ಸೆ.4ರವರೆಗೆ ಬಿಎಸ್ವೈ ಬಂಧಿಸದಂತೆ ಹೈಕೋರ್ಟ್ ಆದೇಶ

ಬೆಂಗಳೂರು, ಆ.31: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಡಾ.ಕೆ.ಶಿವರಾಮ ಕಾರಂತ ಬಡಾವಣೆ ಡಿ-ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೆ.4ಕ್ಕೆ ಮುಂದೂಡಿ, ಬಿಎಸ್ವೈ ಅವರನ್ನು ಮುಂದಿನ ವಿಚಾರಣೆವರೆಗೆ ಬಂಧಿಸದಂತೆ ಎಸಿಬಿಗೆ ಆದೇಶಿಸಿದೆ.
ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ಡಿ-ನೋಟಿಫಿಕೇಷನ್ ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎರಡು ಎಫ್ಐಆರ್ಗಳ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಗಳ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠ ವಿಚಾಣೆಯನ್ನು ಸೆ.4ಕ್ಕೆ ಮುಂದೂಡಿತು.
ಯಡಿಯೂರಪ್ಪ ನೀಡಿದ ಸೂಚನೆ ಮೇರೆಗೆ ಬಿಡಿಎ ಅಧಿಕಾರಿಗಳು ಡಾ.ಶಿವರಾಮ ಕಾರಂತ ಬಡಾವಣೆಗೆ ವಶಪಡಿಸಿಕೊಂಡಿದ್ದ ಸುಮಾರು 3340 ಎಕರೆ ಜಮೀನು ಪೈಕಿ 257 ಎಕರೆ 20.5 ಗುಂಟೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಟ್ಟಿದ್ದಾರೆ. ಅದಕ್ಕೆ ಅಧ್ಯಾದೇಶ ಹೊರಡಿಸಿಲ್ಲ. ಯಡಿಯೂರಪ್ಪ ಅವರ ನಿರ್ದೇಶನವಿದ್ದ ಕಾರಣ ಕೇವಲ ಭೂ ಮಾಲಕರಿಗೆ ಹಿಂಬರಹ ನೀಡಿ, ಭೂ ಸ್ವಾಧೀನದಿಂದ ಜಮೀನು ಕೈ ಬಿಡಲಾಗಿದೆ. ಈ ಬಗ್ಗೆ ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಿಐಡಿಗೆ ತನಿಖೆಗೆ ಆದೇಶಿಸಲು ಬಿಡಿಎ ನಿರ್ದೇಶಿಸಿದ್ದರೂ ಎಫ್ಐಆರ್ ದಾಖಲಾಗಲಿಲ್ಲ. ಅವರ ನಂತರ ಮುಖ್ಯಮಂತ್ರಿಯಾದವರು ಸಿಐಡಿ ತನಿಖೆಗೆ ವಹಿಸದೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಯ ತನಿಖೆಗೆ ಆದೇಶಿಸಿದ್ದರು ಎಂಬ ಆರೋಪ ಬಿಎಸ್ವೈ ಅವರ ಮೇಲಿದೆ.







