ಮುಸ್ಲಿಮರ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಿದೆ: ವೀರಪ್ಪ ಮೊಯ್ಲಿ

ಬೆಂಗಳೂರು, ಆ.23: ರಾಜ್ಯದ ಮುಸ್ಲಿಮ್ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ಆಧರಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಕ್ಫ್ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ವಕ್ಫ್ ಸಂಸ್ಥೆಗಳ ಮುತವಲ್ಲಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನದ ಅನುಸೂಚಿ 16 ಬಿ ಅನ್ವಯ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ಕಲ್ಪಿಸಿದ್ದೆ. ಶೇ.6 ರಷ್ಟು ಮೀಸಲಾತಿ ನೀಡುವ ಉದ್ದೇಶವಿದ್ದರೂ, ಇದಕ್ಕೆ ಸುಪ್ರೀಂ ಕೋರ್ಟ್ ಅಡ್ಡ ಬಂದಿದ್ದರಿಂದಾಗಿ ಈಡೇರಲಿಲ್ಲ. ಹೀಗಾಗಿ, ಪುನಃ ಪ್ರಯತ್ನ ನಡೆಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮುಸ್ಲಿಮ್ ಮುಖಂಡರು ಮುಂದಾಗಬೇಕೆಂದು ಅವರು ಸಲಹೆ ನೀಡಿದರು.
ದೇಶದಲ್ಲಿಯೇ ಅಲ್ಪಸಂಖ್ಯಾತರಿಗೆ ಹೆಚ್ಚು ಸ್ಥಾನಮಾನ ನೀಡಿರುವ ರಾಜ್ಯ ಕರ್ನಾಟಕವಾಗಿದೆ ಎಂದ ಅವರು, ಯುಪಿಎ ಸರಕಾರ ಆಡಳಿದ ಇದ್ದ ಸಂದರ್ಭದಲ್ಲಿ ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಕೆ.ರಹ್ಮಾನ್ ಖಾನ್ ಅವರು ವಕ್ಫ್ ತಿದ್ದುಪಡಿ-2013 ಕಾಯ್ದೆ ಜಾರಿಗೆ ತಂದ ಪರಿಣಾಮ ವಕ್ಫ್ ಆಸ್ತಿ ಸಂರಕ್ಷಣೆ ಸೇರಿದಂತೆ ನಾನಾ ಅನುಕೂಲಗಳಾಗಿವೆ ಎಂದು ವೀರಪ್ಪ ಮೊಯ್ಲಿ ನುಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಮಾತನಾಡಿ, ಸರಕಾರಿ ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆ ಮುತವಲ್ಲಿಗಳು ಸೇತುವೆಯಂತೆ ಕಾರ್ಯನಿರ್ವಹಿಸಿ ಸಮುದಾಯದ ಜನರಲ್ಲಿ ಅರಿವು ಮೂಡಿಸಬೇಕು. ಪ್ರತಿ ಮಸೀದಿಯಲ್ಲೂ ಶಿಕ್ಷಣದ ಬಗ್ಗೆ ಮಾಹಿತಿ ನೀಡುವಂತೆ ಆಗಬೇಕೆಂದು ಹೇಳಿದರು.
ಧನ ಸಹಾಯ: ಮಸೀದಿಯ ಇಮಾಮ್, ಮುತವಲ್ಲಿಗಳಿಗೆ ಅಲ್ಪಸಂಖ್ಯಾತರ ಇಲಾಖೆ ವ್ಯಾಪಾರಕ್ಕಾಗಿ ಧನ ಸಹಾಯ ನೀಡಬೇಕು. ಅಲ್ಲದೆ, ಶ್ರಮ ಶಕ್ತಿ ಮೂಲಕ 25 ಸಾವಿರ ರೂ. ಸಹಾಯ ಮಾಡಬಹುದಾಗಿದೆ. ಆದರೆ, ಶಾಸಕರು ತಮ್ಮ ಆಪ್ತರಿಗೆ ಮಾತ್ರ ನೀಡುತ್ತಾರೆ ಎನ್ನುವ ಆರೋಪ ಇದೆ. ಹೀಗಾಗಿ, ಇಲಾಖೆ ಧನ ಸಹಾಯ ನೀಡಬೇಕೆಂದು ಖಾದರ್ ಮನವಿ ಮಾಡಿದರು.
ವಕ್ಫ್ ಸಮಿತಿ ರಚನೆ: ರಾಜ್ಯದ ಪ್ರತೀ ತಾಲೂಕಿನಲ್ಲಿ ವಕ್ಫ್ ಸಮಿತಿ ರಚನೆ ಮಾಡಲಾಗುವುದು. ಇದರಲ್ಲಿ ಹೋಬಳಿಯ ಮುತವಲ್ಲಿ ಸೇರಿ ಪ್ರಮುಖರು ಸದಸ್ಯರಾಗಲಿದ್ದಾರೆ. ಸಮುದಾಯದ ಅಭಿವೃದ್ಧಿ ಯೋಜನೆಗಳು, ಹಬ್ಬ ಆಚರಣೆಯ ದಿನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಮಿತಿಗೆ ಮಾಹಿತಿ ನೀಡಲಾಗುವುದು. ಇದು ಜಿಲ್ಲಾ ವಕ್ಫ್ ಸಮಿತಿ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಸಚಿವ ತನ್ವೀರ್ ಸೇಠ್ ಮಾಹಿತಿ ನೀಡಿದರು.
ವಕ್ಫ್ ತಿದ್ದುಪಡಿ ಕಾಯ್ದೆ 2013ರ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಾಗಬೇಕು ಎಂದ ಅವರು, ವಕ್ಫ್ ಆಸ್ತಿಗಳ ನೋಂದಣಿ, ಅನುದಾನ ವಂಚಿತ ಸಂಸ್ಥೆಗಳಿಗೆ ಅನುದಾನ ಕಲ್ಪಿಸುವುದು, ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಸಮೀಕ್ಷೆ, ಗೌರವಧನ ಪಡೆಯುವಲ್ಲಿ ವಿಫಲವಾಗಿರುವ ಪೇಷ್ ಇಮಾಮ್ ಹಾಗೂ ವೌಝನ್ಗಳ ನೋಂದಣಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು ಎಂದು ಮಾಹಿತಿ ನೀಡಿದರು.
ಈ ಸಂರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಾಸೀರ್ ಅಹ್ಮದ್, ರಾಜ್ಯ ಸರಕಾರದ ಹೊಸದಿಲ್ಲಿ ಪ್ರತಿನಿಧಿ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಜಿ.ಎ.ಬಾವಾ, ಬೆಂಗಳೂರು ನಗರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯ್ಯದ್ ಶುಜಾವುದ್ದೀನ್, ಬೆಂ.ಗ್ರಾಮಾಂತರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಬಿ.ಬಾಷ ಸೇರಿ ಪ್ರಮುಖರು ಹಾಜರಿದ್ದರು.







