ಕನ್ನಡ ಸಾಹಿತ್ಯಲೋಕದ ಬೆರಗು 'ಡಾ.ಎಲ್. ಬಸವರಾಜು'
![ಕನ್ನಡ ಸಾಹಿತ್ಯಲೋಕದ ಬೆರಗು ಡಾ.ಎಲ್. ಬಸವರಾಜು ಕನ್ನಡ ಸಾಹಿತ್ಯಲೋಕದ ಬೆರಗು ಡಾ.ಎಲ್. ಬಸವರಾಜು](https://www.varthabharati.in/sites/default/files/images/articles/2017/08/26/Basavaraju.jpg)
ಡಾ. ಎಲ್. ಬಸವರಾಜು ಅವರ ಪಾಂಡಿತ್ಯಕ್ಕೆ ಪರಿಶ್ರಮಕ್ಕೆ ಗಡಿಗೆರೆಗಳಿಲ್ಲ. ಕಾವ್ಯಗಳ ಸಂಶೋಧನೆ ಮಾಡಿದಷ್ಟೇ ಪ್ರೀತಿಯಿಂದ ಹಾಗೂ ಶ್ರದ್ಧೆಯಿಂದ ಶಾಸ್ತ್ರಗ್ರಂಥಗಳನ್ನು ಸಂಪಾದಿಸಿದ್ದಾರೆ. ನಾಗವರ್ಮನ ‘‘ಛಂದೋಂಬುಧಿ’’, ಈಶ್ವರನ ‘‘ಕವಿ ಜಿಹ್ವಾಬಂಧನ’’, ಗುಣಚಂದ್ರನ ‘‘ಛಂದಸ್ಸಾರ’’, ವೀರಭದ್ರನ ‘‘ನಂದಿ ಛಂದೋರ್ಣವ’’ ಈ ನಾಲ್ಕು ಗ್ರಂಥಗಳನ್ನು ಸಾಂಗವಾಗಿ ಪರಿಷ್ಕರಿಸಿ ‘‘ಕನ್ನಡ ಛಂದಸ್ಸಂಪುಟ’’ವನ್ನಾಗಿ ಸಂಪಾದಿಸಿದ್ದಾರೆ.
ಕೋಲಾರ ಜಿಲ್ಲೆಯು ಮೂರು ಕಾರಣಗಳಿಗಾಗಿ ಪ್ರಸಿದ್ಧಿಯಾಗಿದೆ. ಒಂದು, ಸದಾ ಕಾಡುತ್ತಿರುವ ಬರ; ಎರಡು, ಚಿನ್ನದ ಗಣಿ; ಮೂರು, ಡಾ.ಎಲ್.ಬಸವರಾಜು ಅವರು. ಸದಾ ಬರಗಾಲಕ್ಕೆ ತುತ್ತಾದ ಪ್ರದೇಶದ ಜನರಿಗೆ ನಿಸರ್ಗವೇ ಹಿಡಿದ ಕೆಲಸವನ್ನು ಬಿಡದ ಜಿಗುಟುತನ ಮತ್ತು ವಿರೋಧಗಳನ್ನು ಎದುರಿಸುವ ಎದೆಗಾರಿಕೆಯನ್ನು ಕಲಿಸುತ್ತದೆ ಎಂಬುದೊಂದು ಮಾತಿದೆ. ಈ ಮಾತಿಗೆ ಶ್ರೇಷ್ಠ ನಿದರ್ಶನವೇ ಡಾ.ಎಲ್. ಬಸವರಾಜು ಅವರು.
ಬರಪ್ರದೇಶದ ಗಟ್ಟಿಗತನವನ್ನೂ, ಗಣಿಗಾರರ ಶ್ರಮ ಸಹಿಷ್ಣುತೆಯನ್ನೂ, ಭೂವಿಜ್ಞಾನಿಯ ಆಳವಾದ ಚಿಕಿತ್ಸಕ ನೋಟವನ್ನೂ ಮೈಗೂಡಿಸಿಕೊಂಡಿರುವ ಬಸವರಾಜು ಅವರು 1919ರ ಅಕ್ಟೋಬರ್ 5 ರಂದು ಗೌರಿಬಿದನೂರು ತಾಲೂಕಿನ ಇಡಗೂರು ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು, ಸಿದ್ದಗಂಗೆಯಲ್ಲಿ ಪ್ರೌಢ ಶಿಕ್ಷಣವನ್ನು, ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಗಳಿಸಿದರು. ಕೆಲಕಾಲ ದಾವಣಗೆರೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ಮೈಸೂರಿಗೆ ವರ್ಗವಾಗಿ ಬಂದ ನಂತರ ಅಲ್ಲಿಯೇ ನೆಲೆಯೂರಿದರು.
ವಿದ್ಯಾರ್ಥಿ ಜೀವನದಲ್ಲಿ ಮತ್ತು ವೃತ್ತಿಜೀವನದಲ್ಲಿ ಹಲವಾರು ಪ್ರತಿಕೂಲ ಪರಿಸ್ಥಿತಿಗಳನ್ನು ಉದ್ದಕ್ಕೂ ಎದುರಿಸಿ ಬದುಕನ್ನು ರೂಪಿಸಿಕೊಂಡು, ವಾಮಮಾರ್ಗಗಳನ್ನು ತುಳಿಯದೆ ಯಶಸ್ವಿ ಸಂಶೋಧಕರಾಗಿ ಬೆಳೆದ ಬಸವರಾಜು ಅವರು ಒಂದು ಬೆರಗು. ಸುಮಾರು 40 ವರ್ಷಗಳ ದೀರ್ಘಕಾಲ ಸಂಶೋಧನಾ ಜಗತ್ತಿನಲ್ಲಿ ಒಂಟಿ ಸಲಗದಂತೆ ವಿಹರಿಸಿದ ಬಸವರಾಜು ಅವರು 75ನೆ ಇಳಿವಯಸ್ಸಿನಲ್ಲಿ ಕವಿತೆಗಳನ್ನು ಬರೆದು ಕನ್ನಡ ಸಾಹಿತ್ಯಲೋಕವನ್ನು ಚಕಿತಗೊಳಿಸಿದರು.
‘‘ಅವರೇ ಒಂದೆಡೆ ನನ್ನ ಒಳಗಿನ ನಿಜ ದನಿಯನ್ನು ಹೇಳಿಕೊಳ್ಳಲು ಬೇರೆ ಮಾಧ್ಯಮ ಬೇಕು ಎನಿಸಿತು. ಆದ್ದರಿಂದ ಪದ್ಯ ಬರೆಯಲು ಕುಳಿತೆ. ನನಗೆ ವಿಸ್ಮಯ ಅನಿಸುವಂತೆ ಕಾವ್ಯ ಎನ್ನುವ ಕನ್ಯೆ ಮುದುಕನಾದ ನನ್ನನ್ನು ಆಲಂಗಿಸಿಕೊಂಡಳು. ಈಗ ಅವಳ ತೆಕ್ಕೆಯಲ್ಲಿ ನಾನು ಬಂದಿಯಾಗಿದ್ದೇನೆ’’ ಎಂದು ಹೇಳುತ್ತಾರೆ.
ಜೈನ ಸಾಹಿತ್ಯ ಸಂಶೋಧನೆ: ಕನ್ನಡ ಸಾಹಿತ್ಯಲೋಕ ಕಂಡ ಅಪರೂಪದ ವಿದ್ವಾಂಸ ಹಾಗೂ ಅಪ್ರತಿಮ ಪ್ರತಿಭಾವಂತ ಸಂಶೋಧಕರಲ್ಲಿ ಡಾ. ಎಲ್. ಬಸವರಾಜು ಒಬ್ಬರು. ಸುಮಾರು 50 ವರ್ಷಗಳ ಕಾಲ ಅವರು ಸಂಶೋಧನೆಯಲ್ಲಿ ಶ್ರಮವರಿಯದೆ ದುಡಿದಿದ್ದಾರೆ; ಆದಿಕವಿ ಪಂಪನ ಆದಿಪುರಾಣದಿಂದ ಹಿಡಿದು, ಪೂಜ್ಯ ಶರಣಬಸಪ್ಪ ಅಪ್ಪಾ ಅವರ ‘ದಾಸೋಹ ಸೂತ್ರಗಳ’ವರೆಗೆ ಇವರ ಸಂಶೋಧನೆ ವ್ಯಾಪಿಸಿದೆ. ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯಗಳ ಸಂಪಾದನೆ ಅತ್ಯಂತ ವಿಶಿಷ್ಟವಾದುದು, ವಿನೂತನವಾದುದೆಂದು ವಿದ್ವಾಂಸರು ಹೇಳಿದ್ದಾರೆ.
ಪಂಪನ ಈ ಎರಡೂ ಕೃತಿಗಳ ಸಂಪಾದನೆ ಮಾಡುವಾಗ ಬಸವರಾಜು ಅವರಿಗೆ ಆದ ಅನುಭವ ‘‘ಸರಳ ಪಂಪ ಭಾರತ’’ ಮತ್ತು ‘‘ಪಂಪ ಭಾರತ ಕಥಾಮೃತ’’ ಕೃತಿಗಳ ರಚನೆಗೆ ಕಾರಣವಾಯಿತು. ಈ ಎರಡು ಕೃತಿಗಳನ್ನು ಓದಿ ಸಾಮಾನ್ಯ ಓದುಗನು ಹಳಗನ್ನಡ ಕಾವ್ಯದ ಸವಿಯನ್ನು ಸವಿಯುವುದು ಸಾಧ್ಯವಾಯಿತು.
ವಚನ ಸಾಹಿತ್ಯ ಸಂಶೋಧನೆ: ವಚನ ಸಾಹಿತ್ಯವನ್ನು ಸಂಶೋಧಿಸಿ, ಸಂಪಾದಿಸಿ ಪ್ರಕಟಿಸಲು ಆರಂಭಿಸಿದವರು ಫ.ಗು. ಹಳಕಟ್ಟಿಯವರು ಡಾ. ಬಸವರಾಜು ಅವರು ಅದೇ ಮಾರ್ಗದಲ್ಲಿ ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಬಸವಣ್ಣನ ವಚನಗಳು, ಅಲ್ಲಮನ ವಚನಗಳು, ಅಕ್ಕಮಹಾದೇವಿಯ ವಚನಗಳು, ಜೇಡರ ದಾಸಿಮಯ್ಯನ ವಚನಗಳು, ವಿವಾದಾತ್ಮಕ ಮತ್ತು ವಿದ್ವದಾವೃತ್ತಿ ಕೃತಿ ಎನಿಸಿದ ಪರಮಾರ್ಥ (ಸರ್ವಜ್ಞ) ವಚನಗಳು, ಶಿವಗಣಪ್ರಸಾದಿಯ ಶೂನ್ಯಸಂಪಾದನೆ ಇತ್ಯಾದಿ ಕೃತಿಗಳನ್ನು ಆಮೂಲಾಗ್ರವಾಗಿ ಸಂಶೋಧಿಸಿ, ಹಲವಾರು ಪಾಠಾಂತರಗಳನ್ನು ಅಭ್ಯಾಸ ಮಾಡಿ ಅತ್ಯಂತ ಶಾಸ್ತ್ರೋಕ್ತವಾಗಿ ಸಂಪಾದಿಸಿದ್ದಾರೆ. ಇವರು ಸಂಪಾದಿಸಿದ ‘‘ಶಿವದಾಸ ಗೀತಾಂಜಲಿ’’ ಕನ್ನಡದಲ್ಲಿ ಚಿರಕಾಲ ನಿಲ್ಲುವಂಥ ಕೃತಿ. ಇದೊಂದು ವಿಶಿಷ್ಟ ಹಾಗೂ ಇಂದಿಗೂ ವಿನೂತನ ಕೃತಿ. ಈ ಕೃತಿ ಪ್ರಕಟವಾಗುವುದಕ್ಕಿಂತ ಪೂರ್ವದಲ್ಲಿ ಪುರಂದರದಾಸರೇ ಕರ್ನಾಟಕ ಸಂಗೀತದ ಸಂಸ್ಥಾಪಕರು ಎಂಬ ನಂಬುಗೆ ಸಾಹಿತ್ಯ ಜಗತ್ತಿನಲ್ಲಿತ್ತು (ಈಗಲೂ ಕೆಲವರು ಹಾಗೆ ನಂಬಿದ್ದಾರೆ). ಆದರೆ ದಾಸರು ಕನ್ನಡ ಸಾಹಿತ್ಯದಲ್ಲಿ ಉದಯಿಸುವುದಕ್ಕಿಂತ ಪೂರ್ವದಲ್ಲಿಯೇ ವಚನಕಾರರು ವಚನಗಳನ್ನು ರಾಗ-ತಾಳಗಳೊಂದಿಗೆ ಬರೆದಿದ್ದನ್ನು ಪ್ರಪ್ರಥಮ ಬಾರಿಗೆ ಡಾ. ಬಸವರಾಜು ಅವರು ಸಿದ್ಧಪಡಿಸಿದಾಗ ಅಂದಿನ ಸಾಹಿತ್ಯ ದಿಗ್ಗಜರಾದ ಡಿ.ಎಲ್. ನರಸಿಂಹಾಚಾರ್ಯ, ವರಕವಿ ಬೇಂದ್ರೆ, ತೀ. ನಂ. ಶ್ರೀಕಂಠಯ್ಯನಂಥವರು ಮುಕ್ತ ಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕೃತಿಯ ಕುರಿತು ಪ್ರೊ. ಡಿ.ಎಲ್.ಎನ್. ಅವರು ಇಂಗ್ಲಿಷಿನಲ್ಲಿ ಬರೆದ ಕೆಲ ಮಾತುಗಳನ್ನು ಇಲ್ಲಿ ಉಲ್ಲೇಖಿಸುವುದು ಅವಶ್ಯಕ -This book opens out a fresh field of Inquiry in the history of Kannada Literature. Hitherto the impression has been that the Haridasas like Purandara Vithala and his predecessors were the innovators of musical compositions in Kannada and that the Karnataka School of Music was established by them. The present work comprising as it does, the musical compositions of writers who were anterior to Purandara by about three centuries, sets the scholars to think afresh and review the position."
ವರಕವಿ ಬೇಂದ್ರೆಯವರು ಶಿವದಾಸ ಗೀತಾಂಜಲಿಯನ್ನು ಓದಿದ ನಂತರ ‘ಶ್ರೀ ಎಲ್. ಬಸವರಾಜು ಅವರು ‘ಶಿವದಾಸ ಗೀತಾಂಜಲಿ’ಯನ್ನು ಸಾಹಿತ್ಯಲೋಕಕ್ಕರ್ಪಿಸಿ ಹೊಸ ವಿಕ್ರಮವನ್ನು ಸ್ಥಾಪಿಸಿದ್ದಾರೆ. ಸಂಶೋಧಕರಿಗೂ ಸಂಶೋಧನೆಯ ಗಣಿ. ಕನ್ನಡ ಗೀತ ಸಾಹಿತ್ಯದ ಹುದುಗಿನ ಮಹಾಶಿಲ್ಪ ಬಯಲಿಗೆ ಬಂದಿತು. ಏಕಾಂಗ ವೀರ ಏನು ಪರಿಶ್ರಮ ಪಡಬಲ್ಲ ಎಂಬುದರ ಸಂಕೇತ’’. ಇದಕ್ಕಿಂತ ದೊಡ್ಡ ಪ್ರಮಾಣಪತ್ರ ಇನ್ನೊಂದು ಇರಲಾರದು. ಡಾ. ಬಸವರಾಜುರವರ ಇನ್ನೊಂದು ಅತ್ಯಂತ ಮಹತ್ವದ ವಚನ ಸಾಹಿತ್ಯದ ಸಂಶೋಧನಾ ಕೃತಿ ‘‘ಅಲ್ಲಮನ ವಚನ ಚಂದ್ರಿಕೆ’’. ಅಲ್ಲಮನ ವಚನ ಚಂದ್ರಿಕೆಯನ್ನು ಕುರಿತು ಬೇಂದ್ರೆಯವರು ‘‘ಇದು ಕೇವಲ ಶ್ರದ್ಧೆಯ ಕೆಲಸವಲ್ಲ, ಇಲ್ಲಿ ತಪಸ್ಸಿನ ತೆಯ್ದಿಟವಿದೆ; ಬುದ್ಧಿಯ ಗುದ್ದಾಟವೂ ಇದೆ’’ ಎಂದು ಹೇಳಿದರು
ಈ ಎರಡು ಕೃತಿಗಳಿಗಾಗಿ ಮೈಸೂರು ವಿಶ್ವವಿದ್ಯಾನಿಲಯ ಬಸವರಾಜು ಅವರಿಗೆ ಡಿ.ಲಿಟ್. ಪದವಿ ನೀಡಿ ಗೌರವಿಸಿತು; ಅದು ಅಚ್ಚರಿಯಲ್ಲ. ಆದರೆ ಸಂತಸದ ಸಂಗತಿಯೆಂದರೆ ಬಸವಣ್ಣನವರ ವಚನಗಳಿಗೆ ವ್ಯಾಖ್ಯಾನವನ್ನು ತಮ್ಮದೇ ಆದ ವಿಶಿಷ್ಟವಾದ ರೀತಿಯಲ್ಲಿ ಬರೆದು ‘‘ಬಸವಣ್ಣನವರ ಷಟ್ಸ್ಥಲದ ವಚನಗಳು’’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಇಲ್ಲಿಯೂ ಸಂಶೋಧಕನ ಪ್ರವೃತ್ತಿ ಕೆಲಸ ಮಾಡಿದೆ. ಕೆಲ ವಚನಗಳನ್ನು ಖೊಟ್ಟಿ ವಚನಗಳೆಂದು ಗುರುತಿಸಿದ್ದಾರೆ. ಇದೊಂದು ವಚನ ಸಾಹಿತ್ಯದ ಗಮನಾರ್ಹ ಕೃತಿ.
ಶಾಸ್ತ್ರ ಸಾಹಿತ್ಯ: ಡಾ. ಎಲ್. ಬಸವರಾಜು ಅವರ ಪಾಂಡಿತ್ಯಕ್ಕೆ ಪರಿಶ್ರಮಕ್ಕೆ ಗಡಿಗೆರೆಗಳಿಲ್ಲ. ಕಾವ್ಯಗಳ ಸಂಶೋಧನೆ ಮಾಡಿದಷ್ಟೇ ಪ್ರೀತಿಯಿಂದ ಹಾಗೂ ಶ್ರದ್ಧೆಯಿಂದ ಶಾಸ್ತ್ರಗ್ರಂಥಗಳನ್ನು ಸಂಪಾದಿಸಿದ್ದಾರೆ. ನಾಗವರ್ಮನ ‘‘ಛಂದೋಂಬುಧಿ’’, ಈಶ್ವರನ ‘‘ಕವಿ ಜಿಹ್ವಾಬಂಧನ’’, ಗುಣಚಂದ್ರನ ‘‘ಛಂದಸ್ಸಾರ’’, ವೀರಭದ್ರನ ‘‘ನಂದಿ ಛಂದೋರ್ಣವ’’ ಈ ನಾಲ್ಕು ಗ್ರಂಥಗಳನ್ನು ಸಾಂಗವಾಗಿ ಪರಿಷ್ಕರಿಸಿ ‘‘ಕನ್ನಡ ಛಂದಸ್ಸಂಪುಟ’’ವನ್ನಾಗಿ ಸಂಪಾದಿಸಿದ್ದಾರೆ. ಕೇಶಿರಾಜನ ‘‘ಶಬ್ದಮಣಿದರ್ಪಣ’’ವನ್ನು ಮೂವತ್ತಕ್ಕೂ ಹೆಚ್ಚಿನ ಹಸ್ತಪ್ರತಿಗಳನ್ನು ಪರಾಮರ್ಶಿಸಿ ಪ್ರಕಟಿತ ಪ್ರತಿಗಳ ನೆರವಿನಿಂದ ವಿನೂತನವಾದ ರೀತಿಯಲ್ಲಿ ಸಂಪಾದಿಸಿದ್ದಾರೆ. ಈ ಎರಡು ಕೃತಿಗಳೂ ವಿದ್ವಾಂಸರ ಪ್ರಶಂಸೆಗೆ ಪಾತ್ರವಾಗಿವೆ.
ವೈಷ್ಣವ ಮತ್ತು ಬೌದ್ಧಧರ್ಮ ಸಾಹಿತ್ಯ: ಡಾ ಎಲ್. ಬಸವರಾಜು ಅವರಿಗೆ ಸಂಸ್ಕೃತಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಗಳ ನಿಕಟ ಪರಿಚಯವಿದೆ. ಬಹುಶಃ ಇವರ ಸಂಸ್ಕೃತ ಅಭ್ಯಾಸವೇ ಇವರನ್ನು ಸೃಜನಶೀಲ ಸಾಹಿತ್ಯದ ನಿರ್ಮಾಣಕ್ಕೆ ಪ್ರೇರೇಪಿಸಿದೆ. ಬಹು ಹಿಂದೆಯೇ ಕವಿ ಭಾಸನ ಆರು ಏಕಾಂಕ ನಾಟಕಗಳನ್ನು ‘‘ಭಾರತ ರೂಪಕ’’ ಎಂಬ ಹೆಸರಿನಲ್ಲಿ ಅನುವಾದಿಸಿದರು. ಅದೇ ಕವಿಯ ರಾಮಾಯಣ ಆಧಾರಿತ ಮೂರು ನಾಟಕಗಳನ್ನು ರಚಿಸಿ ‘‘ರಾಮಾಯಣ ನಾಟಕ ತ್ರಿವೇಣಿ’’ಯನ್ನು ಪ್ರಕಟಿಸಿದರು. 1998ರಲ್ಲಿ ಪ್ರಕಟವಾದ ‘‘ಬುದ್ಧಚರಿತೆ’’ ಮತ್ತು 2000ರಲ್ಲಿ ಪ್ರಕಟವಾದ ‘‘ಸೌಂದರನಂದ’’ ಎಂಬೆರಡು ಮಹಾಕಾವ್ಯಗಳು ಅಶ್ವಘೋಷನ ಕಾವ್ಯಗಳನ್ನು ಆಧರಿಸಿದ ವಿಶಿಷ್ಟ ಕೃತಿಗಳು. ಇವು ಮೂಲಕೃತಿಗಳ ನೇರ ಅನುವಾದಗಳಲ್ಲ; ಇವರ ಪ್ರತಿಭೆಯ ಕುಲುಮೆಯಲ್ಲಿ ರೂಪುಗೊಂಡ ವಿಶಿಷ್ಟ ಕೃತಿಗಳು. ಕನ್ನಡದಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿತ ಕೃತಿಗಳು ತೀರ ಕಡಿಮೆ. ರಾಜರತ್ನಂ, ಪರಮೇಶ್ವರ ಭಟ್ಟ, ಶ್ರೀರಂಗರಾಜು ಮುಂತಾದವರು ಬೌದ್ಧಧರ್ಮವನ್ನು ಕನ್ನಡಿಗರಿಗೆ ಪರಿಚಯಿಸುವಲ್ಲಿ ಶ್ರಮಿಸಿದ್ದಾರೆ. ಈ ಶ್ರೇಣಿಯಲ್ಲಿ ಬಸವರಾಜು ಅವರ ಈ ಎರಡು ಮಹಾಕಾವ್ಯಗಳು ವಿಶಿಷ್ಟ ಸ್ಥಾನ ಪಡೆದಿವೆ. ಕನ್ನಡದಲ್ಲಿ ಮುಕ್ತ ಛಂದಸ್ಸಿನ ಕಾವ್ಯಗಳು ಬಂದಿವೆ. ಆದರೆ ಗದ್ಯಾತ್ಮಕ ವಚನದಲ್ಲಿ ಮಹಾಕಾವ್ಯಗಳನ್ನು ರಚಿಸಿ ಬಸವರಾಜು ಅವರು ಹೊಸ ಹಾದಿಯನ್ನೇ ನಿರ್ಮಿಸಿದ್ದಾರೆ. ಇವರ ವಚನ ಸಾಹಿತ್ಯದ ಆಳವಾದ ಅಧ್ಯಯನ ಮತ್ತು ಮೊದಲಿನಿಂದಲೂ ಬೌದ್ಧ ಧರ್ಮದ ಬಗ್ಗೆ ಇವರಿಗಿರುವ ಗೌರವ ಮತ್ತು ಪ್ರೇಮವನ್ನು ಬುದ್ಧ ಚರಿತೆಯಲ್ಲಿ ಉದ್ದಕ್ಕೂ ಗುರುತಿಸಬಹುದು. ‘‘ಬುದ್ಧಚರಿತೆ’’ಯಲ್ಲಿ ಬುದ್ಧನ ವಿಚಾರಧಾರೆಯನ್ನು ಬಸವಣ್ಣನ ವಿಚಾರಧಾರೆಗೆ ಹೋಲಿಸಿ ಅಲ್ಲಲ್ಲಿ ಅಡಿ ಟಿಪ್ಪಣಿಗಳನ್ನು ನೀಡಿದ್ದಾರೆ. ಈ ಎರಡೂ ಮಹಾಕಾವ್ಯಗಳು ಕನ್ನಡದ ಆಧುನಿಕ ಮಹಾಕಾವ್ಯಗಳ ಪರಂಪರೆಗೆ ಸೇರ್ಪಡೆಯಾದ ರತ್ನಗಳು.
ಕವನ ಸಂಕಲನಗಳು: ದೀರ್ಘಕಾಲ ಸಂಶೋಧನೆಯಲ್ಲಿ ತೊಡಗಿದ ಬಸವರಾಜು ಅವರ ಸೃಜನಶೀಲ ಪ್ರತಿಭೆಯು ಗುಪ್ತಗಾಮಿನಿಯಾಗಿತ್ತು. ಅವರ 75ನೆ ವಯಸ್ಸಿನಲ್ಲಿ ಮೊದಲ ಕವನ ಸಂಗ್ರಹ ‘‘ಠಾಣಾಂತರ’’ ಹೊರಬಂದು ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನೂ ಪಡೆಯಿತು. ನಂತರ ‘‘ಜಾಲಾರಿ’’ ಕವನ ಸಂಗ್ರಹ ಪ್ರಕಟವಾಯಿತು. ಎರಡೇ ಕವನ ಸಂಕಲನಗಳಲ್ಲಿ ಆರುನೂರಕ್ಕೂ ಹೆಚ್ಚು ಕವನಗಳಿರುವುದೊಂದು ವೈಶಿಷ್ಟ್ಯ. ಸಮಕಾಲೀನ ಪ್ರಜ್ಞೆ, ಸಾಮಾಜಿಕ ಕಳಕಳಿ ಈ ಕವನಗಳ ಮುಖ್ಯ ಆಶಯ.
ಹೀಗೆ ಅವಿರತವಾಗಿ ಸಂಶೋಧನೆ ಮತ್ತು ಸೃಜನಶೀಲ ಕ್ಷೇತ್ರಗಳಿಗೆ 42 ಅಮೂಲ್ಯ ಕೃತಿಗಳನ್ನು ನೀಡಿರುವ ಡಾ. ಬಸವರಾಜು ಅವರ ದೈತ್ಯ ಪ್ರತಿಭೆಗೆ ಬೆಂಬಲವಾಗಿ ನಿಂತವರು ಅವರ ಪತ್ನಿ ಶ್ರೀಮತಿ ವಿಶಾಲಾಕ್ಷಮ್ಮನವರು. ಲೌಕಿಕ ಜೀವನದಲ್ಲಿ ಏನೂ ಅರಿಯದ ನಿರಾಭಾರಿಯಾಗಿರುವ ಡಾ. ಬಸವರಾಜು ಅವರ ಎಲ್ಲಾ ಬೇಕು ಬೇಡಗಳನ್ನು ನೋಡಿಕೊಂಡು ಇವರ ಸಿಟ್ಟು ಸೆಡವುಗಳನ್ನು ಸಹಿಸಿಕೊಂಡು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದಾರೆ.
ಡಾ. ಬಸವರಾಜು ಅವರ ನಿರ್ಭೀತ ಸ್ವಭಾವ, ಯಾರ ಹಂಗಿಗೂ ಒಳಗಾಗದ ಮನೋಧರ್ಮದಿಂದಾಗಿ ಇವರಿಂದ ಗುಂಪನ್ನು ಕಟ್ಟಿಕೊಳ್ಳುವುದು ಸಾಧ್ಯವಾಗಿಲ್ಲ. ವಂದಿಮಾಗಧರನ್ನು ಸಾಕಲಿಲ್ಲ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಭೂಸನೂರುಮಠ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳು. ಇವರಿಗೆ ಪಂಪ ಪ್ರಶಸ್ತಿಯು ತಾನಾಗಿಯೇ ಅರಸಿಕೊಂಡು ಬಂದಿದೆ. ಉರ್ದುವಿನಲ್ಲಿ ಒಂದು ಗಾದೆ ಇದೆ. ಅದರರ್ಥ ಹೀಗಿದೆ: ‘‘ತಡವಾಗಿಯಾದರೂ ಸರಿಯಾದ ಸ್ಥಾನಕ್ಕೆ ಬಂದಿರುವಿ’’ ಎಂದು.
ಕೊನೆಯಲ್ಲಿ ಅವರ ಈ ಕವನವನ್ನು ಅವರಿಗೇ ಅನ್ವಯಿಸಬಹುದು:
ಚಳಿಗಾಲದಲ್ಲಿ ಎಲೆಯುದುರಿ
ಬೇಸಗೆಯಲ್ಲಿ ಚಿಗುರಿ
ಮಳೆಗಾಲದಲ್ಲಿ ಪೋಷಣೆಗೊಳ್ಳುವ ಪ್ರಕೃತಿಗೆ ಎಲ್ಲ ಕಾಲವೂ ಅನುಕೂಲ
ಬದುಕಿನಲ್ಲಿ ಶ್ರದ್ಧೆ ಸಾಹಸವಿದ್ದವರಿಗೆ
ಎಲ್ಲ ಕಾಲವೂ ಅನುಕೂಲ.