ಯುವಜನರು ಉದ್ಯೋಗದಾತರಾಗಬೇಕು: ಟಿ.ಬಿ.ಜಯಚಂದ್ರ

ತುಮಕೂರು, ಆ.30: ರಾಜ್ಯದಲ್ಲಿ ತುಮಕೂರು ನಗರವು ಕೈಗಾರಿಕಾ ರಂಗದಲ್ಲಿ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿದ್ದು,ಯುವಜನರು ಉದ್ಯೋಗ ಅರಸುತ್ತಾ ಹೋಗುವ ಬದಲು ಉದ್ಯಮ ಸ್ಥಾಪಿಸಿ, ತಾವೇ ಉದ್ಯೋಗ ನೀಡುವಂತಹ ಸ್ಥಿತಿಗೆ ಬರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ತುಮಕೂರು ವಿಶ್ವವಿದ್ಯಾಲಯದ ಡಾ.ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಉದ್ಯಮಶೀಲರಿಗೆ ವಿಫುಲವಾದ ಅವಕಾಶಗಳಿರುವುದರಿಂದ ಜಿಲ್ಲೆಯ ಯುವಕರು ಉದ್ಯೋಗ ಅರಸಿ ಬೇರೆಡೆಗೆ ಹೋಗುವ ಬದಲು ತಾವೇ ಉದ್ಯೋಗದಾತರಾಗಲು ಮುಂದೆ ಬರಬೇಕೆಂದರು.
ಕೈಗಾರಿಕೆಗಳು, ಉದ್ದಿಮೆಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳಾದ ನೀರು, ವಿದ್ಯುತ್, ರಸ್ತೆ, ಇವೇ ಮುಂತಾದವುಗಳು ತುಮಕೂರಿನಲ್ಲಿ ಲಭ್ಯವಿರುವುದರಿಂದ ಜಪಾನ್ ದೇಶದ ಉದ್ದಿಮೆದಾರರು ಇಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿದ್ದಾರೆ. ಉದ್ದಿಮೆಗಳನ್ನು ಸ್ಥಾಪಿಸಲು ಮುಂದೆ ಬರುವ ಯುವಕರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆರ್ಥಿಕ, ತಾಂತ್ರಿಕ ನೆರವನ್ನು ನೀಡಲಿವೆ ಎಂದು ತಿಳಿಸಿದರು.
ಅಸೋಚಾಮ್ನ ಅಧ್ಯಕ್ಷ ಆರ್.ಶಿವಕುಮಾರ್ ಮಾತನಾಡಿ, ಜಪಾನ್ ದೇಶ ಭಾರತದ 1.45 ಲಕ್ಷ ಇಂಜಿನಿಯರ್ಗಳನ್ನು ಕಳುಹಿಸುವಂತೆ ಬೇಡಿಕೆ ಇಟ್ಟಿದೆ.ಈಗಾಗಲೇ 200 ಇಂಜಿನಿಯರ್ಗಳು ಜಪಾನ್ ದೇಶಕ್ಕೆ ತೆರಳಲು ಹಾಗೂ ಜಪಾನ್ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಯಲು ಮುಂದೆ ಬಂದಿದ್ದು, ಇವರಲ್ಲಿ 47 ಜನ ಇಂಜಿನಿಯರ್ಗಳು ಈ ಉದ್ದೇಶಕ್ಕಾಗಿ ಜಪಾನ್ ದೇಶಕ್ಕೆ ತೆರಳಿದ್ದಾರೆ. ಇನ್ನುಳಿದವರೂ ಜಪಾನ್ ದೇಶಕ್ಕೆ ತೆರಳಲು ರೂ. 20 ಲಕ್ಷ ವೆಚ್ಚವಾಗಲಿದ್ದು, ಜಪಾನ್ ದೇಶಕ್ಕೆ ತೆರಳಲು ಸರಕಾರ ಇವರಿಗೆ ಸಾಲದ ರೂಪದಲ್ಲಿ ಹಣಕಾಸಿನ ನೆರವನ್ನು ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ.ವೆಂಕಟೇಶ್ವರಲು, ಸಿಡಿಬಿಯ ಜನರಲ್ ಮ್ಯಾನೇಜರ್ ಎ.ಸಿ.ಸಾಹೂ, ಇನ್ಪೋಫೇಸ್ನ ಅಧ್ಯಕ್ಷ ಹಾಗೂ ಎಂ.ಡಿ.ಕಿಶೋರ್ ಜಾಗೀರ್ದಾರ್, ಕಾಸೀಯಾದ ರೇಖಾ, ರೋಟರಿ ಜಿಲ್ಲಾ ಗೌರ್ನರ್ ಆಶಾ ಪ್ರಸನ್ನ, ರಂಗಪ್ರಸಾದ್ ಮುಂತಾದವರು ಹಾಜರಿದ್ದರು.







