ಡಿಸಿ, ಎಸ್ಪಿಗೆ ಬಕ್ರೀದ್ ಹಬ್ಬದ ಶುಭ ಕೋರಿದ ಪುಟಾಣಿಗಳು
ಉಡುಪಿ, ಆ. 30: ಉದ್ಯಾವರ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಪುಟಾಣಿಗಳು ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ್ ಅವರಿಗೆ ಸಿಹಿತಿಂಡಿ ವಿತರಿಸಿ, ಉಡುಗೋರೆ ನೀಡಿ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಕಳೆದ ವರ್ಷದಂತೆ ಈ ವರ್ಷವೂ ಎಂಇಟಿ ಸ್ಕೂಲ್ನ ನರ್ಸರಿ, ಎಲ್ಕೆಜಿ, ಯುಕೆಜಿಯ ಸುಮಾರು 80 ಪುಟಾಣಿಗಳು ಶಿಕ್ಷಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ, ವೃದ್ಧಾಶ್ರಮ, ರಾಜ್ಯ ನಿಲಯಗಳಿಗೆ ತೆರಳಿ ಈ ವಿಶೇಷ ಕಾರ್ಯಕ್ರಮವನ್ನು ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಮೊದಲು ಹಬ್ಬದ ಶುಭಾಶಯ ಹೇಳಿದ ಮಕ್ಕಳು, ತಾವು ತಂದಿದ್ದ ಗ್ರೀಟಿಂಗ್ಸ್ ಹಾಗೂ ಉಡುಗೊರೆಗಳನ್ನು ನೀಡಿದರು. ಅದೇ ರೀತಿ ಕಚೇರಿಯಲ್ಲಿದ್ದ ಇತರರಿಗೂ ಮಕ್ಕಳು ಸಿಹಿ ಹಂಚಿದರು. ಮಕ್ಕಳೊಂದಿಗೆ ಬೆರೆತು ಸಂಭ್ರಮಿಸಿದ ಡಿಸಿ ಹಾಗೂ ಎಸ್ಪಿ ಮಕ್ಕಳಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಎಸ್ಪಿ ಡಾ. ಸಂಜೀವ ಪಾಟೀಲ್ ಮಗುವೊಂದನ್ನು ಎತ್ತಿಕೊಂಡು ಮುದ್ದು ಮಾಡಿರುವುದು ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿ ಖಲೀಲ್ ಅಹ್ಮದ್ ಕಾರ್ಯಕ್ರಮದ ಉದ್ದೇಶ ಹಾಗೂ ಈದ್ ಸಂದೇಶವನ್ನು ಅಧಿಕಾರಿಗಳಿಗೆ ತಿಳಿಸಿದರು. ತದನಂತರ ಮಕ್ಕಳು ಕಲ್ಯಾಣಪುರದ ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿರುವ ಎಲ್ಲಾ 55 ವೃದ್ಧರಿಗೆ ಸಿಹಿತಿಂಡಿ ಹಾಗೂ ಉಡುಗೋರೆ ನೀಡಿ ಹಬ್ಬದ ಶುಭಾಶಯ ಹೇಳಿದರು. ಇದೇ ವೇಳೆ ಮಕ್ಕಳ ಪೋಷಕರೊಬ್ಬರು ಎಲ್ಲಾ ವೃದ್ಧರಿಗೆ ಬೆಡ್ಶೀಟ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಅಲ್ಲಿಂದ ನಿಟ್ಟೂರಿನ ರಾಜ್ಯ ನಿಲಯಕ್ಕೆ ತೆರಳಿದ ವಿದ್ಯಾರ್ಥಿಗಳು ಅಲ್ಲಿರುವ ಮಕ್ಕಳು ಹಾಗೂ ಮಹಿಳೆಯರಿಗೆ ಹಬ್ಬದ ಶುಭಾಶಯ ಕೋರಿ ಸಿಹಿ ತಿಂಡಿ ವಿತರಿಸಿ ಹಬ್ಬದ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲೆ ಡಾ. ಜುನೈದಾ ಸುಲ್ತಾನ್, ಶಿಕ್ಷಕಿಯರಾದ ರಶ್ಮಿತಾ, ಸಂಜಿತ ಜೈನ್, ಆಶಾಲತಾ, ಅಭೀರ್ ಮೊದಲಾದವರು ಉಪಸ್ಥಿತರಿದ್ದರು.