ಫಿಶ್ಮಿಲ್ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಆಗ್ರಹ
ಗ್ರಾಪಂನ ನಕಲಿ ಪರವಾನಿಗೆ ಪತ್ರ ಸೃಷ್ಟಿ
ಉಡುಪಿ, ಆ.29: ಉದ್ಯಾವರದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಿಶ್ಮಿಲ್ ಎಂಡ್ ಆಯಿಲ್ ಕಂಪೆನಿಯೊಂದು ಗ್ರಾಪಂನ ನಕಲಿ ಪರವಾನಿಗೆ ಪತ್ರವನ್ನು ಸೃಷ್ಟಿಸಿ, ಗಂಭೀರ ಹಾಗೂ ಶಿಕ್ಷಾರ್ಹ ಅಪರಾಧ ಎಸಗಿದ್ದು, ಅದರ ಆಡಳಿತ ಪಾಲುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಉದ್ಯಾವರ ಗ್ರಾಮಸ್ಥರು ಗ್ರಾಪಂನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಈ ಫಿಶ್ಮಿಲ್ಗೆ ಪರವಾನಿಗೆ ನೀಡುವುದಿಲ್ಲ ಎಂದು ಗ್ರಾಮಸಭೆಯಲ್ಲಿ ನಿರ್ಣಯವಾಗಿದ್ದರೂ, ತಮ್ಮ ರಾಜಕೀಯ ಹಾಗೂ ಹಣಬಲದಿಂದ ಅಕ್ರಮವಾಗಿ ಪರವಾನಿಗೆ ಪಡೆದಿದ್ದ ಈ ಫಿಶ್ಮಿಲ್ ಆರಂಭಗೊಂಡ ಬಳಿಕ ಪರಿಸರ ಮಾಲಿನ್ಯವಾಗಿ, ಜಲಚರಗಳು ಸತ್ತು, ನದಿನೀರು ಹಾಳಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಇದರಂತೆ 2012ರ ಜ.3ರಂದು ಕಂಪೆನಿಯ ಪರವಾನಿಗೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಗ್ರಾಪಂ ತೆಗೆದುಕೊಂಡಿತ್ತು.
ಈ ಆದೇಶದ ವಿರುದ್ಧ ಫಿಶ್ಮಿಲ್ ಉಚ್ಚ ನ್ಯಾಯಾಲಯಿಂದ ತಡೆಯಾಜ್ಞೆ ತಂದಿದ್ದರೂ, ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೂ ಸಹ ಕಂಪೆನಿ ಕರಾವಳಿ ನಿಯಂತ್ರಣ ವಲಯ ಕಾನೂನನ್ನು ಉಲ್ಲಂಘಿಸಿ, ಕಾರ್ಖಾನೆಯ ಸಾಮರ್ಥ್ಯವನ್ನು 50 ಟನ್ನಿಂದ 800ಟನ್ಗೆ ಹೆಚ್ಚಿಸಿ, ನದಿಗೆ ಸಾವಿರಾರು ಲೋಡ್ ಮಣ್ಣು ತುಂಬಿಸಿ ಯಾವುದೇ ಪರವಾನಿಗೆ ಇಲ್ಲದೇ ಹೆಚ್ಚುವರಿ ಕಟ್ಟಡವನ್ನು ನಿರ್ಮಿಸಿತ್ತು. ಅದಕ್ಕೆ ಯಂತ್ರೋಪಕರಣಗಳನ್ನು ಅಳವಡಿಸಿತ್ತು.
ಈ ಆದೇಶದ ವಿರುದ್ಧ ಫಿಶ್ಮಿಲ್ ಉಚ್ಚ ನ್ಯಾಯಾಲಯಿಂದ ತಡೆಯಾಜ್ಞೆ ತಂದಿದ್ದರೂ, ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೂ ಸಹ ಕಂಪೆನಿ ಕರಾವಳಿ ನಿಯಂತ್ರಣ ವಲಯ ಕಾನೂನನ್ನು ಉಲ್ಲಂಘಿಸಿ, ಕಾರ್ಖಾನೆಯ ಸಾಮರ್ಥ್ಯವನ್ನು 50 ಟನ್ನಿಂದ 800ಟನ್ಗೆ ಹೆಚ್ಚಿಸಿ, ನದಿಗೆ ಸಾವಿರಾರು ಲೋಡ್ ಮಣ್ಣು ತುಂಬಿಸಿ ಯಾವುದೇ ಪರವಾನಿಗೆ ಇಲ್ಲದೇ ಹೆಚ್ಚುವರಿ ಕಟ್ಟಡವನ್ನು ನಿರ್ಮಿಸಿತ್ತು. ಅದಕ್ಕೆ ಯಂತ್ರೋಪಕರಣಗಳನ್ನು ಅಳವಡಿಸಿತ್ತು. ಕಾನೂನು ಪ್ರಕಾರ ಫಿಶ್ಮಿಲ್ಗೆ 350 ಕೆ.ವಿ.ಎ.ವಿದ್ಯುತ್ ಸಂಪರ್ಕಕ್ಕೆ ಅನುಮತಿ ಇದ್ದರೂ, 1500 ಕೆ.ವಿ.ಎ.ವಿದ್ಯುತ್ ಸಂಪರ್ಕ ಪಡೆದಿರುವ ಕಂಪೆನಿಯ ಕ್ರಮದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಉಚ್ಛನ್ಯಾಯಾಲಯದಿಂದ ಯಥಾಸ್ಥಿತಿಯ ಆದೇಶವಿದ್ದರೂ, ಗ್ರಾಪಂನಿಂದ ಪರವಾನಿಗೆ ಪಡೆಯದೇ, ನಕಲಿ ಪರವಾನಿಗೆ ಪತ್ರ ಸೃಷ್ಟಿಸಿ ಮೆಸ್ಕಾಂನಿಂದ 1500ಕೆ.ವಿ.ಎ.ಗೆ ವಿದ್ಯುತ್ ಸಂಪರ್ಕ ಪಡೆಯಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಅಕ್ರಮಗಳ ಕುರಿತು ಗ್ರಾಮಸ್ಥರು ಗ್ರಾಪಂನ ಗಮನಕ್ಕೆ ತಂದರೂ, ಯಾವುದೇ ತನಿಖೆ ನಡೆಸದೇ, ನ್ಯಾಯಾಲಯಕ್ಕೂ ಯಾವುದೇ ಮಾಹಿತಿ ನೀಡದೇ, ಕಂಪೆನಿಯ ಅಕ್ರಮಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ಇದು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಕೂಡಲೇ ಫಿಶ್ಮಿಲ್ನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಫಿಶ್ಮಿಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಆಗ್ರಹಿಸಿದ್ದಾರೆ.
ಅಕ್ರಮವಾಗಿ ಕಾರ್ಖಾನೆ ನಡೆಸಿ, ಇಷ್ಟು ವರ್ಷದಲ್ಲಿ ಪರಿಸರಕ್ಕೆ ಹಾನಿ ಮಾಡಿ ಜನರಿಗೆ ಕಷ್ಟನಷ್ಟ ಹಾಗೂ ನದಿಯ ಜಲಚರಗಳು ಸಾಯುವಂತೆ ಮಾಡಿದ ಕಂಪೆನಿಯ ಅಪರಾಧವನ್ನು ಗಂಭೀರವಾಗಿ ಪರಿಗಣಿಸಿ ಹಸಿರುಪೀಠದಲ್ಲಿ ದಾವೆ ಹೂಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತತ್ಕ್ಷಣ ಫಿಶ್ಮಿಲ್ ವಿರುದ್ಧ ಕ್ರಮಕೈಗೊಳ್ಳದಿದ್ದರೆ, ಇದರಿಂದಾಗುವ ಕಷ್ಟನಷ್ಟಗಳಿಗೆ ಗ್ರಾಪಂ ಹೊಣೆಯಾಗಿರುತ್ತದೆ ಎಂದು ಉದ್ಯಾವರ ಗ್ರಾಮಸ್ಥರು ಮನವಿಯಲ್ಲಿ ಎಚ್ಚರಿಸಿದ್ದಾರೆ.