ವಲಸೆ ಹಕ್ಕಿ ಭೇಟೆ: ಆರೋಪಿ ಬಂಧನ
ಮಂಡ್ಯ, ಆ.21: ಕೆ.ಆರ್.ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದ ಕೆರಯಲ್ಲಿ ವಲಸಿಗ ಕೊಕ್ಕರೆಯನ್ನು (ಪೇಂಟೆಡ್ ಸ್ಟೋರ್ಕ್) ನಾಡ ಬಂದೂಕಿನಿಂದ ಭೇಟಿಯಾಡಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಹಾಸನ ಜಿಲ್ಲೆಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೂಳದ ಶ್ರೀಕಂಠನಗರದ ನಿವಾಸಿ ನಾಗರಾಜು ಯಾನೆ ಗೆಂಡೆ ಬಂಧಿತ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಇತರ ಮೂವರು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ವಳೆಗೆರೆ ಮೆಣಸ ಕೆರೆಗೆ ದೇಶ ವಿದೇಶದಿಂದ ಕೊಕ್ಕರೆ ಸೇರಿದಂತೆ ಹಲವು ಪಕ್ಷಿಗಳು ವಲಸೆ ಬರುತ್ತವೆ. ಕಳೆದ ಆ.ಆ.13ರರಂದು ಬಂಧಿತ ನಾಗರಾಜು ಇತರ ಮೂವರ ಜತೆ ಸೇರಿಕೊಂಡು ನಾಡ ಬಂದೂಕಿನಿಂದ ವಲಸೆ ಕೊಕ್ಕರೆಯೊಂದನ್ನು ಕೊಂದು ಹಾಕಿದ್ದರು.
ಕೊಕ್ಕರೆಯನ್ನು ಕೊಂದು ಹೊತ್ತೊಯ್ಯುತ್ತಿರುವುದನ್ನು ಪರಿಸರ ಪ್ರೇಮಿಯೊಬ್ಬರು ತನ್ನ ಮೊಬೈಲ್ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿದ್ದರು. ಇದರ ಜಾಡು ಹಿಡಿದು ವಲಯ ಅರಣ್ಯಾಧಿಕಾರಿ ನಾಗರಾಜುವನ್ನು ಶನಿವಾರ ಬಂಧಿಸಿದ್ದಾರೆ.
ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.