‘ಕಾರ್ಮಿಕರಿಗೆ ಮನೆ’ ಕೇಂದ್ರ ಸರಕಾರದ ಆದ್ಯತೆ: ಬಂಡಾರು ದತ್ತಾತ್ರೇಯ

ಬೆಂಗಳೂರು, ಆ.29: ಕೇಂದ್ರ ಸರಕಾರವು 2022ರ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಗುರಿಯನ್ನು ಹೊಂದಿದೆ. ಅದರಂತೆ, ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ ಸದಸ್ಯರು ನಿವೃತ್ತಿ ಹೊಂದುವಾಗ ಸ್ವಂತ ಮನೆ ಹೊಂದಿರಬೇಕೆಂಬುದು ನಮ್ಮ ಸಂಕಲ್ಪವಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದರು.
ಮಂಗಳವಾರ ಕೆ.ಆರ್.ಪುರ ಕ್ಷೇತ್ರದ ದೂರವಾಣಿ ನಗರದಲ್ಲಿರುವ ಐಟಿಐ ಕಾರ್ಖಾನೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಮಿಕ ಭವಿಷ್ಯನಿಧಿ ಸಂಘಟನೆಯ ಕೆ.ಆರ್.ಪುರ ಪ್ರಾದೇಶಿಕ ಕಚೇರಿಯ ಲೋಕಾರ್ಪಣೆ ಹಾಗೂ ಚಿಕ್ಕಮಗಳೂರು ಪ್ರಾದೇಶಿಕ ಕಚೇರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಭವಿಷ್ಯನಿಧಿ ಸಂಘಟನೆಯ ವಸತಿ ಯೋಜನೆಯಡಿಯಲ್ಲಿ ಪಿಎಫ್ ಖಾತೆಯಲ್ಲಿ ಜಮೆಯಾಗಿರುವ ಶೇ.90ರಷ್ಟು ಹಣವನ್ನು ಪಡೆಯಬಹುದು. ಹಾಗೆ ಖಾತೆಗೆ ಸಂದಾಯವಾಗುವ ಹಣದಿಂದ ವಸತಿಗಾಗಿ ಕಂತುಗಳನ್ನು ಕಟ್ಟಬಹುದು. ಕಾರ್ಮಿಕ ಭವಿಷ್ಯನಿಧಿ ಸಂಘಟನೆಯ ಕಚೇರಿಯನ್ನು ಕಾಗದ ರಹಿತ ಮಾಡುವ ಮೂಲಕ ಪಾರದರ್ಶಕತೆ, ತ್ವರಿತ ಸೇವೆಗೆ ಆದ್ಯತೆ ನೀಡಲಾಗಿದೆ. ಆನ್ಲೈನ್ ಮೂಲಕ ಕಾರ್ಮಿಕರಿಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಸಂಘಟನೆಯು ಪ್ರಸಕ್ತ ಸಾಲಿನ ಜನವರಿ 1ರ ದೇಶಾದ್ಯಂತ 1 ಕೋಟಿ ಹೊಸ ಸದಸ್ಯರನ್ನು ನೋಂದಾಯಿಸಲಾಗಿದೆ. ಈ ಪೈಕಿ 13 ಲಕ್ಷ ಸದಸ್ಯರು ಕರ್ನಾಟಕದವರಾಗಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ 17 ಪ್ರಾದೇಶಿಕ ಕಚೇರಿಗಳಿವೆ. 5 ಕಚೇರಿಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಆಡಳಿತ ಕಚೇರಿಗಳು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು.
ಕಾರ್ಮಿಕ ಭವಿಷ್ಯನಿಧಿ ಸಂಘಟನೆಯು ದೇಶಾದ್ಯಂತ 5 ಕೋಟಿ ಸದಸ್ಯರನ್ನು ಹೊಂದುವ ಮೂಲಕ ವಿಶ್ವದ ಅತೀ ದೊಡ್ಡ ಸಾಮಾಜಿಕ ಭದ್ರತಾ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಮ್ಮ ಆವರ್ತನಿಧಿ 10.50 ಲಕ್ಷ ಕೋಟಿ ರೂ.ಗಳಾಗಿದೆ ಎಂದ ಅವರು, ಕೇಂದ್ರ ಸರಕಾರ ಕಾರ್ಮಿಕರ ಪರವಾಗಿದ್ದು ಭವಿಷ್ಯ ನಿಧೀಯ ಬೋನಸ್ನ್ನು ಹೆಚ್ಚಿಸಲಾಗಿದೆ. ಮಹಿಳೆಯರಿಗೆ ಹೆರಿಗೆಗೆ ನೀಡುತ್ತಿದ್ದ ರಜೆಯನ್ನು 12 ರಿಂದ 26 ವಾರಗಳಿಗೆ ಹೆಚ್ಚಿಸಲಾಗಿದೆ. ಉದ್ಯೋಗಾವಕಾಶಗಳ ಹೆಚ್ಚಳ ನಮ್ಮ ಇಲಾಖೆಯ ಪ್ರಮುಖ ಗುರಿಯಾಗಿದೆ. ಕೈಗಾರಿಕೆಗಳು ಹಾಗೂ ಕಾರ್ಮಿಕರ ನಡುವೆ ಉತ್ತಮ ಸಂಬಂಧ ವೃದ್ಧಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರಕಾರವು ನಿರಂತರವಾಗಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶದಲ್ಲಿರುವ 42 ಕೋಟಿ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕಲ್ಯಾಣ ಯೋಜನೆಗಳನ್ನು ಕಲ್ಪಿಸಲು ಗುರುತಿನ ಚೀಟಿ ನೀಡುವ ಕೆಲಸ ಪ್ರಗತಿಯಲ್ಲಿದೆ. ಇದರಿಂದಾಗಿ, ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗೆ ಅಗತ್ಯವಿರುವ ಆರೋಗ್ಯ, ವಿಮೆ ಸೇರಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ವಸತಿ ಯೋಜನೆಯಡಿಯಲ್ಲಿ ಪ್ರಮುಖ ಕೈಗಾರಿಕೆಗಳು ತಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ವಸತಿಗಳನ್ನು ಕಲ್ಪಿಸಲು ಮುಂದೆ ಬಂದಿವೆ. ದೇಶಾದ್ಯಂತ ಇದೇ ರೀತಿಯ ಬೆಳವಣಿಗೆಗಳು ಮತ್ತಷ್ಟು ಹೆಚ್ಚಬೇಕಿದೆ. 1942ರಲ್ಲಿ ಮಹಾತ್ಮಗಾಂಧಿ ಬ್ರಿಟಿಷರೆ ಭಾರತಬಿಟ್ಟು ತೊಲಗಿ ಎಂಬ ಘೋಷಣೆ ಕೂಗಿದರು. ಇಂದು ನಾವು ಬಡತನ, ಭಯೋತ್ಪಾದನೆ, ಭ್ರಷ್ಟಾಚಾರ, ಜಾತೀಯತೆ, ಕೋಮುವಾದ ಭಾರತ ಬಿಟ್ಟು ತೊಲಗು ಎಂಬ ಘೋಷಣೆ ಮೊಳಗಿಸಬೇಕಿದೆ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಕಾರ್ಯದರ್ಶಿ ಸತ್ಯವತಿ, ಶಾಸಕ ಬಿ.ಎ.ಬಸವರಾಜ, ಕೇಂದ್ರ ಭವಿಷ್ಯನಿಧಿ ಆಯುಕ್ತ ಡಾ.ವಿ.ಪಿ.ಜಾಯ್, ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







