ಕೋಟೆಕಾರು ಶೃಂಗೇರಿ ಮಠದಲ್ಲಿ ಗೌರಿ ಪೂಜೆ
ಉಳ್ಳಾಲ, ಆ. 24: ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠಂ, ಶೃಂಗೇರಿಯ ಕೋಟೆಕಾರು ಶಾಖೆಯಲ್ಲಿ ಗುರುವಾರ ಗೌರಿ ಹಬ್ಬದ ಪ್ರಯುಕ್ತ ಗೌರಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಗುರುವಾರ ನಡೆಯಿತು.
ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್ಯ ಮರಾಠ ಸಮಾಜ ಸಂಘದ ಮಂಗಳೂರು, ಕಾಸರಗೋಡುವಿನ ಉಪಾಧ್ಯಕ್ಷ ನಾಗೇಶ್ವರ ರಾವ್ ಪವಾರು ಅವರು, ಹಿಂದೂ ಧರ್ಮ ಸಂಸ್ಕೃತಿಯಲ್ಲಿ ಮಾತೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಅದರಲ್ಲೂ ಕೋಟೆಕಾರಿನ ಶೃಂಗೇರಿ ಮಠದ ಶಾಖೆಯಲ್ಲಿ ಗೌರಿ ಪೂಜೆಯನ್ನು ರಾಜ್ಯಕ್ಕೆ ಮಾದರಿಯೆಂಬಂತೆ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಇಡೀ ದೇಶವನ್ನೇ ಅನೇಕ ಬಾರಿ ಕಾಲ್ನಡಿಗೆಯಲ್ಲೇ ಸಂಚರಿಸಿದ ಶಂಕರಾಚಾರ್ಯರು ತನ್ನ ಮೊದಲ ಮಠವನ್ನು ಶೃಂಗೇರಿಯಲ್ಲಿ ಸ್ಥಾಪಿಸಿದ್ದು ಕರ್ನಾಟಕವಾಸಿಗಳೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.
ಕೋಟೆಕಾರು ಶೃಂಗೇರಿ ಮಠದ ಶಾಖೆಯ ಧರ್ಮಧರ್ಶಿ ಸತ್ಯಶಂಕರ ಬೊಳ್ಳಾವ ಮಾತನಾಡಿ ಜಗದ್ಗುರು ಶಂಕರಾಚಾರ್ಯರು ತಾಯಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು ಎಂಬುದಕ್ಕೆ ಅವರ ತಾಯಿಯು ಮರಣ ಹೊಂದಿದಾಗ ಕಟ್ಟುಪಾಡುಗಳನ್ನು ತೊರೆದು ಸ್ವತ: ತಾವೇ ತಾಯಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದುದೇ ನಿದರ್ಶನವಾಗಿದೆ.ಆಚಾರ್ಯರ ಮುಂದೆ ಜಾತಿಗಳ ಭೇಧ ಇರುವುದಿಲ್ಲ. ಎಲ್ಲರೂ ಸಚ್ಚಿದಾನಂದ ರೂಪಿಗಳೆಂದು ಸಾರುವ ಅವರ ತತ್ವಗಳಿಗನ್ವಯವಾಗಿ ಮಠದ ಶಾಖೆಯಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿ ಗೌರೀ-ಗಣೇಶ ಹಬ್ಬವನ್ನು ಆಚರಿಸಿಕೊಂಡು ಬಂದಿರುವುದಾಗಿ ತಿಳಿಸಿದರು.
ಮಂಗಳೂರು ಪ್ರಮೋದ್ ಆಟೋ ಮೊಬೈಲ್ಸ್ ಮಾಲಕರಾದ ಲ.ಹರ್ಷಕುಮಾರ್ ಕೇದಗೆ ಮತ್ತು ಶ್ರೀಮತಿ ಕನಕವಲ್ಲಿ ಹೆಚ್.ಕೇದಗೆ ದಂಪತಿಗಳು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗೌರಿ-ಗಣೇಶ ಉತ್ಸವ ಸಮಿತಿ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಆನೆಗುಂದಿ ಮಹಾಸಂಸ್ಥನಂನ ಶ್ರೀ ಸರಸ್ವತೀ ಪೀಠದ ಗೌರವಾಧ್ಯಕ್ಷರಾದ ಕೆ.ಕೇಶವ ಆಚಾರ್ಯ, ನ್ಯಾಯವಾದಿಗಳಾದ ಅನಿಲ್ ಬೇಕಲ್, ಸಹನಾ ಎಸ್.ಕೆ, ಕುಮಾರ ಕ್ಷತ್ರಿಯ ಕೇಂದ್ರ ಸಮಿತಿ ಹೊಸದುರ್ಗದ ಅಧ್ಯಕ್ಷರಾದ ಕೆ.ಭಾಸ್ಕರ, ಪನಿಯಾಲ ಒಕ್ಕಲಿಗ ಸಮಾಜದ ನಿರ್ದೇಶಕರಾದ ವಾಸುದೇವ ಪನಿಯಾಳ, ಉತ್ಸವ ಸಮಿತಿ ಕೋಶಾಧಿಕಾರಿ ಡಾ.ಮಾಧವಿ ವಿಜಯ್ ಕುಮಾರ್, ಪ್ರದಾನ ಕಾರ್ಯದರ್ಶಿ ಕೆ.ಸೀತಾರಾಮ ಮೊದಲಾದವರು ಉಪಸ್ಥಿತರಿದ್ದರು.