಚೇತನಾ ಆಸ್ಪತ್ರೆ ಬಳಿಯ ನಿವಾಸಿ ಮೊಹ್ಮುದ್ ಸಾದಿಕ್ ಯಾನೆ ಸಾದಿಕ್ (19), ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಅನ್ವರ್ ಆಲಿ ( 37), ಕೊಡಿಪ್ಪಾಡಿ ಗ್ರಾಮದ ಓಜಾಲ ನಿವಾಸಿ ಮಹಮ್ಮದ್ ತೌಫಿಕ್ ( 20), ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಶಿಶುಪಾಲನಾ ಕೇಂದ್ರದ ಬಳಿಯ ನಿವಾಸಿ ಉದೈಫ್ (20) ಮತ್ತು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ರಫೀಕ್ ಯಾನೆ ಕಪ್ಪು ರಫೀಕ್ (20) ಬಂಧಿತ ಆರೋಪಿಗಳು.
ಆರೋಪಿಗಳು ಕಳೆದ ಬುಧವಾರ ಮಧ್ಯ ರಾತ್ರಿ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್ಸು ತಂಗುದಾಣದ ಬಳಿ ರಿಕ್ಷಾವೊಂದರಲ್ಲಿ ಕುಳಿತುಕೊಂಡು ಕಳವು ನಡೆಸಲು ಹೊಂಚು ಹಾಕುತ್ತಿದ್ದ ವೇಳೆ ಗಸ್ತು ನಿರತರಾಗಿದ್ದ ಸಂಪ್ಯ ಎಸ್ಐ ಅಬ್ದುಲ್ ಖಾದರ್ ಮತ್ತು ಪೊಲೀಸರ ತಂಡ ಅನುಮಾನದ ಮೇಲೆ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಈ ಕಳವು ಪ್ರಕರಣಗಳು ಬಯಲಿಗೆ ಬಂದಿತ್ತು.
ಆರೋಪಿಗಳು ಸಂಪ್ಯ ಠಾಣಾ ವ್ಯಾಪ್ತಿಯ ಸಂಪ್ಯ, ಕೆಯ್ಯೂರು, ಅಮ್ಚಿನಡ್ಕ, ಸುಳ್ಯ ಠಾಣಾ ವ್ಯಾಪ್ತಿಯ ಕನಕಮಜಲು ಸಮೀಪದ ಕದಿತ್ತಡ್ಕ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆದಿಲ, ಬಂಟ್ವಾಳ ಠಾಣಾ ವ್ಯಾಪ್ತಿಯ ದಾಸರಕೋಡಿ ಮತ್ತು ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಚಾರ್ಮಾಡಿ ಎಂಬಲ್ಲಿ ಮನೆ ಕಳವು, , ಬೆಳ್ಳಾರೆ ಠಾಣಾ ವ್ಯಾಪ್ತಿಯ ಅಲೆಕ್ಕಾಡಿಯಲ್ಲಿ ಅಂಗಡಿ ಕಳವು ನಡೆಸಿರುವುದು, ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕರಾಯ ಮತ್ತು ಕರ್ವೇಲು ಕಡೆಗಳಲ್ಲಿ ಅಡಿಕೆ ಕಳವು ಮಾಡಿರುವುದು, ಬೆಳ್ಳಾರೆ ಠಾಣಾ ವ್ಯಾಪ್ತಿಯ ಪಾಲ್ತಾಡಿ, ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಎಡಮಂಗಲ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಬಪ್ಪಳಿಗೆ ಮತ್ತು ಕೆಮ್ಮಾಯಿ ಹಾಗೂ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಉಪ್ಪಿನಂಗಡಿ ಕಡೆಗಳಲ್ಲಿ ಜಾನುವಾರು ಕಳ್ಳತನ ನಡೆಸಿರುವುದು ವಿಚಾರಣೆಯ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕಳವಿಗೆ ಬಳಸುತ್ತಿದ್ದ ಕಾರು, ಬೈಕ್, ಆರೋಪಿಗಳು ಕಳವುಗೈದಿದ್ದ ಸೊತ್ತುಗಳ ಪೈಕಿ 2 ಟಿವಿಗಳು, ಡಿಜಿಟಲ್ ಕೆಮರಾ, 2 ಲ್ಯಾಪ್ಟಾಪ್, ಇಸ್ತ್ರಿ ಪೆಟ್ಟಿಗೆ ಸೇರಿಂದಂತೆ 6.10 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಸಂಪ್ಯ ಠಾಣೆಯ ಎಸ್ಐ ಅಬ್ದುಲ್ ಖಾದರ್ ಹಾಗೂ ಎಎಸ್ಐ ರುಕ್ಮ ನಾಯ್ಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಸಂಪ್ಯ ಠಾಣೆಯ ಸಿಬ್ಬಂದಿಯಾದ ದಯಾನಂದ, ಚಂದ್ರ, ದಿನೇಶ, ಕರುಣಾಕರ, ವಿನಯ ಕುಮಾರ್ ,ಹರೀಶ್, ವಿಟ್ಲ ಠಾಣೆಯ ಎಸ್ಐ ನಾಗರಾಜ್, ಪುತ್ತೂರು ನಗರ ಠಾಣಾ ಎಎಸ್ಐ ಚಿದಾನಂದ ರೈ, ಸಿಬ್ಬಂದಿಯಾದ ಸ್ಕರಿಯ, ಪ್ರಶಾಂತ್, ಉಪ್ಪಿನಂಗಡಿ ಠಾಣೆಯ ಪ್ರವೀಣ್ , ಜಗದೀಶ್ ,ದಿವಾಕರ್ ಹಾಗೂ ಸಂಪತ್ ಕುಮಾರ್ ಈ ಕಳವು ಪ್ರಕರಣಗಳ ಪತ್ತೆ ಮತ್ತು ಸೊತ್ತುಗಳ ವಶ ಕಾಯಾಚರ್ರಣೆಯಲ್ಲಿ ಭಾಗವಹಿಸಿದ್ದರು.
ಪಾಸ್ಪೋರ್ಟ್ ಅಡವಿಟ್ಟ ಆರೋಪಿಗಳು
ಸಂಪ್ಯ ಠಾಣಾ ವ್ಯಾಪ್ತಿಯ ಅಮ್ಚಿನಡ್ಕದ ಮನೆಯೊಂದರಿಂದ ಕಳ್ಳತನ ನಡೆಸಿದ್ದ ಆರೋಪಿಗಳು ಅಶೀಮ್ ಎಂಬವರಿಗೆ ಸೇರಿದ ಪಾಸ್ಪೋರ್ಟನ್ನು ಇತರ ವಸ್ತುಗಳ ಜೊತೆಗೆ ಕಳುವುಗೈದಿದ್ದರು. ಬಳಿಕ ಈ ಪಾಸ್ಪೋರ್ಟನ್ನು ಪುತ್ತೂರಿನ ಬೊಳುವಾರಿನಲ್ಲಿರುವ ಪೆಟ್ರೋಲ್ ಪಂಪೊಂದರಲ್ಲಿ ಅಡವಿಟ್ಟು ರೂ. 2500 ಪಡೆದಿದ್ದರು. ಇದೀಗ ಪೊಲೀಸರು ಆ ಪಾಸ್ಪೋರ್ಟನ್ನು ವಶಪಡಿಸಿಕೊಂಡಿದ್ದಾರೆ.