ಶಿಡ್ಲಘಟ್ಟ: ಅಬ್ಲೂಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಶಿಡ್ಲಘಟ್ಟ, ಆ.29: ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವುದೊಂದಿಗೆ ಸಮುದಾಯ ಮತ್ತು ಶಾಲೆಯನ್ನು ಬೆಸೆಯುವ ಹಾಗೂ ಬಾಂಧವ್ಯ ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ ತಿಳಿಸಿದರು.
ತಾಲೂಕಿನ ತಾತಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಅಬ್ಲೂಡು ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಪ್ರತಿಭಾ ಕಾರಂಜಿಗೆಂದು ಹಣ ನೀಡುವುದಿಲ್ಲ. ಆದರೂ ಶಿಕ್ಷಕರು ಗ್ರಾಮಸ್ಥರ, ಮುಖಂಡರ ಸಹಕಾರವನ್ನು ಪಡೆಯುವ ಮೂಲಕ ತಾಲೂಕಿನೆಲ್ಲೆಡೆ ಅತ್ಯುತ್ತಮವಾಗಿ ಪ್ರತಿಭಾ ಕಾರಂಜಿ ನಡೆಸುತ್ತಿದ್ದಾರೆ. ಪ್ರತಿಭಾ ಕಾರಂಜಿಯಿಂದ ಹಲವು ಉಪಯೋಗಗಳಿವೆ. ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ಧಿಗೆ ಸಹಾಯವಾಗುತ್ತದೆ. ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರತರುತ್ತದೆ. ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ವೇದಿಕೆಯಾಗಿದೆ ಎಂದು ವಿವರಿಸಿದರು.
ಈ ವೇಳೆ ಅಬ್ಲೂಡು ಕ್ಲಸ್ಟರ್ ನ 12 ಶಾಲೆಗಳ ವಿದ್ಯಾರ್ಥಿಗಳು ಕೋಲಾಟ, ಜನಪದ ನೃತ್ಯ, ಖವಾಲಿ, ದೇಶಭಕ್ತಿ ಗೀತೆ, ರಸಪ್ರಶ್ನೆ ಕಾರ್ಯಕ್ರಮ, ಕಂಠಪಾಠ, ಚಿತ್ರಕಲೆ, ಕ್ಲೇ ಮಾಡಲಿಂಗ್, ಭಕ್ತಿಗೀತೆ, ಅಭಿನಯ ಗೀತೆ,ಆಶುಭಾಷಣ, ಛದ್ಮವೇಷ ಮುಂತಾದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು,
ಕಾರ್ಯಕ್ರಮದಲ್ಲಿ ತಾತಹಳ್ಳಿಯ ಜೈಭಾರತ್ ಯುವಕ ಸಂಘದ ಸದಸ್ಯರು, ಸಮನ್ವಯಾಧಿಕಾರಿ ರಾಜು, ಗ್ರಾಮ ಪಂಚಾಯತ್ ಸದಸ್ಯೆ ಲಕ್ಷ್ಮೀದೇವಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಸಿ.ಕೃಷ್ಣಪ್ಪ, ಮುಖ್ಯ ಶಿಕ್ಷಕಿ ಸರಸ್ವತಮ್ಮ, ಸಿಆರ್ಪಿಗಳಾದ ಸುರೇಶ್, ನಾಗರಾಜ್, ಶ್ರೀನಿವಾಸರೆಡ್ಡಿ, ಸಾದಿಕ್ ಪಾಷ, ಸುಂದರಾಚಾರಿ, ಶಾರದಾಂಬ, ನೇತ್ರಾ, ವೆಂಕಟೇಶ್, ಚಂದ್ರಶೇಖರ್, ಮಂಜುನಾಥ್, ಗಂಗಾಧರ್, ನರಸಿಂಹರಾಜು ಹಾಜರಿದ್ದರು.







