ಆ್ಯಸಿಡ್ ಸಂತ್ರಸ್ತರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು: ಜಿಲ್ಲಾ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ
ಉಡುಪಿ, ಆ.22: ಆ್ಯಸಿಡ್ ದಾಳಿಯಿಂದ ಸಂತ್ರಸ್ಥರಾದವರು ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸೂಕ್ತ ಪರಿಹಾರ ಪಡೆಯಬಹುದು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕಾ ಟಿ. ಹೇಳಿದ್ದಾರೆ.
ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಪೊಲೀಸ್ ದೂರು ಪ್ರಾಧಿಕಾರ, ಕರ್ನಾಟಕ ಸಂತ್ರಸ್ತರ ಪರಿಹಾರ ಯೋಜನೆ-2011 ಮತ್ತು ಆ್ಯಸಿಡ್ ಸಂತ್ರಸ್ತರಿಗೆ ಸಿಗುವ ಕಾನೂನು ಸೇವೆಗಳ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆ್ಯಸಿಡ್ ದಾಳಿಗೆ ಒಳಗಾಗಿ ಶೇ.80ಕ್ಕೂ ಹೆಚ್ಚು ಹಾನಿಗೊಳಗಾದವರಿಗೆ ರೂ.3 ಲಕ್ಷ, ಶೇ.40ರಿಂದ ಶೇ.80ರವರೆಗೆ ಹಾನಿಗೊಳಗಾದವರಿಗೆ 2 ಲಕ್ಷ ರೂ. ಹಾಗೂ ಶೇ.40ಗಿಂತ ಕಡಿಮೆ ಹಾನಿಗೊಳಗಾದವರಿಗೆ ಒಂದು ಲಕ್ಷ ರೂ. ಪರಿಹಾರವನ್ನು ನೀಡಲು ಅವಕಾಶವಿದೆ. ಅದೇ ರೀತಿ ಅತ್ಯಾಚಾರಕ್ಕೆ ಒಳಗಾದರೆ ಅಪ್ರಾಪ್ತ ವಯಸ್ಕರು 3 ಲಕ್ಷ ರೂ. ಹಾಗೂ ವಯಸ್ಕರು 1.50 ಲಕ್ಷ ರೂ. ಪರಿಹಾರವನ್ನು ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದು ಎಂದವರು ವಿವರಿಸಿದರು.
ಈ ಕುರಿತಂತೆ ಸಂಬಂದಪಟ್ಟ ಪ್ರಾಧಿಕಾರದಲ್ಲಿ ದೂರು ನೀಡಬೇಕಾಗುತ್ತದೆ. ಸಂತ್ರಸ್ತರಿಗೆ ವೈದ್ಯಕೀಯ ವೆಚ್ಚ ಮತ್ತು ಪುರ್ನವಸತಿ ಸೌಲ್ಯವನ್ನೂ ಸಹ ಒದಗಿಸಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸದ ಸಂದರ್ಭ ದಲ್ಲಿ, ಅಕ್ರಮವಾಗಿ ಬಂಧನದಲ್ಲಿಟ್ಟ ಸಂದರ್ಭದಲ್ಲಿ ಹಾಗೂ ಠಾಣೆಯಲ್ಲಿ ಹಿಂಸೆ ನೀಡಿದರೆ ಈಕುರಿತು ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಬಹುದು. ಜಿಲ್ಲಾಧಿಕಾರಿಗಳು ಈ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಪೊಲೀಸ್ ವರಿಷ್ಠಾಧಿ ಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಕೋರ್ಟ್ ಹಾಗೂ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಇದಕ್ಕಾಗಿ ದೂರು ಪೆಟ್ಟಿಗೆ ಇಡಲಾಗಿದ್ದು, ಸಾರ್ವಜನಿಕರು ಇದರಲ್ಲಿ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಎಂ. ಪಾಟೀಲ್ ಮಾತನಾಡಿ, ಭಾರತ ದೇಶ ಅನೇಕ ವೈವಿಧ್ಯತೆಗಳಿಂದ ಕೂಡಿದ್ದರೂ ಸಹ ಏಕತೆಯಿಂದ ಬಾಳುತ್ತಿರುವುದಕ್ಕೆ ಮೂಲ ಕಾರಣ ನಮ್ಮ ಸಂವಿಧಾನ. ಪ್ರತಿಯೊಬ್ಬರೂ ಸಂವಿಧಾನ ಆಶಯಗಳಿಗೆ ಬದ್ಧರಾಗಿ ನಡೆಯಬೇಕು. ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರು ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಅವರೊಂದಿಗೆ ಸಂವಿಧಾನ ಮತ್ತು ಕಾನೂನು ಇದೆ ಎಂಬ ಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದರು.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅರಿವು ಹೊಂದಿರಬೇಕು. ಅವರು ಸಂತ್ರಸ್ತರಿಗೆ ನೆರವು ನೀಡಬೇಕು, ಧೈರ್ಯ ತುಂಬಬೇಕು. ಆ್ಯಸಿಡ್ ದಾಳಿಕೋರರಿಗೆ ಅತ್ಯಂತ ಕಠಿಣ ಶಿಕ್ಷೆ ಮತ್ತು ಸಂತ್ರಸ್ಥರ ನೆರವಿಗೆ ಸರಕಾರ ಇದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವಿಧಾನವನ್ನು ಮತ್ತು ಅಲ್ಲಿ ಅಪರಾಧಿಗಳನ್ನು ನಡೆಸಿಕೊಳ್ಳುವ ರೀತಿಯನ್ನು ಖುದ್ದಾಗಿ ವೀಕ್ಷಿಸಬೇಕು. ಪೊಲೀಸ್ ಠಾಣೆಗಳಲ್ಲಿ ಯಾವುದೇ ಕಾನೂನು ಉಲ್ಲಂಘನೆಯ ಕಾರ್ಯ ನಡೆಯುತ್ತಿದ್ದರೆ ಕೂಡಲೇ ತಮಗೆ ವರದಿ ನೀಡುವಂೆ ಸಂಜೀವ ಎಂ. ಪಾಟೀಲ್ ಹೇಳಿದರು.
ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರಕಾಶ ಕಣಿವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಲತಾ, ಉಡುಪಿ ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಪ್ರಾಧ್ಯಾಪ ಸಿಸಿಲಿಯಾ ಡಿಸೋಜಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಪ್ರಬಂಧಗಳ ಮಂಡನೆ ನಡೆಯಿತು. ಪೇಟ್ರಿಷಿಯಾ ಸ್ವಾಗತಿಸಿ ವರ್ಷಾ ವಂದಿಸಿದರು. ನಿಕಿತಾ ಶೆಣ್ಯೆ ಕಾರ್ಯಕ್ರಮ ನಿರೂಪಿಸಿದರು.