‘ವೀರಶೈವ-ಲಿಂಗಾಯತ ಛಿದ್ರವಾಗದಂತೆ ರಕ್ಷಿಸಿ’
ಗುರು ವಿರಕ್ತರ ಸಮಾವೇಶದಲ್ಲಿ ಒಕ್ಕೊರಲ ನಿರ್ಣಯ

ಬೆಂಗಳೂರು, ಆ.23: ವೀರಶೈವ ಲಿಂಗಾಯತ ಸನಾತನ ಧರ್ಮವಾಗಿದೆ. ಈ ಧರ್ಮವನ್ನು ಯಾವುದೇ ಕಾರಣಕ್ಕೂ ಛಿದ್ರವಾಗದಂತೆ ರಕ್ಷಿಸುವುದು ಗುರು ವಿರಕ್ತ ಮಠಾಧೀಶರ ಹಾಗೂ ಸಮಾಜದ ಸಕಲ ಭಕ್ತರ ಆದ್ಯ ಕರ್ತವ್ಯವಾಗಿದೆ ಎಂಬ ಒಕ್ಕೊರಲ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಬುಧವಾರ ವಿಜಯನಗರದಲ್ಲಿನ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಜರುಗಿದ ಸಮಾಲೋಚನಾ ಬೃಹತ್ ಧರ್ಮ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿವಿಧ ಮಠಗಳ ಮಠಾಧೀಶರ ಸಮ್ಮುಖದಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಬೆಳಗಾವಿ ಸಮಾವೇಶಕ್ಕೆ ತಿರುಗೇಟು: ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಆಗ್ರಹಿಸಿ ಮಂಗಳವಾರ ಬೆಳಗಾವಿಯಲ್ಲಿ ನಡೆಸಿದ ಸಮಾವೇಶದ ಆಯೋಜಕರಿಗೆ ತಿರುಗೇಟು ನೀಡಿರುವ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮಿ, ಹೆಚ್ಚು ಜನರನ್ನು ಸೇರಿಸಿದ ಮಾತ್ರಕ್ಕೆ ನಿಮಗೆ ಜಯ ಸಿಕ್ಕಿದೆ ಎಂಬ ಭ್ರಮೆಯಲ್ಲಿರಬೇಡಿ ಎಂದಿದ್ದಾರೆ.
ಸ್ವತಂತ್ರ ಧರ್ಮದ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿರುವವರು ವಿವೇಚನೆ ಮಾಡುವುದು ಉತ್ತಮ. ವೀರಶೈವ ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮವೆಂದು ಘೋಷಿಸಲು ಅವಕಾಶವೇ ಇಲ್ಲ ಎಂದು ಕಾನೂನು ತಜ್ಞರೆ ಸ್ಪಷ್ಟಣೆ ನೀಡಿದ್ದಾರೆ. ಈಗಿರುವ ಧರ್ಮದಲ್ಲೇ ಮುಂದುವರೆಯಬೇಕೆ ಹೊರತು, ಹೊಸ ಧರ್ಮದ ಆಪೇಕ್ಷೆ ಪಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಮಾವೇಶವು ವೀರಶೈವ ಲಿಂಗಾಯತರ ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ. ನಮ್ಮನ್ನು ಬೇರ್ಪಡಿಸಲು ಕೆಲವು ಸ್ವಾರ್ಥ ಸಾಧಕರು ಪ್ರಯತ್ನಪಡುತ್ತಿದ್ದಾರೆ. ಅವರ ಪ್ರಯತ್ನಗಳನ್ನು ವಿಫಲಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಿದೆ ಎಂದು ವಿವಿಧ ಮಠಗಳ ಮಠಾಧೀಶರಿಗೆ ಅವರು ಕರೆ ನೀಡಿದರು.
ವಿಭೂತಿಪುರ ಮಠದ ಮಹಾಂತ ಶಿವಾಚಾರ್ಯ ಸ್ವಾಮಿ ಮಾತನಾಡಿ, ಸಮಾಜದಲ್ಲಿ ಉಂಟಾಗಿರುವ ಸಮಸ್ಯೆಯಿಂದಾಗಿ ಗುರು ವಿರಕ್ತ ಪೀಠಗಳು ಒಂದಾಗಿವೆ. ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಸಂಪಾದಿಸಿರುವ ವಚನ ಸಂಪುಟದಲ್ಲೆ ಶಿವಶರಣರು, ವೀರಶೈವ ಪದ ಬಳಕೆಯಾಗಿದೆ. ಬಸವಣ್ಣನವರೂ ನಾಲ್ಕು ಬಾರಿ ವೀರಶೈವ ಪದ ಬಳಕೆ ಮಾಡಿದ್ದಾರೆ ಹೊರತು ಲಿಂಗಾಯತ ಪದ ಬಳಕೆ ಮಾಡಿಲ್ಲ ಎಂದರು.
ಸುಪ್ರೀಂಕೋರ್ಟ್ ಎಲ್ಲೂ ಲಿಂಗಾಯತ ಸ್ವತಂತ್ರ ಧರ್ಮ ಎಂದು ತೀರ್ಪು ನೀಡಿಲ್ಲ. ಆದರೆ, ಕೆಲವು ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ವೀರಶೈವ ಲಿಂಗಾಯತ ಧರ್ಮದ ಬಗ್ಗೆ ಉಲ್ಲೇಖಿಸಿದ್ದಾರೆ. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೆ. ಆದುದರಿಂದ, ಈ ಎರಡು ಪರಂಪರೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕುಮಾರ ಮಹಾಂತ ಶಿವಯೋಗಿ ಸ್ವಾಮಿ ಮಾತನಾಡಿ, ಮಾತೆ ಮಹಾದೇವಿ ವೀರಶೈವರು ನಪುಂಸಕರು ಎನ್ನುತ್ತಾರೆ. ಬ್ರಹ್ಮಚಾರಿಣಿಯಾದ ಇವರಿಗೇನು ಗೊತ್ತು. ಯಾರು ನಪುಂಸಕರು, ಯಾರು ನಪುಂಸಕರಲ್ಲವೆಂದು. ಹಾನಗಲ್ ಕುಮಾರಸ್ವಾಮಿಗಳ ಪಾದದ ಧೂಳಿಗೂ ಮಾತೆ ಮಹಾದೇವಿ ಸಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾತೆ ಮಹಾದೇವಿ ಮಾತಿಗೆ ನಾವು ಗಮನಕೊಡಬೇಕಿಲ್ಲ. ಕೆಲವು ರಾಜಕಾರಣಿಗಳು ಮತ್ತು ಮಠಾಧೀಶರು ತಮ್ಮ ಸ್ವಾರ್ಥಕ್ಕೆ ಸಮಾಜವನ್ನು ಒಡೆಯುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದು ಅಸಲಿ ಸ್ವಾಮೀಜಿಗಳ ಸಮಾವೇಶ, ಅವರದ್ದು ನಕಲಿ ಸ್ವಾಮೀಜಿಗಳ ಸಮಾವೇಶ. ಅವರು ಜೋಳಿಗೆಗಾಗಿ ಇರುವ ಸ್ವಾಮೀಜಿಗಳು, ನಾವು ಧರ್ಮ ರಕ್ಷಣೆಗಾಗಿ ಇರುವ ಸ್ವಾಮೀಜಿಗಳು ಎಂದು ಎಮ್ಮಿಗನೂರು ಸ್ವಾಮಿ ಹೇಳಿದರು.
ಸಚಿವರ ವಿರುದ್ಧ ಆಕ್ರೋಶ: ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಇನ್ನಿತರ ಸಚಿವರು ಪ್ರಯತ್ನಿಸುತ್ತಿದ್ದಾರೆ ಎಂದು ಸಮಾವೇಶದಲ್ಲಿ ಹಲವು ಮಠಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಮಾವೇಶದಲ್ಲಿ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿ, ಕಾಶಿ ಜ್ಞಾನ ಸಿಂಹಾಸನ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ, ಕೊಳದಮಠದ ಸ್ವಾಮಿ, ಮುಂಡರಗಿ ಅನ್ನದಾನ ಸ್ವಾಮಿ, ಚವಳಿ ಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಮುಖ್ಯಮಂತ್ರಿಗೆ ಮನವಿ
ವೀರಶೈವ ಲಿಂಗಾಯತ ಸಮಾಜವನ್ನು ಪ್ರತ್ಯೇಕಗೊಳಿಸುವ ತೀರ್ಮಾನವನ್ನು ರಾಜ್ಯ ಸರಕಾರ ಕೈಗೊಳ್ಳಬಾರದೆಂಬ ವೀರಶೈವ ಪಂಚಪೀಠಾಧ್ಯಕ್ಷರ ಮನವಿ ಪತ್ರವನ್ನು 15 ವಿವಿಧ ಮಠಗಳ ಶಾಖಾ ಮಠಾಧೀಶರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಸಲ್ಲಿಸಿತು.







