ಸೌಹಾರ್ದ, ಸಹಬಾಳ್ವೆ ಮೂಡಿಸಲು ಸಾಮಾಜಿಕ ಜಾಲತಾಣಗಳು ಹೆಚ್ಚು ಪರಿಣಾಮಕಾರಿ: ಮುಹಮ್ಮದ್ ರಿಯಾಝ್

ಬೆಂಗಳೂರು, ಆ. 27: ರೋಗಗ್ರಸ್ಥವಾಗಿರುವ ಸಮಾಜದಲ್ಲಿ ಸೌಹಾರ್ದ, ಸಹಬಾಳ್ವೆ ಮೂಡಿಸಲು ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿಯಾಗಿದ್ದು, ಜಾಲತಾಣಗಳ ಮೂಲಕ ಜನಸಾಮಾನ್ಯರ ನೈಜ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಡಿವೈಎಫ್ಐನ ರಾಷ್ಟ್ರಾಧ್ಯಕ್ಷ ಮುಹಮ್ಮದ್ ರಿಯಾಝ್ ಕರೆ ನೀಡಿದ್ದಾರೆ.
ರವಿವಾರ ನಗರದ ಎಸ್ಸಿಎಂ ಹೌಸ್ನಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ರಾಜ್ಯ ಸಮಿತಿ ಆಯೋಜಿಸಿದ್ದ ಸಾಮಾಜಿಕ ಮಾಧ್ಯಮ ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪತ್ರಕರ್ತ ಪಿ.ಸಾಯಿನಾಥ್ ಪ್ರಕಾರ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ಶೇ.70ರಷ್ಟು ಜನಪರವಾಗಿಲ್ಲ. ಸಿದ್ಧಾಂತಗಳನ್ನೇ ಗಾಳಿಗೆ ತೂರಿರುವ ಸುದ್ದಿ ಮಾಧ್ಯಮಗಳು ಲಾಭಕೋರ ಧೋರಣೆಗೆ ಜೋತುಬಿದ್ದಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿ ಮಾಧ್ಯಮಗಳು ಕಾರ್ಪೊರೇಟ್ ಸಂಸ್ಥೆಗಳ ಗಾಳವಾಗುತ್ತಿವೆ. ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಗೂಡಿಸುವಂತ ಸುದ್ದಿ ಮಾಧ್ಯಮಗಳು ಕಡಿಮೆ ಆಗುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಮಾಜಘಾತುಕ ಶಕ್ತಿಗಳ ವಿರುದ್ಧ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪ್ರಧಾನಿ ಮೋದಿ ಮುನ್ನೆಲೆಗೆ ಬಂದರು. ಇದೇ ಮಾದರಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ದೇಶದೊಳಗಿನ ನೈಜ ಸಮಸ್ಯೆಗಳ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಡಿವೈಎಫ್ಐ ಪ್ರತಿನಿಧಿಗಳಿಗೆ ಕರೆ ನೀಡಿದರು.
‘ನ್ಯೂಸ್ ಮಿನಿಟ್’ ಸಂಪಾದಕ ಪ್ರಬೀರ್ ಪುರಕಾಯಸ್ಥ ಮಾತನಾಡಿ, ಬಹುತೇಕ ಬುದ್ಧಿವಂತ ಜನರು ಮಾಹಿತಿಗಾಗಿ ಪತ್ರಿಕೆ ಮಾಧ್ಯಮಗಳಿಗಿಂತ ಹೆಚ್ಚಾಗಿ ಇಂಟರ್ನೆಟ್ನಿಂದ ಪಡೆದುಕೊಳ್ಳುತ್ತಿದ್ದಾರೆ. ಈ ಪರಿಣಾಮ ಸಾಮಾಜಿಕ ಜಾಲತಾಣಗಳು ಪ್ರವರ್ಧಮಾನಕ್ಕೆ ಬರುತ್ತಿವೆ ಎಂದು ತಿಳಿಸಿದರು.
ಮಠಗಳು, ಸ್ವಾಮೀಜಿಗಳು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ವಿಚಾರಗಳನ್ನು ಬಿತ್ತುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರದ ಜೊತೆಗೆ, ಸಮಾಜದ ಪ್ರಗತಿಗೆ ಪೂರಕವಾಗುವ ಅಂಶಗಳನ್ನು ಬಿತ್ತಲು ಯುವಜನರು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದರು.
ಡಿವೈಎಫ್ಐನ ಕಾರ್ಯದರ್ಶಿ ಬಿ.ರಾಜಶೇಖರ್ ಮೂರ್ತಿ ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಕಾರ್ಪೊರೇಟ್ ಸಂಸ್ಥೆಗಳು ಅಡ್ಡಗಾಲಾಗುತ್ತಿವೆ. ಇದರಿಂದ ಸರಕಾರದ ಕಾರ್ಯಕ್ರಮಗಳು, ವಿಜ್ಞಾನ ಮತ್ತು ತಂತ್ರಜ್ಞಾನಗಳು ಜನಸಾಮಾನ್ಯರಿಗೆ ಮರೀಚಿಕೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ದೇಶದ 21 ರಾಜ್ಯಗಳ ಡಿವೈಎಫ್ಐ ಪ್ರತಿನಿಧಿಗಳು ಪಾಲ್ಗೊಂಡು ವಿಚಾರವನ್ನು ವಿನಿಮಯ ಮಾಡಿಕೊಂಡರು.
ಕಾರ್ಯಾಗಾರದಲ್ಲಿ ಡಿವೈಎಫ್ಐನ ಪ್ರಧಾನ ಕಾರ್ಯದರ್ಶಿ ಅಭಯ್ ಮುಖರ್ಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







