ಪರಿಸರ ಸಂರಕ್ಷಣೆಗಾಗಿ ವಿಶೇಷ ಅಭಿಯಾನ
‘ವೃಕ್ಷ ಸೇವೆ’ಯ ಗಣೇಶೋತ್ಸವ!
ಮಂಗಳೂರು, ಆ.26: ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಉರ್ವಾಸ್ಟೋರ್ನ ಗಣಪತಿ ದೇವಸ್ಥಾನದಲ್ಲಿ ಈ ಬಾರಿಯ ಚೌತಿಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್ಇಸಿಎಫ್)ದ ವತಿಯಿಂದ ದೇವರಿಗೆ ವಿಶೇಷ ವೃಕ್ಷ ಸೇವೆಗೆ ಭಕ್ತರಿಗೆ ಅವಕಾಶ ಕಲ್ಪಿಸುವ ಮೂಲಕ ವಿನೂತನವಾಗಿ ಪರಿಸರ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ದೇವಾಲಯದ ಸೇವಾ ಕೌಂಟರ್ನಲ್ಲಿ 50 ರೂ. ವೃಕ್ಷ ಸೇವಾ ರಶೀದಿಯನ್ನು ಮಾಡಿಸಿ ನಂತರ ದೇವಸ್ಥಾನದ ಸುತ್ತಲಿನ ವಠಾರದಲ್ಲಿ ಕದಂಬ, ಗಂಧ, ಚಂದನ, ಬಂಟ ಕೇಪ್ಳ, ಅತ್ತಿ, ಅಶೋಕ, ಆಲ, ಪುನರ್ಪುಳಿ, ದಾಲ್ಚಿನ್ನಿ, ಹುಣಸೆ, ರಾಮಪತ್ರ, ಬಿಲ್ವ, ಚೆರಿ, ಕಿರಾಲ್ಬೋಗಿ, ಸಂಪಿಗೆ, ಹೊನ್ನೆ, ಹೆಬ್ಬಲಸು, ಹಲಸು, ಮಾವು, ದೂಪ, ನಾಗಸಂಪಿಗೆ ಸೇರಿದಂತೆ ಸುಮಾು 75 ಗಿಡಗಳನ್ನು ನೆಡಲಾಯಿತು,
ಭಕ್ತರು ನೆಟ್ಟ ಗಿಡಗಳಿಗೆ ಅವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಯನ್ನು ಬರೆದು ಅವರವರು ನೆಟ್ಟ ಗಿಡಗಳಿಗೆ ಟ್ಯಾಗ್ ಮಾಡಲಾಯಿತು ಹಾಗೂ ಬೇಸಿಗೆಯಲ್ಲಿ ಅವರವರು ನೆಟ್ಟ ಗಿಡಗಳಿಗೆ ದೇವಸ್ಥಾನಕ್ಕೆ ಬರುವಾಗ ನೀರನ್ನು ಹಾಕಿ ಸಲುವಂತೆಯೂ ಸೂಚನೆ ನೀಡಲಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಓದಿ ಈ ರೀತಿಯಲ್ಲಿಯೂ ದೇವರ ಸೇವೆ ಮಾಡಬಹುದು ಎಂದು ಮನಗಂಡು ದೇವರ ಸನ್ನಿಧಿಯಲ್ಲಿ ಗಿಡ ನೆಟ್ಟು ಬೆಳೆಸಲು ಬೆಳಿಗ್ಗೆ 8 ಗಂಟೆಗೆ ಗಣಪತಿ ದೇವಸ್ಥಾನದ ಎದುರು ಭಕ್ತರು ಉತ್ಸಾಹದಿಂದ ಸೇರಿದ್ದರು. ಕೆಲವರು ಪ್ರಸಾದ ರೂಪದಲ್ಲಿ ತಮಗೆ ಇಷ್ಟವಾದ ಗಿಡಗಳನ್ನು ಕೂಡಾ ಮನೆಗೆ ಒಯ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಖ್ಯಾತ ಕಟ್ಟಡ ವಿನ್ಯಾಸಗಾರ ಬಾಬಾ ಅಲಂಕಾರ್ - ಈ ರೀತಿಯ ಸೇವೆ ದೇವಸ್ಥಾನ, ಮಸೀದಿ, ಚರ್ಚ , ಸೇರಿದಂತೆ ಎಲ್ಲಾ ಧಾರ್ಮಿಕ ಕ್ಷೇತ್ರಳಲ್ಲಿ ನಡೆಯುವಂತಾಗಲಿ ಎಂದರು.
ದೇವಸ್ಥಾನದ ಆಡಳಿತ ಮಂಡಳಿಯು ಈ ವಿನೂತನ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದು, ಕಾರ್ಯಕ್ರಮದಲ್ಲಿ ಎನ್ಇಸಿಎಫ್ ಅಧ್ಯಕ್ಷ ಸ್ವರ್ಣ ಸುಂದರ್, ಉಪಾಧ್ಯಕ್ಷ ಕಲಾವತಿ ಪದ್ಮನಾಭ, ಕೋಶಾಧಿಕಾರಿ ನಾರಾಯಣ ಬಂಗೇರ, ಜಿಲ್ಲಾ ಅಧ್ಯಕ್ಷ ರತ್ನಾಕರ್, ಸುವರ್ಣ, ಜಿಲ್ಲಾ ಕಾರ್ಯದರ್ಶಿ ಶ್ರೀಪತಿ ಆಚಾರ್ಯ, ಸಲಹೆಗಾರ ದಿನೇಶ್ ಹೊಳ್ಳ, ನರೇಂದ್ರ ಅಂಚನ, ಧವನ್ ಕುಮಾರ್, ಜೀವನ್ ದಾಸ್ ಶೆಟ್ಟಿ, ಸುರೇಶ್ ಶೆಟ್ಟಿ, ಶಂಕರನಾರಾಯಣ ಮುಂತಾದವರು ಉಪಸ್ಥಿತರಿದ್ದರು.
ಎನ್ಇಸಿಎಫ್ ರಾಜ್ಯ ಕಾರ್ಯದರ್ಶಿ ಎಚ್. ಶಶಿಧರ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.