ಪ್ರಯಾಣ ಭತ್ತೆ ಪಡೆದು ಸರಕಾರದ ಬೊಕ್ಕಸಕ್ಕೆ ನಷ್ಟ ಪ್ರಕರಣ: ಮೇಲ್ಮನೆ ಎಂಟು ಸದಸ್ಯರಿಗೆ ಅನರ್ಹತೆ ಭೀತಿ
ಬೆಂಗಳೂರು, ಆ. 30: ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಲು ನಗರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ, ಚುನಾವಣೆ ಬಳಿಕ ಬೇರೆ ವಿಳಾಸ ನೀಡಿ ವಿಧಾನ ಪರಿಷತ್ನಿಂದ ಪ್ರಯಾಣ ಮತ್ತು ತುಟ್ಟಿ ಭತ್ತೆ ಪಡೆದಿರುವ ಸಚಿವ ಸ್ಥಾನಕಾಂಕ್ಷಿ ಆರ್.ಬಿ.ತಿಮ್ಮಾಪುರ ಸೇರಿ ಎಂಟು ಮಂದಿ ಪರಿಷತ್ ಸದಸ್ಯರಿಗೆ ಅನರ್ಹತೆ ಭೀತಿ ಆವರಿಸಿದೆ.
ಮೇಲ್ಮನೆ ಸದಸ್ಯರಾದ ಆರ್.ಬಿ.ತಿಮ್ಮಾಪೂರ, ಅಲ್ಲಂ ವೀರಭದ್ರಪ್ಪ, ರಘು ಆಚಾರ್, ಎನ್.ಎಸ್.ಬೋಸರಾಜ್, ಎಸ್.ರವಿ, ಸಿ.ಆರ್.ಮನೋಹರ್, ಅಪ್ಪಾಜಿಗೌಡ ಮತ್ತು ಎಂ.ಡಿ.ಲಕ್ಷ್ಮಿ ನಾರಾಯಣ ಬೆಂಗಳೂರು ಮತದಾರರ ಪಟ್ಟಿಗೆ ಹೆಸರು ಸೇರಿಸಿ, ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು.
ಆ ಬಳಿಕ ಕಾಂಗ್ರೆಸ್ ಪಕ್ಷದ ಐವರು, ಜೆಡಿಎಸ್ನ ಇಬ್ಬರು ಹಾಗೂ ಓರ್ವ ಪಕ್ಷೇತರ ಸದಸ್ಯ ಸೇರಿ 8 ಮಂದಿ ವಿಧಾನ ಪರಿಷತ್ ಸದಸ್ಯರು ತಮ್ಮ ಮೂಲ ವಿಳಾಸ ನೀಡಿ ಪ್ರಯಾಣ ಮತ್ತು ತುಟ್ಟಿ ಭತ್ತೆ ಪಡೆಯುವ ಮೂಲಕ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆಂದು ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಭಾಪತಿ ಡಿ.ಎಚ್.ಶಂಕರ ಮೂರ್ತಿ ತಿಳಿಸಿದ್ದಾರೆ.
ಬುಧವಾರ ವಿಧಾನ ಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎಂಟು ಮಂದಿ ಸದಸ್ಯರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ಬಿಬಿಎಂಪಿ ಆಂತರಿಕ ತನಿಖೆ ವರದಿಯನ್ನು ತಾನು ಇನ್ನೂ ಪರಿಶೀಲಿಸಿಲ್ಲ. ಶೀಘ್ರದಲ್ಲೇ ವರದಿ ತರಿಸಿಕೊಂಡು ಪರಿಶೀಲನೆ ನಡೆಸುತ್ತೇನೆ ಎಂದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯದ ಅಡ್ವೋಕೇಟ್ ಜನರಲ್ ಅವರನ್ನು ಎರಡು ಬಾರಿ ಕರೆಸಿಕೊಂಡು ಸಮಾಲೋಚನೆ ನಡೆಸಿದ್ದೇನೆ. ಶೀಘ್ರದಲ್ಲೇ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಯನ್ನು ಕರೆಸಿಕೊಂಡು ಚರ್ಚಿಸಲಿದ್ದೇನೆ. ಆ ಬಳಿಕ ಈ ಪ್ರಕರಣ ಸಂಬಂಧ ದೂರುದಾರ ಹಾಗೂ ಆರೋಪ ಎದುರಿಸುತ್ತಿರುವ ಸಂಬಂಧಿಸಿದ ಪರಿಷತ್ನ ಎಂಟು ಮಂದಿ ಸದಸ್ಯರನ್ನು ಕರೆಸಿ ವಿಚಾರಣೆ ನಡೆಸಲಿದ್ದೇನೆ. ಅನಂತರ ಈ ಪ್ರಕರಣದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಶಂಕರ ಮೂರ್ತಿ ತಿಳಿಸಿದರು.
ಭ್ರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಸದಸ್ಯತ್ವ ಅನರ್ಹತೆ ವ್ಯಾಪ್ತಿಗೂ ಬರಲಿದ್ದು, ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕಿದೆ. ತಾನು ಕೈಗೊಳ್ಳುವ ತೀರ್ಮಾನ ಕೋರ್ಟ್ನಲ್ಲಿಯೂ ಪ್ರಶ್ನಿಸಲು ಸಾಧ್ಯವಿಲ್ಲ. ಆದುದರಿಂದ ಅತ್ಯಂತ ಎಚ್ಚರಿಕೆಯಿಂದ ಕಾನೂನು ಅನ್ವಯ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಮುಂದಿನ ಅಧಿವೇಶನದ ವರೆಗೂ ಕಾಯದೆ ಆದಷ್ಟು ಶೀಘ್ರದಲ್ಲೇ ಈ ಸಂಬಂಧ ನಿರ್ಧಾರ ಕೈಗೊಳ್ಳುವೆ ಎಂದರು.
‘ಆರ್.ಬಿ.ತಿಮ್ಮಾಪುರ್(ಬಾಗಲಕೋಟೆ), ಅಲ್ಲಂ ವೀರಭದ್ರಪ್ಪ(ಬಳ್ಳಾರಿ), ಲಕ್ಷ್ಮಿನಾರಾಯಣ (ತುರುವೇಕೆರೆ), ಮನೋಹರ್ (ಕೋಲಾರ), ಬೋಸರಾಜ್ (ರಾಯಚೂರು), ಅಪ್ಪಾಜಿಗೌಡ (ಮಂಡ್ಯ), ಎಸ್. ರವಿ (ರಾಮನಗರ) ಮತ್ತು ರಘು ಆಚಾರ್ (ಚಿತ್ರದುರ್ಗ) ತಪ್ಪು ವಿಳಾಸ ನೀಡಿ ಭತ್ತೆ ಪಡೆದಿದ್ದಾರೆ’.







