ಗ್ರಾಮಾಂತರ ಭಾಗಕ್ಕೆ ನೀರು ಹರಿಸದಿದ್ದರೆ ಡಿ.ಸಿ.ಕಚೇರಿಗೆ ಮುತ್ತಿಗೆ: ಶಾಸಕ ಬಿ.ಸುರೇಶ್ಗೌಡ

ತುಮಕೂರು, ಆ.27: ಹೇಮಾವತಿ ನಾಲೆಯ ಮೂಲಕ ತುಮಕೂರು ಗ್ರಾಮಾಂತರ ಮತ್ತು ಕುಣಿಗಲ್ ಕೆರೆಗೆ ಸೋಮವಾರದ ಒಳಗೆ ನೀರು ಹರಿಸದಿದ್ದರೆ, ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಜಡಿದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆ.18 ರಂದು ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿಯ ಸಭೆಯ ತೀರ್ಮಾನದಂತೆ ತುಮಕೂರು ಬ್ರಾಂಚ್ ಕೆನಾಲ್ಗೆ 1100 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ನಾಲೆಯಲ್ಲಿ ಹರಿಯುತ್ತಿರುವ 1100 ಕ್ಯೂಸೆಕ್ಸ್ ನಲ್ಲಿ 546ಕ್ಯೂಸೆಕ್ಸ್ ನೀರು ಮಾತ್ರ ಲೆಕ್ಕಕ್ಕೆ ಸಿಗುತ್ತಿದ್ದು, ಉಳಿದ ನೀರನ್ನು ಕಳವು ಮಾಡ ಲಾಗುತ್ತಿದೆ. ಎಲ್ಲೆಲ್ಲಿ ನೀರು ಕಳುವಾಗುತ್ತಿದೆ ಎಂಬುದನ್ನು ಪತ್ತೆ ಹೆಚ್ಚಿ, ರೈತರ ಮನವೊಲಿಸಿ ತುಮಕೂರು ಗ್ರಾಮಾಂತರ ಮತ್ತು ಕುಣಿಗಲ್ಗೆ ಸೋಮವಾರದೊಳಗೆ ನಾಲೆಯ ಮೂಲಕ ನೀರು ಹರಿಸಬೇಕು. ಇಲ್ಲವಾದಲ್ಲಿ ಮಂಗಳವಾರ ಬೆಳಗ್ಗೆ ಗ್ರಾಮಾಂತರ ಕ್ಷೇತ್ರದ ಜನರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದು ಖಂಡಿತ ಎಂದರು.
ತುಮಕೂರು ಬ್ರಾಂಚ್ ಕೆನಾಲ್ ಮೂಲಕ ತುಮಕೂರು ಜಿಲ್ಲೆಗೆ ಹರಿಯುತ್ತಿರುವ 1100 ಕ್ಯೂಸೆಕ್ಸ್ ನೀರಿನಲ್ಲಿ, ತಿಪಟೂರು ತಾಲೂಕಿನ ತಿಪಟೂರು ನಗರಕ್ಕೆ 50, ಗಂಗರುಮಳೆ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 20, ಕರೆಗೋಡಿ ರಂಗಾಪುರ ಕೆರೆಗೆ 8, ಹೀಗೆ 86 ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ. ಅದೇ ರೀತಿ ತುರುವೇಕೆರೆ ಮಲ್ಲಾಘಟ್ಟ ಕೆರೆಗೆ 30 ಕ್ಯೂಸೆಕ್ಸ್, ಚಿಕ್ಕನೂರು ಕೆರೆಗೆ 17 ಕ್ಯೂಸೆಕ್ಸ್, ಕಣಿವೇಹಳ್ಳಿ ಕೆರೆ 5 ಕ್ಯೂಸೆಕ್ಸ್ ಸೇರಿ 56 ಕ್ಯೂಸೆಕ್ಸ್ ನೀರು ಹರಿಯುತ್ತಿದೆ ಎಂದು ಹೇಳಿದರು.
ಗುಬ್ಬಿ ತಾಲೂಕಿನ ಕಡಬ ಕೆರೆಗೆ 50 ಕ್ಯೂಸೆಕ್ಸ್, ಬಿದರೆ ಕೆರೆಗೆ 12 ಕ್ಯೂಸೆಕ್ಸ್, ಗುಬ್ಬಿಪಟ್ಟಣದ ಕೆರೆಗೆ 30 ಕ್ಯೂಸೆಕ್ಸ್ ಸೇರಿ 98 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ತುರುವೇಕೆರೆ ಮತ್ತು ಗುಬ್ಬಿ ತಾಲೂಕು ದಾಟುವುದರೊಳಗೆ ಸಾಕಷ್ಟು ನೀರು ಪೋಲಾಗುತ್ತಿದೆ. ಇದನ್ನು ತಡೆಯದಿದ್ದರೆ ಕೊನೆಯ ಭಾಗದಲ್ಲಿರುವ ಗ್ರಾಮಾಂತರ ಮತ್ತು ಕುಣಿಗಲ್ ಜನರಿಗೆ ಕುಡಿಯಲು ನೀರು ಹರಿಯುವುದಿಲ್ಲ. ಆದ್ದರಿಂದ ತಕ್ಷಣವೇ ರೈತರ ಮನವೊಲಿಸಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಐಸಿಸಿ ಸಭೆಯ ತೀರ್ಮಾನದಂತೆ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಜಿಲ್ಲಾಧಿಕಾರಿಗಳು ಕೇವಲ ಪೇಪರ್ ಮೇಲೆ 144 ಸೆಕ್ಷನ್ ವಿಧಿಸಿದ್ದಾರೆಯೇ ಹೊರತು, ನಾಲೆಯ ಗಸ್ತು ಹೆಚ್ಚಿಸಿಲ್ಲ. ಇದರಿಂದಾಗಿ ಬೆಸ್ಕಾಂ,ಹೇಮಾವತಿ, ಪೊಲೀಸ್ ಅಧಿಕಾರಿಗಳು ರೈತರಿಂದ ಒಂದು ಪಂಪ್ ಸೆಟ್ಗೆ ಇಂತಿಷ್ಟು ಹಣ ಪಡೆದು ನಾಲೆಯಿಂದ ನೀರು ಕದಿಯಲು ಬೆಂಬಲ ನೀಡುತ್ತಿದ್ದಾರೆ. ನಾಲೆಯ ಅಕ್ಕಪಕ್ಕದ 20-30 ಕೆರೆಗಳು ತುಂಬಿವೆ. ಇದಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದ ಅವರು, ಜಿಲ್ಲಾಧಿಕಾರಿ,ಉಪವಿಭಾಗಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ನಾಲೆಯ ಮೇಲೆ ಗಸ್ತು ತಿರುಗಿದರೆ ಸತ್ಯಾಂಶ ಹೊರಬೀಳಲಿದೆ ಎಂದರು.
ತಮಕೂರು ಗ್ರಾಮಾಂತರಕ್ಕೆ ಸೇರಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಹೆಬ್ಬೂರು- ಗೂಳೂರು ಏತ ನೀರಾವರಿಗೆ .23 ಎಂಸಿಎಫ್ ಟಿ ನೀರು ಅಲಾಟ್ ಮಾಡಲಾಗಿದೆ. ಆದರೆ ಆಗಸ್ಟ್ 23 ರಿಂದಲೂ ಜಿಲ್ಲೆಗೆ ನೀರು ಹರಿಯುತ್ತಿದ್ದರೂ ಇದುವರೆಗೂ ಗ್ರಾಮಾಂತರ ಕ್ಷೇತ್ರಕ್ಕೆ ಒಂದು ತೊಟ್ಟು ನೀರು ಹರಿದಿಲ್ಲ. ಜನತೆ ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿದ್ದಾರೆ. ಐಸಿಸಿ ಸಭೆಯ ತೀರ್ಮಾನದಂತೆ ನಡೆದುಕೊಳ್ಳದ ಜಿಲ್ಲಾಧಿಕಾರಿಗಳ ವಿರುದ್ಧ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ವರದಿ ಸಲ್ಲಿಸಿ, ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದ ಎನ್.ನರಸಿಂಹಮೂರ್ತಿ, ಜಿಪಂ ಸದಸ್ಯರಾದ ಗೂಳೂರು ಶಿವಕುಮಾರ್, ನರಸಿಂಹಮೂರ್ತಿ, ತಾಪಂ ಅಧ್ಯಕ್ಷ ಗಂಗಾಂಜನೇಯ, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.







