ತೋನ್ಸೆ ಜಯಂತ್ ಕುಮಾರ್ಗೆ ಕಾಳಿಂಗ ನಾವಡ ಪ್ರಶಸ್ತಿ
ಉಡುಪಿ, ಆ.22: ಬೆಂಗಳೂರು ಕಲಾ ಕದಂಬ ಆರ್ಟ್ ಸೆಂಟರ್ ಕೊಡ ಮಾಡುವ ಪ್ರತಿಷ್ಠಿತ ಕಾಳಿಂಗ ನಾವಡ ಪ್ರಶಸ್ತಿಗೆ ಯಕ್ಷಗುರು, ಭಾಗವತ ತೋನ್ಸೆ ಜಯಂತ್ ಕುಮಾರ್ ಆಯ್ಕೆಯಾಗಿದ್ದಾರೆ.
ಬೆಂಗಳೂರು ಚಾಮರಾಜಪೇಟೆ ಉದಯಭಾನು ಕಲಾಸಂಘದಲ್ಲಿ ಆ.27 ರಂದು ಅಪರಾಹ್ನ 3:30ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡ ಲಾಗುವುದು. ಜಯಂತ್ ಕುಮಾರ್ ಬಡಗುತಿಟ್ಟಿನ ಯಕ್ಷಗಾನದಲ್ಲಿ ಗುರು ಪರಂಪರೆಯನ್ನು ಉಳಿಸಿಕೊಂಡು ಬಂದ ಭಾಗವತರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ತೋನ್ಸೆ ಕಾಂತಪ್ಪ ಮಾಸ್ತರ್ ಅವರ ಮಗನಾಗಿರುವ ಇವರು, ಉಪ್ಪೂರು ಶೈಲಿಯನ್ನು ಉಳಿಸಿಕೊಂಡು ನೂರಾರು ಶಿಷ್ಯರನ್ನು ಯಕ್ಷಗಾನಕ್ಕೆ ನೀಡಿದವರು.
ಸಿಂಗಾಪುರದ ಯಕ್ಷಗಾನೋತ್ಸವ, ದೆಹಲಿ ಕರ್ನಾಟಕೋತ್ಸವ, ಮದ್ರಾಸು ಹೀಗೆ ನಾನಾ ಕಡೆ ಪ್ರಾತ್ಯಕ್ಷಿಕೆ ನೀಡಿರುವ ಇವರು, ಉಡುಪಿಯಲ್ಲಿ ಯಕ್ಷ ಶಿಕ್ಷಣ ಯೋಜನೆಯಡಿ ನೂರಾರು ಮಕ್ಕಳಿಗೆ ಯಕ್ಷಗಾನ ಕಲಿಸಿದ್ದಾರೆ. ಇವರು ಕರ್ನಾಟಕ ಅಕಾಡೆಮಿಯ ರಂಗಭಾರತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Next Story