ಸುಲಿಗೆ ಪ್ರಕರಣ: ರೌಡಿ ನಾಗೇಶ್ ಬಂಧನ
ಬೆಂಗಳೂರು, ಆ.26: ಕೊಲೆಯತ್ನ, ಸುಲಿಗೆ, ಬೆದರಿಕೆ, ಮನೆಗಳ್ಳತನ ಸೇರಿ 24ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ರೌಡಿ ನಾಗೇಶ್ನನ್ನು ಗುಂಡು ಹಾರಿಸಿ ಇಲ್ಲಿನ ಎಚ್ಎಎಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗುಂಡೇಟಿನಿಂದ ಎಡಗಾಲಿಗೆ ಗಾಯಗೊಂಡಿರುವ ರೌಡಿ ನಾಗೇಶ್ (23) ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಮನಗರ ಮೂಲದ ನಾಗೇಶ್, ಮನೆಗಳ್ಳತನವೊಂದರಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ 15 ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಮತ್ತೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಜೀವನ್ ಭಿಮಾನಗರದಲ್ಲಿ ಬೈಕ್ವೊಂದನ್ನು ಕಳವು ಮಾಡಿದಲ್ಲದೆ, ಆ.22ರಂದು ರಾತ್ರಿ ಎಚ್ಎಎಲ್ ಮಾರುಕಟ್ಟೆ ಬಳಿ ಕಾರಿನಲ್ಲಿ ಹೋಗುತ್ತಿದ್ದ ಸಾಫ್ಟ್ವೇರ್ ಇಂಜಿನಿಯರ್ ರಾಘವೇಂದ್ರ ಎಂಬುವರ ಕಾರಿಗೆ ಢಿಕ್ಕಿ ಹೊಡೆದು, ಚಿನ್ನದ ಸರ ದೋಚಿ ಪರಾರಿಯಾಗಿದ್ದ ಎನ್ನಲಾಗಿದೆ.
ಎಚ್ಎಎಲ್ ಪೊಲೀಸ್ ಇನ್ ಸ್ಪೆಪೆಕ್ಟರ್ ಸಾದಿಕ್ ಪಾಶಾ ನೇತೃತ್ವದ ತಂಡ, ಶುಕ್ರವಾರ ಮಧ್ಯಾಹ್ನ ನಾಗೇಶ್, ಲಾಲ್ ಬಹದ್ದೂರ್ ಶಾಸ್ತ್ರಿನಗರದ ಬಿಇಎಂಎಲ್ ಕಲ್ಯಾಣಮಂಟಪದ ಬಳಿ ಅಡಗಿರುವ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದೆ.ಪೊಲೀಸರನ್ನು ನೋಡಿದ ತಕ್ಷಣ ಓಡಲು ಯತ್ನಿಸಿದ ನಾಗೇಶ್ನನ್ನು ಹಿಡಿಯಲು ಪೇದೆಗಳಾದ ಕಾಂತರಾಜು ಹಾಗೂ ರವಿಚಂದ್ರ ಮುಂದಾದಾಗ ಅವರ ಮೇಲೆ ಲಾಂಗ್ನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಹಲ್ಲೆಯಿಂದ ಕಾಂತರಾಜ್ ಅವರ ಕೈಗೆ ಗಾಯವಾಗಿದೆ. ಕೂಡಲೇ ಇನ್ಸ್ಪೆಕ್ಟರ್ ಸಾದಿಕ್ ಪಾಶಾ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರೂ, ಲೆಕ್ಕಿಸದ ನಾಗೇಶ್, ಓಡುತ್ತಿದ್ದು, ಮತ್ತೊಂದು ಗುಂಡು ಹಾರಿಸಿದ್ದಾರೆ. ಅದು ಆತನ ಎಡಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ಆತನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈಟ್ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಮಾಹಿತಿ ನೀಡಿದ್ದಾರೆ.
ರೌಡಿ ನಾಗೇಶ್, ಬಾರ್ಬೆಂಡಿಂಗ್ ಕೆಲಸ ಬಿಟ್ಟು ಕೊಲೆಯತ್ನ, ಸುಲಿಗೆ, ಗಲಭೆ, ಮನೆ ಕಳವು ಇನ್ನಿತರ 24ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಎಚ್ಎಎಲ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ ಎಂದು ಮೂಲಗಳು ತಿಳಿಸಿವೆ.







