ಮನಪಾ ಜನರ ಸಮಸ್ಯೆ ಆಲಿಸಲು ವಾಟ್ಸಾಪ್ ಗ್ರೂಪ್: ಮೇಯರ್
ಮಂಗಳೂರು, ಆ. 30: ಪಾಲಿಕೆ ವ್ಯಾಪ್ತಿಯ ಜನರ ಸಮಸ್ಯೆ, ಅಹವಾಲುಗಳನ್ನು ಆಲಿಸಲು ವಾಟ್ಸಪ್ ಗ್ರೂಪ್ ರಚಿಸಿ, ವಾಟ್ಸಪ್ ಸಂಖ್ಯೆಯನ್ನು ಸಾರ್ವಜನಿಕರಿಗೆ ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.
ಮನಪಾ ಮೇಯರ್ ಕಚೇರಿಯಲ್ಲಿ ಬುಧವಾರ ನಡೆದ ‘ಮೇಯರ್ ನೇರ ಫೋನ್ ಇನ್ ಕಾರ್ಯಕ್ರಮದ ಸಂದರ್ಭ ಅವರು ಈ ವಿಷಯ ತಿಳಿಸಿದರು.
ನಗರದ ಜನತೆ ವಾಟ್ಸಾಪ್ ಮೂಲಕ ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಲ್ಲಿ ಅದನ್ನು ತಕ್ಷಣ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಮೇರಿಹಿಲ್ನ ಹೆಲಿಪ್ಯಾಡ್ ಸಮೀಪದ ನಿವಾಸಿ ಮಹಿಳೆಯೊಬ್ಬರು ಮೇಯರ್ಗೆ ಕರೆ ಮಾಡಿ, ಹೆಲಿಪ್ಯಾಡ್ ಬಳಿ ಪ್ರತಿದಿನ ಅನೈತಿಕ ಚಟುವಟಿಕೆ ನಡೆಯುತ್ತಿದೆ. ಇದರಿಂದಾಗಿ ಮಹಿಳೆಯರು ಆ ಪ್ರದೇಶದಲ್ಲಿ ನಡೆದಾಡದಂತಾಗಿದೆ. ಅನೈತಿಕ ಚಟುವಟಿಕೆ ನಿಲ್ಲಿಸಲು ಕ್ರುಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಈ ಬಗ್ಗೆ ಪೊಲೀಸ್ ಇಲಾಖೆ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಭರವಸೆ ನೀಡಿದರು.
ಮೇಯರ್ ಅವರ ನಾಲ್ಕನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಒಂದು ಗಂಟೆ ಅವಧಿಯಲ್ಲಿ 26 ಮಂದಿಯ ಕರೆ ಸ್ವೀಕರಿಸಿದ ಕವಿತಾ ಸನಿಲ್, ಪ್ರತಿಕ್ರಿಯೆ ನೀಡಿದರು.
ಲಾಲ್ಭಾಗ್ ನಿವಾಸಿಯೋರ್ವರು ಕರೆ ಮಾಡಿ ಕಸ, ತ್ಯಾಜ್ಯಗಳನ್ನು ಪಕ್ಕದ ತೋಡಿಗೆ ಎಸೆಯುತ್ತಿದ್ದಾರೆ. ಜೋರಾಗಿ ಮಳೆ ಬಂದಾಗ ತ್ಯಾಜ್ಯ ಮಳೆಯೊಂದಿಗೆ ಕೊಚ್ಚಿ ಹೋಗುತ್ತಿದೆ. ಉಳಿದ ಸಮಯ ಸೊಳ್ಳೆ ಉತ್ಪತ್ತಿ ಮತ್ತು ದುರ್ವಾಸನೆಗೆ ಕಾರಣವಾಗುತ್ತಿದೆ ಎಂದು ದೂರಿದಾಗ, ತ್ಯಾಜ್ಯ ಎಸೆಯುವವರಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಭರವಸೆ ನೀಡಿದರು.
ಬಿಕರ್ನಕಟ್ಟೆ ಮೇಲ್ಸೆತುವೆ ಬಳಿ ತೋಡಿಗೆ ಕಸ ಹಾಕಲಾಗುತ್ತಿದೆ. ಇದರಿಂದ ತೋಡು ಬಂದ್ ಆಗಿ ಸಮಸ್ಯೆಯಾಗಿದೆ ಎಂದು ಬಿಕರ್ನಕಟ್ಟೆ ನಿವಾಸಿ ದೂರಿದರು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಮೇಯರ್ ಸೂಚಿಸಿದರು.
ಪಂಪ್ವೆಲ್ನಲ್ಲಿ ತೋಡು ಕ್ಲೀನ್ ಮಾಡಿಲ್ಲ. ಇದರಿಂದಾಗಿ ಸಮಸ್ಯೆಯಾಗಿದೆ ಎಂದು ಸೌಮ್ಯ ಎಂಬವರು ತಿಳಿಸಿದರು. ಗುರುವಾರ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗೆ ಮೇಯರ್ ಸೂಚಿಸಿದರು.
ಕೊಟ್ಟಾರ ಚೌಕಿಯಿಂದ ಪೋರ್ತ್ ಮೈಲ್ವರೆಗೆ ಸಮರ್ಪಕ ಚರಂಡಿ ನಿರ್ಮಾಣವಾಗದ ಕಾರಣ ಭಾರಿ ಮಳೆ ಬಂದಾಗ ಪ್ರವಾಹದ ಸ್ಥಿತಿ ಉಂಟಾಗುತ್ತದೆ ಎಂದು ಸಾರ್ವಜನಿಕರೊಬ್ಬರು ಸಮಸ್ಯೆ ಹೇಳಿಕೊಂಡರು. ಬಿಡುಗಡೆಯಾದ ಅನುದಾನಕ್ಕೆ ಅನುಗುಣವಾಗಿ ಈ ಪ್ರದೇಶದಲ್ಲಿ ಈಗಾಗಲೇ ಚರಂಡಿ ಕೆಲಸ ಆಗುತ್ತಿದೆ. ಮುಂದಕ್ಕೆ ಪೂರ್ಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಮೇಯರ್ ಹೇಳಿದರು.
ಬೋಂದೆಲ್ ಬಳಿಯ ವಿಜಯ ಬ್ಯಾಂಕ್ ರಸ್ತೆಗೆ ಕಾಂಕ್ರೀಟ್ ಹಾಕಬೇಕು ಎಂದು ದೀಪಕ್ ಎಂಬವರು ಒತ್ತಾಯಿಸಿದರು. ಈ ಬಗ್ಗೆ ಈಗಾಗಲೇ ಟೆಂಡರ್ ಆಗಿದೆ ಎಂದು ಮೇಯರ್ ಹೇಳಿದರು. ಬಂದರ್ನ ಜೆಎಂ ಕ್ರಾಸ್ ರಸ್ತೆಯಲ್ಲಿ ರಿಕ್ಷಾ ಸಹಿತ ಇತರ ರಿಪೇರಿ ಕೆಲಸಗಳನ್ನು ರಸ್ತೆಯಲ್ಲೇ ಮಾಡಲಾಗುತ್ತಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬಂದರು ಪೊಲೀಸ್ ಠಾಣೆಯಿಂದ ಸ್ಟೇಟ್ಬ್ಯಾಂಕ್ ಸಂಪರ್ಕಿಸುವ ಬೀಬಿ ಅಲಾಬಿ ರಸ್ತೆ ಹದಗೆಟ್ಟಿದೆ ಎಂದು ನೌಫಲ್ ಎಂಬವರು ದೂರು ನೀಡಿದರು.
ರಸ್ತೆಯಲ್ಲಿ ರಿಕ್ಷಾ ರಿಪೇರಿ ಬಗ್ಗೆ ಮನಪಾ ಮತ್ತು ಸಂಚಾರಿ ಪೊಲೀಸರು ಜಂಟಿಯಾಗಿ ಕ್ರಮ ಕೈಗೊಳ್ಳುತ್ತೇವೆ. ಮಳೆಗಾಲ ಮುಗಿದ ಬಳಿಕ ಹದಗೆಟ್ಟ ರಸ್ತೆಗಳಿಗೆ ಡಾಂಬರ್ ಹಾಕಲಾಗುವುದು ಎಂದು ಕವಿತಾ ಸನಿಲ್ ಭರವಸೆ ನೀಡಿದರು.
ವಾಮಂಜೂರಿನಲ್ಲಿ ಹಿಂದು ರುದ್ರಭೂಮಿ ನಿರ್ಮಿಸಬಾರದು ಎಂದು ಮಹಿಳೆಯೊಬ್ಬರು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್, ವಾಮಂಜೂರು ಪ್ರದೇಶದಲ್ಲಿ ಹಿಂದು ರುದ್ರಭೂಮಿ ಇಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿ ರುದ್ರಭೂಮಿಯ ಅಗತ್ಯವಿದೆ ಎಂದು ಮೇಯರ್ ಹೇಳಿದರು.
ಉಜ್ಜೋಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ರಸ್ತೆ ಅಗೆದು ಹಾಕಿದ ಕಾರಣ ಒಳರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ರಸ್ತೆಯಲ್ಲಿ ನಡೆದಾಡಲೂ ಆಗುತ್ತಿಲ್ಲ ಎಂದು ಪ್ರಾರ್ಥನಾ ಉಜ್ಜೋಡಿ ಆಕ್ಷೇಪಿಸಿದರು. ಸಂಬಂಧಿಸಿದ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮೇಯರ್ ಸೂಚಿಸಿದರು.
ಪಚ್ಚನಾಡಿ, ಕುಡುಪು, ವಾಮಂಜೂರು ಪ್ರದೇಶದ ಜನರು ನೆಮ್ಮದಿ ಕೇಂದ್ರಕ್ಕೆ ಗುರುಪುರ ಕೈಕಂಬಕ್ಕೆ ತೆರಳಬೇಕು. ಅಲ್ಲಿ ಒಂದು ಕಂಪ್ಯೂಟರ್ ಮಾತ್ರ ಇದೆ. ಇದರಿಂದಾಗಿ ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಪದ್ಮನಾಭ ಪೂಜಾರಿ ಹೇಳಿದರು. ಈ ಬಗ್ಗೆ ಸಂಬಂಧಪಟ್ಟವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಹೇಳಿದರು.
ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಆಯುಕ್ತ ಮಹಮ್ಮದ್ ನಝೀರ್ ಉಪಸ್ಥಿತರಿದ್ದರು.