ಧೋನಿಯ 300ನೆ ಪಂದ್ಯದಲ್ಲಿ ಭಾರತದ ಗೆಲುವಿನ ಚಿತ್ತ
ಆ.31ರಂದು ಶ್ರೀಲಂಕಾ ವಿರುದ್ಧ ನಾಲ್ಕನೆ ಏಕದಿನ ಪಂದ್ಯ

ಕೊಲಂಬೊ, ಆ.30: ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ 3-0 ಅಂತರದಲ್ಲಿ ಸರಣಿ ಗೆಲುವಿಗೆ ದೊಡ್ಡ ಕೊಡುಗೆ ನೀಡಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಶ್ರೀಲಂಕಾ ವಿರುದ್ಧ ಗುರುವಾರ ನಡೆಯಲಿರುವ ನಾಲ್ಕನೆ ಏಕದಿನ ಪಂದ್ಯ ಅತ್ಯಂತ ಸ್ಮಣೀಯ ಪಂದ್ಯವಾಗಿದೆ.
ಧೋನಿ ಪಾಲಿಗೆ ಇದು 300ನೆ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸುವ ಮೂಲಕ ಗೆಲುವಿನ ಅಜೇಯ ಓಟವನ್ನು ಮುಂದುವರಿಸುವ ಯೋಜನೆಯಲ್ಲಿದೆ. ವಿಶ್ವ ಕ್ರಿಕೆಟ್ನಲ್ಲಿ ಗ್ರೇಟೆಸ್ಟ್ ಫಿನಿಶರ್ ಎಂಬ ಖ್ಯಾತಿಯನ್ನು ಹೊಂದಿರುವ ಧೋನಿ 300 ಪಂದ್ಯವನ್ನಾಡಿದ ಆಟಗಾರರ ಕ್ಲಬ್ ಸೇರಲಿದ್ದಾರೆ. ಸಚಿನ್ ತೆಂಡುಲ್ಕರ್(463), ರಾಹುಲ್ ದ್ರಾವಿಡ್(344), ಮುಹಮ್ಮದ್ ಅಝರುದ್ದೀನ್(334), ಸೌರವ್ ಗಂಗುಲಿ(311) ಮತ್ತು ಯುವರಾಜ್ ಸಿಂಗ್(304) ಮುನ್ನೂರಕ್ಕೂ ಅಧಿಕ ಏಕದಿನ ಪಂದ್ಯಗಳನ್ನಾಡಿದ್ದ ಭಾರತದ ಕ್ರಿಕೆಟ್ ಆಟಗಾರರು.
ಧೋನಿ ಸತತ ಎರಡು ಪಂದ್ಯಗಳಲ್ಲಿ ಸೋಲಿನ ದವಡೆಗೆ ಸಿಲುಕಿದ್ದ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದಾರೆ. ಭಾರತ 3-0 ಅಂತರದಲ್ಲಿ ಗೆಲುವು ದಾಖಲಿಸಿರುವ ಹಿನ್ನೆಲೆಯಲ್ಲಿ ನಾಲ್ಕನೆ ಪಂದ್ಯದಲ್ಲಿ ಯಾವುದೇ ಒತ್ತಡವಿಲ್ಲದೆ ಆಡಲಿದೆ. ಧೋನಿ ಕಳೆದ ಎರಡು ಪಂದ್ಯಗಳಲ್ಲಿ ಒತ್ತಡದ ಪರಿಸ್ಥಿತಿಯಲ್ಲಿ ಅಜೇಯ 45 ರನ್ ಮತ್ತು 67 ರನ್ಗಳನ್ನು ಕಲೆ ಹಾಕಿದ್ದಾರೆ.
ಈ ಕಾರಣದಿಂದಾಗಿ ನಾಯಕ ವಿರಾಟ್ ಕೊಹ್ಲಿ ಅವರು ಅಂತಿಮ ಹನ್ನೊಂದರಲ್ಲಿ ಸ್ಥಾನ ಗಿಟ್ಟಿಸಲು ಕಾಯುತ್ತಿರುವ ಯುವ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ. ಕುಲದೀಪ್ ಯಾದವ್, ಮನೀಷ್ ಪಾಂಡ್ಯ, ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್ ಠಾಕೂರ್ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯದಲ್ಲಿ ಔಟಾಗದೆ 82 ರನ್ ಗಳಿಸಿದ್ದರು. ಬಳಿಕ ಎರಡು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 3 ಮತ್ತು 4 ರನ್ ಗಳಿಸಿದ್ದಾರೆ. ಕನ್ನಡಿಗ ರಾಹುಲ್ ನಂ.4 ಸ್ಥಾನಕ್ಕೆ ನ್ಯಾಯ ಒದಗಿಸಿಲ್ಲ. ಆಲ್ರೌಂಡರ್ ಕೇದಾರ್ ಜಾಧವ್ ಕಳೆದ ಎರಡು ಪಂದ್ಯಗಳಲ್ಲಿ ಒತ್ತಡಕ್ಕೆ ಸಿಲುಕಿ ಸೊನ್ನೆ ಸುತ್ತಿದ್ದಾರೆ. ಆದರೆ ಸರಣಿಯಲ್ಲಿ 3 ವಿಕೆಟ್ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ ಮೂರು ಪಂದ್ಯಗಳಲ್ಲಿ 2 ವಿಕೆಟ್ ಪಡೆದಿದ್ದಾರೆ. ಈ ಕಾರಣದಿಂದಾಗಿ ನಾಲ್ಕನೆ ಪಂದ್ಯಕ್ಕೆ ಯಾರಾದರೂ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ. ವೇಗಿ ಶಾರ್ದೂಲ್ ಠಾಕೂರ್ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ ಭುವನೇಶ್ವರ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಮೂರು ಪಂದ್ಯಗಳಲ್ಲೂ ಚೆನ್ನಾಗಿ ಆಡಿದ್ದಾರೆ. ಈ ಕಾರಣದಿಂದಾಗಿ ಇವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇಲ್ಲ. ಕುಲದೀಪ್ ಯಾದವ್ ಅವರು ತಂಡದಲ್ಲಿ ಸ್ಥಾನ ಪಡೆದರೆ ಅವರಿಗೆ ಯುಝ್ವೆಂದರ್ ಚಾಹಲ್ ಅಥವಾ ಅಕ್ಷರ್ ಪಟೇಲ್ ಸ್ಥಾನ ತೆರವುಗೊಳಿಸಬೇಕಾಗುತ್ತದೆ.
ಭಾರತ ಕಳೆದ ಮೂರು ಪಂದ್ಯಗಳಲ್ಲಿ ಅಪೂರ್ವ ಗೆಲುವು ದಾಖಲಿಸಿದ್ದರೆ ಶ್ರೀಲಂಕಾ ತಂಡ ಸಮಸ್ಯೆಗಳ ಸರಮಾಲೆಯನ್ನು ಎದುರಿಸುತ್ತಿದೆ. ತವರಿನಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ.ತಂಡದ ಹೀನಾಯ ಸೋಲಿನ ಕಾರಣಕ್ಕಾಗಿ ಆಯ್ಕೆ ಸಮಿತಿ ಮುಖ್ಯಸ್ಥ ಸನತ್ ಜಯ ಸೂರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಂಡದ ಆಟಗಾರರ ಪೈಕಿ ದಿನೇಶ್ ಚಾಂಡಿಮಾಲ್ ಮತ್ತು ಹಂಗಾಮಿ ನಾಯಕ ಚಾಮರಾ ಕಪುಗೆಡೆರ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯ. ಈ ಕಾರಣದಿಂದಾಗಿ ಲಸಿತ್ ಮಾಲಿಂಗ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಲೋಕೇಶ್ ರಾಹುಲ್, ಮನೀಷ್ ಪಾಂಡೆ, ಅಜಿಂಕ್ಯ ರಹಾನೆ, ಕೇದಾರ್ ಜಾಧವ್, ಎಂ.ಎಸ್.ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಝ್ವೆಂದರ್ ಚಾಹಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಶಾರ್ದೂಲ್ ಠಾಕೂರ್.
ಶ್ರೀಲಂಕಾ: ಲಸಿತ್ ಮಾಲಿಂಗ(ನಾಯಕ), ಧನಂಜಯ ಡಿ ಸಿಲ್ವ, ದಿಲ್ಶಾನ್ ಮನಾವೀರ, ಲಹಿರು ತಿರಿಮನ್ನೆ, ಆ್ಯಂಜೆಲೊ ಮ್ಯಾಥ್ಯೂಸ್, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ಕುಶಾಲ್ ಮೆಂಡಿಸ್, ಮಿಲಿಂದಾ ಸಿರಿವರ್ಧನ, ಮಿಲಿಂದಾ ಪುಷ್ಪಕುಮಾರ,ಅಖಿಲಾ ಧನಂಜಯ, ಲಕ್ಷನ್ ಸಂಡಕನ್, ತಿಸ್ಸರಾ ಪೆರೆರಾ, ವನಿಂದು ಹಸರಂಗ, ದುಶ್ಮಂತ ಚಾಮೀರ, ವಿಶ್ವ ಫೆರ್ನಾಂಡೊ, ಉಪುಲ್ ತರಂಗ.
ಪಂದ್ಯದ ಸಮಯ: ಮಧ್ಯಾಹ್ನ 2:30ಕ್ಕೆ ಆರಂಭ.







