ಇ-ಪೇಮೆಂಟ್, ರೇಮ್ಸ್ ಖಂಡಿಸಿ ಎಪಿಎಂಸಿ ವರ್ತಕರ ಪ್ರತಿಭಟನೆ

ಕಡೂರು, ಆ. 29: ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಇ-ಪೇಮೆಂಟ್ ಮತ್ತು ರೇಮ್ಸ್ ವಿರೋಧಿಸಿ ಕಡೂರು ಎಪಿಎಂಸಿ ವರ್ತಕರು ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಗ್ಗೆ ಪಟ್ಟಣದ ಎಪಿಎಂಸಿ ಆವರಣದಿಂದ ವರ್ತಕರ ಸಂಘದ ಅಧ್ಯಕ್ಷ ಬಿ.ಎನ್. ಪ್ರಕಾಶ್ಕುಮಾರ್ ಮತ್ತು ಎಪಿಎಂಸಿ ನಿರ್ದೇಶಕ ಎಚ್.ಎಂ. ತಮ್ಮಯ್ಯ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಕಡೂರು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಬಿ.ಎನ್.ಪ್ರಕಾಶ್ಕುಮಾರ್ ಮಾತನಾಡಿ, ರಾಜ್ಯಾದ್ಯಂತ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಇ-ಪೇಮೆಂಟ್ ಜಾರಿಗೆ ತರಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಇ-ಪೆಮೆಂಟ್ ಮತ್ತು ರೇಮ್ಸ್ (ರಾಷ್ಟ್ರೀಯ ಇ ಮಾರ್ಕೆಟಿಂಗ್ ಸರ್ವೀಸ್) ಅವಶ್ಯಕತೆ ಇಲ್ಲ. ಒಂದು ದೇಶ ಒಂದು ತೆರಿಗೆ ಜಿಎಸ್ಟಿ ಮಾದರಿಯಲ್ಲಿರುವಂತೆ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ದೇಶ, ಒಂದು ಸೆಸ್ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಎಪಿಎಂಸಿ ನಿರ್ದೇಶಕ ಎಚ್.ಎಂ. ತಮ್ಮಯ್ಯ ಮಾತನಾಡಿ, ಕೆಲವೊಂದು ರಾಜ್ಯಗಳಲ್ಲಿ ಶೇ.0.75, ಶೇ.0.85, ಶೇ.0.90, ಹಾಗೂ ಶೇ. 1.00 ಆದರೆ ನಮ್ಮ ರಾಜ್ಯದಲ್ಲಿ ಶೇ.1.5 ತೆರಿಗೆ ಇದೆ. ಆದ್ದರಿಂದ ಒಂದೇ ದರದ ಸೇಸ್ ಆಚರಣೆ ಮಾಡುವಂತಾಗಬೇಕು. ಈ ಮೇಲಿನ ಅಂಶಗಳನ್ನು ಸರ್ಕಾರ ಈಡೇರಿಸುವವರೆಗೆ ವರ್ತಕರು ಇಂದಿನಿಂದ ವಹಿವಾಟವನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ನಿರ್ಣಹಿಸಲಾಗಿದೆ ಎಂದು ಹೇಳಿದರು.
ಸರ್ಕಾರ ಅದಷ್ಟು ಶೀಘ್ರವಾಗಿ ರೈತರು, ವರ್ತಕರ ಹಾಗೂ ಸಮಾಜದ ಸಾಮರಸ್ಯದ ಹಿತ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವರ್ತಕರ ಸಂಘದ ಉಪಾಧ್ಯಕ್ಷ ಕೆ.ಪಿ.ರಂಗನಾಥ್, ಕಾರ್ಯದರ್ಶಿ ಕೆ.ವಿಶ್ವನಾಥ್, ಸಹ ಕಾರ್ಯದರ್ಶಿ ಎಚ್. ಹರೀಶ್ಕುಮಾರ್, ಡಿ.ಎಸ್.ಹನುಮಂತರಾಜು, ವಸೀಂ, ರಾಘವೇಂದ್ರಪ್ರಸಾದ್, ಸಿದ್ದರಾಮಪ್ಪ, ರಮೇಶ್, ಬಿ.ಎಸ್.ಸುದೀಂದ್ರ ಮತ್ತಿತರರಿದ್ದರು.







