ಉಳ್ಳಾಲ: ಸೈಯದ್ ಮದನಿ ದರ್ಗಾದಲ್ಲಿ ಸಂಭ್ರಮದ ಈದುಲ್ ಅಝ್ ಹಾ ಆಚರಣೆ
ಉಳ್ಳಾಲ, ಸೆ.1: ನಾವೆಲ್ಲರೂ ಅಲ್ಲಾಹನ ಆಜ್ಞೆಯಂತೆ ಪರಸ್ಪರ ಶಾಂತಿಯುತ ಸಹಬಾಳ್ವೆ ನಡೆಸಬೇಕು. ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದಂದು ದರ್ಗಾಕ್ಕೆ ಸಂಬಂಧಪಟ್ಟ ಸಂಘಟನೆಯು ನಡೆಸಿದ ಸಾಮರಸ್ಯ ಜಾಥವು ಯಶಸ್ವಿಯಾಗಿದ್ದು, ಇದನ್ನು ಅರ್ಥಪೂರ್ಣವನ್ನಾಗಿಸಿ ಉಳ್ಳಾಲ ಪರಿಸರದಲ್ಲಿ ಸಾಮರಸ್ಯ ಗಟ್ಟಿಯಾಗಿ ನೆಲೆಯೂರುವಲ್ಲಿ ಸಂಘಟನೆಗಳು ಇನ್ನಷ್ಟು ಶ್ರಮ ವಹಿಸಬೇಕಿದೆ ಎಂದು ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ರಶೀದ್ ಹಾಜಿ ಅಭಿಪ್ರಾಯಪಟ್ಟರು.
ಸಯ್ಯದ್ ಮದನಿ ಸೋಷಿಯಲ್ ಫ್ರಂಟ್"ಸಂಘಟನೆಯ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಶುಕ್ರವಾರದಂದು ಕೋಟೆಪುರ ಜುಮಾ ಮಸೀದಿಯಿಂದ ಉಳ್ಳಾಲ ಸೈಯದ್ ಮದನಿ ದರ್ಗಾದವರೆಗೆ ನಡೆಸಿದ ಸೌಹಾರ್ದ ಜಾಥಾದ ಸಮಾರೋಪವನ್ನುದ್ದೇಶಿಸಿ ಅವರು ಮಾತನಾಡಿದರು.
ಕೆಲ ದುಷ್ಟ ಶಕ್ತಿಗಳಿಂದಾಗಿ ಸಮಾಜದಲ್ಲಿಂದು ಸಾಮರಸ್ಯ ಕದಡುವ ಯತ್ನ ಪದೇ ಪದೇ ನಡೆಯುತ್ತಿದ್ದು, ನಾವುಗಳು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ನಡೆಸುವ ಸೌಹಾರ್ದ ಜಾಥಾಗಳು ಅರ್ಥಪೂರ್ಣವಾಗಿ ಸಾಮರಸ್ಯವನ್ನು ಮತ್ತಷ್ಟು ವೃದ್ಧಿಸುವಂತಾಗಬೇಕೆಂದು ಕರೆ ನೀಡಿದರು.
ಆಹಾರ ಸಚಿವ ಯು.ಟಿ ಖಾದರ್ ಅವರು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, ತ್ಯಾಗ,ಬಲಿದಾನ, ಹೊಣೆಗಾರಿಕೆ, ಮಾನವೀಯತೆಯನ್ನು ನೆನಪಿಸುವ ವಿಶೇಷ ಹಬ್ಬ ಬಕ್ರೀದ್ ಆಗಿದ್ದು, ಸೋದರತೆ ,ಸಾಮರಸ್ಯವೇ ಎಲ್ಲ ಹಬ್ಬಗಳ ಸಂದೇಶವೂ ಆಗಿದೆ ಎಂದರು.
ಈ ಸಂದರ್ಭದಲ್ಲಿ ಉಳ್ಳಾಲ ನಗರಸಭಾ ಸದಸ್ಯರಾದ ಇಸ್ಮಾಯೀಲ್ ಪೊಡಿಮೋನು, ಉಸ್ಮಾನ್ ಕಲ್ಲಾಪು, ಮುಖಂಡರಾದ ಜನಾಬ್ ತ್ವಾಹಾ ಹಾಜಿ, ಫಾರೂಕ್ ಉಳ್ಳಾಲ್, ನೌಷಧ್ ಮೇಲಂಗಡಿ, ಮೋನು ಇಸ್ಮಾಯೀಲ್ ಮೊದಲಾದವರು ಉಪಸ್ಥಿತರಿದ್ದರು.