ದ.ಕ. ಜಿಲ್ಲೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ
ಶುಭಾಶಯ ವಿನಿಮಯ ಮಾಡಿಕೊಂಡ ಸಾವಿರಾರು ಮುಸ್ಲಿಮ್ರು
ಮಂಗಳೂರು, ಸೆ.1: ದ.ಕ. ಜಿಲ್ಲಾದ್ಯಂತ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಿದರು.
ನಗರದ ಬಾವುಗುಡ್ಡೆಯ ಈದ್ಗಾ ಮಸೀದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪ್ರವಚನ ನಡೆಯಿತು.
ಈದುಲ್ ಅಝ್ಹಾ ಅಥವಾ ಬಕ್ರೀದ್ ಹಬ್ಬವು ಪ್ರವಾದಿ ಇಬ್ರಾಹೀಂ ಅವರ ತ್ಯಾಗ ಬಲಿದಾನದ ಸಂಕೇತವಾಗಿದೆ. ದೇವನ ಅನುಸರಣೆ ಮೂಲಕ ಸಮಾನತೆಯ ಸಂದೇಶವನ್ನು ಹಬ್ಬ ನೀಡುತ್ತದೆ. ನಾಡಿನಲ್ಲಿ ಶಾಂತಿ, ಸಾಮರಸ್ಯ ಸ್ಥಾಪನೆಗಾಗಿ ಯಾವುದೇ ತ್ಯಾಗಕ್ಕೆ ಸಿದ್ಧರಾಗಿರಬೇಕು. ಸಹನೆಯೇ ನಮ್ಮ ಮೂಲಕ ಆಶಯವಾಗಬೇಕು ಎಂದು ಖಾಝಿ ಹೇಳಿದರು.
ಕೇಂದ್ರ ಜುಮ್ಮಾ ಮಸ್ಜಿದ್ ಝೀನತ್ ಭಕ್ಷ್ ಆಡಳಿತ ಸಮಿತಿಯ ಅಧ್ಯಕ್ಷ ಯೆನೆಪೋಯ ಅಬ್ದುಲ್ಲಾ ಕುಂಞಿ ಈದ್ ಸಂದೇಶ ನೀಡಿ, ತ್ಯಾಗ ಬಲಿದಾನ ಮತ್ತು ವಾಗ್ದಾನಕ್ಕೆ ಅಚಲರಾಗಿ ನಿಲ್ಲುವುದು ಹಬ್ಬದ ಆಶಯ. ಜಗತ್ತಿನಿಂದ ಲಕ್ಷಾಂತರ ಸಂಖ್ಯೆಯಲ್ಲಿ ತೆರಳಿರುವವರ ಹಜ್ ಯಾತ್ರೆಯನ್ನು ಅಲ್ಲಾಹನು ಸ್ವೀಕರಿಸಲಿ. ಎಲ್ಲರಿಗೂ ಹಜ್ ಯಾತ್ರೆ ಕೈಗೊಳ್ಳುವ ಅವಕಾಶವನ್ನು ಅಲ್ಲಾಹನು ಕರುಣಿಸಲಿ. ಹಬ್ಬವು ನಮ್ಮಲ್ಲಿ ಶಾಂತಿ, ಸಮಾಧಾನ ಮತ್ತು ಸಾಮರಸ್ಯವನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.
ಶಾಸಕ ಜೆ.ಆರ್.ಲೋಬೊ ಮುಸ್ಲಿಂ ಮುಖಂಡರಿಗೆ ಈದ್ ಶುಭಾಶಯ ಹೇಳಿ, ಹಬ್ಬವು ಜನರ ಮಧ್ಯೆ ವಿಶ್ವಾಸ ವೃದ್ಧಿಸಲಿ ಎಂದು ಹಾರೈಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಝೀನತ್ ಭಕ್ಷ್ ಮಸೀದಿ ಖತೀಬ್ ಸ್ವದಖತುಲ್ಲಾಹ್ ಫೈಝಿ, ಶಾಹ ಅಮೀರ್ ಮಸ್ಜಿದ್ನ ಇಮಾಮ್ ರಿಯಾಝುಲ್ ಹಖ್, ಎಸ್.ಎಂ.ರಶೀದ್, ಕೆ.ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ನಗರದ ಸೇರಿದಂತೆ ಬಹುತೇಕ ಎಲ್ಲ ಮಸೀದಿಗಳಲ್ಲೂ ಪ್ರಾರ್ಥನೆ, ಪ್ರವಚನ ನಡೆಯಿತು. ಈದ್ನ ಸಂದೇಶ ನೀಡಲಾಯಿತು. ನಮಾಝ್ನ ಬಳಿಕ ಎಲ್ಲರೂ ಹಸ್ತಲಾಘವ, ಆಲಿಂಗನದ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.
ಮನೆಗಳಲ್ಲೂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಿರಿ-ಕಿರಿಯರು, ನೆರೆ-ಹೊರೆಯವರೊಂದಿಗೆ ಹಬ್ಬದ ಶುಭಾಶಯ ಹಂಚಿಕೊಳ್ಳಲಾಯಿತು.