ರಘು ರೈ
![ರಘು ರೈ ರಘು ರೈ](https://www.varthabharati.in/sites/default/files/images/articles/2017/08/26/raghu rai.jpg)
ಭಾರತದ ಅಗ್ರಗಣ್ಯ ಛಾಯಾಗ್ರಾಹಕರಲ್ಲಿ ಒಬ್ಬರು ರಘು ರೈ. 1965ರಲ್ಲಿ ಪ್ರಾರಂಭವಾದ ಅವರ ಛಾಯಾಗ್ರಹಣ ಭಾರತದ ಅತಿಮುಖ್ಯ ಸಾಮಾಜಿಕ ಹಾಗೂ ರಾಜಕೀಯ ಮಜಲುಗಳನ್ನು ದಾಖಲಿಸಿದೆ. ಪದ್ಮಶ್ರೀ ಪುರಸ್ಕೃತರಾದ ರಘು ರೈ ಕಳೆದ 5 ದಶಕಗಳ ಭಾರತವನ್ನು ನಮಗೆ ಬಹಳ ಆಸಕ್ತಿದಾಯಕ ಹಾಗೂ ಅರ್ಥಪೂರ್ಣ ಫೋಟೊಗಳ ಮೂಲಕ ಕೊಟ್ಟಿದ್ದಾರೆ. ಅವರದ್ದೇ ಮಾತುಗಳಲ್ಲಿ ಅವರು ತೆಗೆದ ಕೆಲವು ಫೋಟೊಗಳ ಹಿನ್ನೆಲೆ ಹಾಗೂ ಫೋಟೊಗಳನ್ನು ಇಲ್ಲಿ ನೋಡಬಹುದು.
ನಾನು ಇಂದಿರಾ ಗಾಂಧಿ ಪ್ರಧಾನಿಯಾದ ನಂತರದಿಂದ, ಅಂದರೆ 1967ರಿಂದ, ಇಂದಿರಾ ಗಾಂಧಿ ಅವರ ಫೋಟೊಗಳನ್ನು ಸಾಕಷ್ಟು ತೆಗೆದಿದ್ದೇನೆ. ಮುಂದೆ ಯಾವುದೋ ಒಂದು ದಿನ, ಈಕೆ ಯಾರೆಂದು ತಿಳಿಯದ, ಎಂತಹ ಗಟ್ಟಿ ಮಹಿಳೆಯಾಗಿದ್ದರು ಎಂದು ಅರಿಯದವರಿಗೆ ಈ ಫೋಟೊಗಳು.
ಅವುಗಳ ಮೂಲಕ ಏನೊ ಒಂದು ತಿಳಿಸಬಹುದೆಂಬುದು ನನ್ನ ಆಶಯವಾಗಿತ್ತು. ಆಗ ನಾನು, ನನಗೇ ಕೇಳಿಕೊಳ್ಳುತ್ತಿದ್ದ ಪ್ರಶ್ನೆಯೆಂದರೆ: ಈ ಫೋಟೊ ಕಾಲದ ಪರೀಕ್ಷೆಯನ್ನು ದಾಟಬಲ್ಲದೇ? ಎಂದು,.
ಇಂದಿರಾ ಗಾಂಧಿಯವರಿಗೆ ಹಿಮಾಲಯವೆಂದರೆ ಬಹಳ ಪ್ರೀತಿ. ಒಮ್ಮೆ ಅವರು ಶಿಮ್ಲಾದಲ್ಲಿದ್ದಾಗ ಅವರ ಫೋಟೊ ತೆಗೆಯಲು ಅನುಮತಿ ಕೇಳಿದೆ. ಅವರ ಸೆಕ್ರೆಟರಿಯಾದ ಶಾರದಾ ಪ್ರಸಾದ್ ಬಹಳ ಒಳ್ಳೆಯ ವ್ಯಕ್ತಿ. ಅವರು ಒಂದು ಫೋಟೊ ಸೆಷನ್ನನ್ನು ಏರ್ಪಾಡು ಮಾಡಿದರು. ಇಂದಿರಾರವರು ಹುಲ್ಲು ಹಾಸಿನ ಮೇಲೆ ನಡೆಯುತ್ತಿದ್ದಾಗ ನಾನು ಫೋಟೊ ತೆಗೆದೆ. ಆದರೆ ಸ್ವಲ್ಪ ಸಮಯದ ನಂತರ ನಿಲ್ಲಿಸಿದೆ. ಆಗ ಅವರು ಹಿಂದಿರುಗಿ ‘ಕ್ಯಾ ಹುವಾ’ ? (ಏನು ಆಯಿತು) ಎಂದು ಕೇಳಿದರು.
‘ಯಾಕೊ ಫೋಟೊ ಸರಿಯಾಗಿ ಬರುತ್ತಿಲ್ಲ’ ಎಂದೆ.
‘ಏನು ಮಾಡಬೇಕು ?’ ಎಂದರು.
ಹಿಮಾಲಯದ ದೃಶ್ಯಕ್ಕೆ ಅಡ್ಡವಾಗಿದ್ದ ಒಂದು ಕಲ್ಲಿನ ಕಟ್ಟೆಯ ಮೇಲೆ ನಿಂತುಕೊಳ್ಳುತ್ತೀರಾ, ಫೋಟೊ ತೆಗೆಯುವೆ ಎಂದೆ. ಚೇರು ತರಿಸಿ, ಅದರ ಮೇಲೆ ನಿಂತರು. ಆಗ ಈ ಫೋಟೊ ತೆಗೆದೆ. ಈ ಫೋಟೊ ನನಗೇಕೆ ಚೆಂದವೆನಿಸುತ್ತದೆ ಎಂದರೆ, ಇಂದಿರಾ ಅವರು ತಮ್ಮ ಕೈಗಳನ್ನು ಒಂದು ರೀತಿಯ ಮುದ್ರೆಯಲ್ಲಿ ಇಟ್ಟುಕೊಂಡಿದ್ದಾರೆ.
1970ರಲ್ಲಿ ನಾನು ಮದರ್ ತೆರೇಸಾರನ್ನು ಮೊದಲ ಬಾರಿಗೆ ಭೇಟಿಯಾದೆ. ದಿ ಸ್ಟೇಟ್ಸ್ಮೆನ್ ಪತ್ರಿಕೆಯ ಸಂಪಾದಕರಾದ ಡೆಸ್ಮಂಡ್ ಡೈಗ್ ಅವರು ಕೋಲ್ಕತಾದಿಂದ ಫೋನು ಮಾಡಿ, ನಾನೊಬ್ಬ ಮಹಾ ವ್ಯಕ್ತಿಯನ್ನು ಭೇಟಿಮಾಡಿದೆ, ನೀನೂ ಅವರನ್ನು ಭೇಟಿಯಾಗಿ ಅವರ ಚಿತ್ರಗಳನ್ನು ತೆಗೆಯಬೇಕು ಎಂದರು. ಇದು ನಾನು ಮೊದಮೊದಲು ತೆಗೆದ ಮದರ್ ತೆರೇಸಾ ಅವರ ಚಿತ್ರ. ಅಲ್ಲಿಂದ ಪ್ರಾರಂಭವಾಗಿ, ನಾನು ಅವರಿರುವರೆಗೂ ಅವರೊಡನೆ ಒಡನಾಡುತ್ತಲೇ ಇದ್ದೆ.
ಫೋಟೊ ಪಾಯಿಂಟ್ ಉಷ .ಬಿ.ಎನ್.