ವಂಚಿತ ಸಮುದಾಯವನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸ ಸಿಎಂ ಮಾಡಿದ್ದಾರೆ: ಜಕ್ಕಪ್ಪನವರ್
.jpg)
ಹಾಸನ, ಆ.21: ರಾಜ್ಯದಲ್ಲಿ ಯಾರು ವಂಚಿತರು ಇದ್ದಾರೆ ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎಫ್.ಎಚ್. ಜಕ್ಕಪ್ಪನವರ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಾಗ 160 ಪ್ರಣಾಳಿಕೆ ನೀಡಿದಂತೆ ಈಗಾಗಲೇ 150ನ್ನು ಈಡೇರಿಸಲಾಗಿದೆ. ಇನ್ನು 9 ತಿಂಗಳು ಬಾಕಿ ಇದ್ದು, ಎಲ್ಲಾವು ಕೂಡ ಜಾರಿಗೆ ಬರಲಿದೆ ಎಂದರು.
ರಾಜ್ಯದಲ್ಲಿ ಈಗಾಗಲೇ 7 ಜಿಲ್ಲೆಗಳ ಪ್ರವಾಸ ಮಾಡಲಾಗಿದೆ. ಅದರಲ್ಲಿ ಹಾಸನ ಜಿಲ್ಲೆ ಒಂದು ವಿಶೇಷವಿದೆ. ರಾಷ್ಟ್ರಕ್ಕೆ ನಾಯಕನನ್ನು ಕೊಟ್ಟ ಜಿಲ್ಲೆ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವ ಜಯಂತಿ ದಿನದಂದು ಪ್ರಮಾಣ ವಚನ ಸ್ವೀಕರಿಸಿ ಒಂದು ಗಂಟೆಯಲ್ಲಿಯೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 372 ಕೋಟಿ ರೂ. ಸಾಲಮನ್ನ ಮಾಡಲಾಯಿತು. ಅನ್ನಭಾಗ್ಯ, ಹೆಣ್ಣು ಮಕ್ಕಳ ಮನಸ್ವಿನಿ ಯೋಜನೆ, ಎ. ಮಂಜು ಅವರ ಪಶುಭಾಗ್ಯ, ವಿದ್ಯಾಸಿರಿ ಕಾರ್ಯಕ್ರಮವ ಬಂದಿದೆ. ಏನು ವಂಚಿತ ಸಮುದಾಯಗಳು ಇದೆ ಅವರಿಗೆ ವಿಶೇಷ ಆಧ್ಯತೆ ಕೊಟ್ಟು ಮುಖ್ಯವಾಹಿನಿಗೆ ತರುವ ಕೆಲಸ ಸಿಎಂ ಮಾಡಿದ್ದಾರೆ ಎಂದು ತಿಳಿಸಿದರು.
ಹೋಬಳಿಗೊಂದು ವಸತಿ ಶಾಲೆ ನಿರ್ಮಿಸಿಲು ಮುಂದಾಗಿ ಮುರಾರ್ಜಿ ಶಾಲೆ ಜೊತೆಗೆ ಅಂಬೇಡ್ಕರ್ ಶಾಲೆ ಪ್ರಾರಂಭಿಸಲಾಗಿದೆ . ಜಗತ್ತಿನಲ್ಲೆ ಹೆಚ್ಚು ಶಿಕ್ಷಣ ಪಡೆದ ಕೀರ್ತಿ ಡಾ|| ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. 125 ಅಂಬೇಡ್ಕರ್ ಜಯಂತಿ ಸಮಯದಲ್ಲಿ 424 ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಲಾಯಿತು. ಅಂಬೇಡ್ಕರಂತೆ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಲ್ಲಿ ಸ್ಕಾಲರ್ ಶಿಫ್ ನೀಡಲಾಗುತ್ತಿದೆ ಎಂದು ಕಿವಿಮಾತು ಹೇಳಿದರು.
ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಗಟ್ಟಿಯಾಗಿ ಎದುರಿಸುವ ಶಕ್ತಿ ಹಾಗೂ ಪ್ರಶ್ನೆ ಹಾಕುವ ಕೆಲಸವನನು ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜುನ ಖರ್ಗೆ ಮಾಡುತ್ತಿದ್ದಾರೆ. ಪಾರ್ಲಿಮೆಂಟನಲ್ಲಿ ತಡೆತಟ್ಟಿ ನಿಲ್ಲು ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ದಲಿತರಿಗೆ ಏತಕ್ಕಾಗಿ ಕಾಂಗ್ರೆಸ್ ಅನಿವಾರ್ಯ ಎಂಬುದು ಎಲ್ಲಾರಿಗೂ ಅರ್ಥವಾಗಬೇಕು. ಸಂವಿಧಾನವನ್ನೆ ಕಿತ್ತು ಹಾಕಲು ಮುಂದಾಗಿರುವಾಗ ಬಿಜೆಪಿ ಸರಕಾರವನ್ನು ಏತಕ್ಕಾಗಿ ಒಪ್ಪಬೇಕು ಎಂದು ಕಿಡಿಕಾರಿದರು.
ದೇಶದ ಪ್ರಧಾನಿ ಆಗಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮರುಕ್ಷಣದಲ್ಲಿ ಎಸ್ಸಿ ಮತ್ತು ಎಸ್ಟಿ ವರ್ಗಕ್ಕೆ ಶೇ. 50 ರಷ್ಟು ಹಣವನ್ನು ನಿಲ್ಲಿಸಿದರು. ಪರಿಶಿಷ್ಟರ ವಿದ್ಯಾರ್ಥಿ ವೇತನ ಕೂಡ ನಿಲ್ಲಿಸಿದರು. ಇನ್ನು ಎಬಿವಿಪಿ ಎಲ್ಲಾ ಕಡೆ ನುಗ್ಗಿ ವಿದ್ಯಾರ್ಥಿಗಳನ್ನು ಅಡ್ಡಾಡಿಸಿ ಹೊಡೆಯುತ್ತಿದ್ದಾರೆ. ದನದ ಮಾಂಸವನ್ನು ಯಾರು ಕಾಂಗ್ರೆಸ್ ಪಕ್ಷದವರು ವಿದೇಶಕ್ಕೆ ಕಳುಹಿಸುತ್ತಿಲ್ಲ. ಇದನ್ನು ಬಿಜೆಪಿ ಪಕ್ಷದವರೆ ಮಾಡುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಶಾರದಗೌಡ ಮಾತನಾಡಿ, ದೀನ ದಲಿತರ ಪಕ್ಷ ಎಂದರೇ ಅದು ಕಾಂಗ್ರೆಸ್ ಪಕ್ಷವಾಗಿದೆ. ದಲಿತರಿಗಾಗಿ ಹಲವಾರು ಯೋಜನೆಯನ್ನು ಜಾರಿಗೆ ತರಲಾಯಿತು. ಜಿಲ್ಲೆಯಲ್ಲಿ 5 ಲಕ್ಷದ 6 ಸಾವಿರ ಮತದಾರರು ಇದ್ದಾರೆ. ದಲಿತರು, ಅಲ್ಪಸಂಖ್ಯಾತರು ಮನಸು ಮಾಡಿದರೇ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ 7 ಜನ ಅಭ್ಯರ್ಥಿಯನ್ನು ಬೇಕಾದರೇ ಗೆಲ್ಲಿಸಬಹುದು ಎಂದು ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ. ಆನಂದ್ ಮಾತನಾಡಿದರು. ಹುಡಾ ಅಧ್ಯಕ್ಷ ಕೃಷ್ಣಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೀರಿವುಲ್ಲಾ ಪ್ರಸಾದ್, ಮುಖಂಡರು ಎಚ್.ಕೆ. ಮಹೇಶ್, ಅನುಪಮ, ಎಚ್.ಕೆ. ಜವರೇಗೌಡ, ಸಿ.ವಿ. ರಾಜಪ್ಪ, ಪಟೇಲ್ ಶಿವಪ್ಪ, ಜಿಲ್ಲಾ ಉಸ್ತುವಾರಿ ಜಿ.ವಿ. ಕೃಷ್ಣಪ್ರಸಾದ್, ಮುನಿಸ್ವಾಮಿ, ಶಿವಕುಮಾರ್ ಇತರರು ಇದ್ದರು.







