ಶಿವಮೊಗ್ಗ: ಸರ್ವಧರ್ಮೀಯರ ನೇತೃತ್ವದಲ್ಲಿ ಗಣೇಶ ವಿಸರ್ಜನೆ
ಶಿವಮೊಗ್ಗ, ಸೆ.1: ಈ ಭಾರೀ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ಸರ್ವಧರ್ಮದವರನ್ನೂ ಸೇರಿಸಿಕೊಂಡು ಎಲ್ಲರ ನೇತೃತ್ವದಲ್ಲಿ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಪ್ರಯತ್ನ ನಡೆಸಿದೆ.
ಸರ್ವಧರ್ಮದವರ ಸಭೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ್ ಖರೆ, ಪ್ರತೀ ಧರ್ಮದ 50 ಜನರನ್ನು ಈ ಸಭೆಗೆ ಆಹ್ವಾನಿಸಿದ್ದರು. ಇವರಿಗೆ ಸಾಕಷ್ಟು ಮಾಹಿತಿ ನೀಡಿದ ಅವರು ಅಂತ್ಯದಲ್ಲಿ ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿದರು.
ಪ್ರತೀ ವರ್ಷ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂದರ್ಭ ಜನರು ಒಂದು ರೀತಿಯ ಭಯದ ವಾತಾವರಣದಲ್ಲಿ ಇರುವಂತಾಗಿತ್ತು. ವಿಸರ್ಜನೆ ಮುಗಿದ ನಂತರ ನಿರಾಳರಾಗುತ್ತಿದ್ದರು. ಇಂತಹ ವಾತಾವರಣವನ್ನು ನಿರ್ಮಾಣವಾಗದಂತೆ ಮಾಡುವ ಯೋಜನೆಯನ್ನು ರೂಪಿಸಲಾಗಿದ್ದು, ಈ ಪ್ರಕಾರ ಸಭೆಗೆ ಆಗಮಿಸಿದ ಎಲ್ಲಾ ಧರ್ಮೀಯರು ತಮ್ಮ ನೇತೃತ್ವದಲ್ಲಿ ಇನ್ನಷ್ಟು ಜನರನ್ನು ಮೆರವಣಿಗೆ ಕರೆದುಕೊಂಡು ಬಂದು ಶಾಂತಯುವಾಗಿ ಅದು ಯಶಸ್ವಿಯಾಗಲು ಕಾರಣರಾಗಬೇಕೆಂದು ಮನವಿ ಮಾಡಿದರು.
ವಿಶೇಷವೆಂದರೆ ಈ ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲಾ ಧರ್ಮದ ತಲಾ 50 ಜನರಿಗೆ ಟಿ-ಶರ್ಟ್ ಮತ್ತು ಕ್ಯಾಪ್ಗಳನ್ನು ವಿತರಿಸಿದರು. ಮತ್ತು ಗಣೇಶೋತ್ಸವದ ನಿಜವಾದ ಅರ್ಥ ಸಾಬೀತಾಗುವಂತೆ ಮಾಡಬೇಕೆಂದು ಈ ಸಂದರ್ಭದ ಅವರು ತಿಳಿಸಿದರು.
ಮಹಿಳೆಯರು ಮತ್ತು ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಿರಾತಂಕವಾಗಿ ಪಾಲ್ಗೊಳ್ಳಬೇಕು. ಮೆರವಣಿಗೆಯು ಸರ್ವಧರ್ಮದ ಸಂಕೇತವಾಗಿರಬೇಕು. ಟಿ-ಶರ್ಟ್ ಮತ್ತು ಕ್ಯಾಪ್ ಧರಿಸಿ ಬರುವವರು ನೇತೃತ್ವವಹಿಸಬೇಕು. ಗಲಾಟೆಯಿಲ್ಲದೆ ಶಾಂತಿಯುತವಾಗಿ ವಿಸರ್ಜನಾ ಮೆರವಣಿಗೆ ನಡೆಯಲು ಸಹಕರಿಸಬೇಕೆಂದು ಮನವಿ ಮಾಡಿದರು.