ಚೆಟ್ಟಳ್ಳಿಯಲ್ಲಿ ಗಮನ ಸೆಳೆದ ‘ಕೈಲ್ಪೊಳ್ದ್ ಬೊಡಿನಮ್ಮೆ’

ಮಡಿಕೇರಿ,ಸೆ.2 :ಪುತ್ತರಿರ ಕುಟುಂಬಸ್ಥರು ಕೈಲ್ ಮೂಹೂರ್ತ ಪ್ರಯುಕ್ತ ಚೆಟ್ಟಳ್ಳಿ ಪ್ರೌಢಶಾಲೆಯ ಮೈದಾನದಲ್ಲಿ ನಾಲ್ಕನೇ ವರ್ಷದ ಬೊಡಿನಮ್ಮೆ ಏರ್ಪಡಿಸಿದ್ದರು.
ಪುತ್ತರಿರ ಕುಟುಂಬದ ಪಟ್ಟೆದಾರ ಪುತ್ತರಿರ ಬಿ.ಬಿದ್ದಪ್ಪ ಹಾಗೂ ಬೆಂಗಳೂರಿನ ಉದ್ಯಮಿ ಚೆರಿಯಪಂಡ ಸುರೇಶ್ ನಂಜಪ್ಪ ತೆಂಗಿನಕಾಯಿಗೆ ಗುಂಡುಹೊಡೆಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಸುರೇಶ್ ನಂಜಪ್ಪ ಮಾತನಾಡಿ ಪುತ್ತರಿರ ಕುಟುಂಬಸ್ಥರು ಆಯೋಜಿಸಿರುವ ಬೊಡಿನಮ್ಮೆ ಉತ್ತಮ ಬೆಳವಣಿಯಾಗಿದ್ದು, ಇದೇ ರೀತಿ ನಡೆಸಲು ಎಲ್ಲರ ಸಹಕಾರ ಅಗತ್ಯವೆಂದರು.
ಪುತ್ತರಿರ ಬಿದ್ದಪ್ಪ ಮಾತನಾಡಿ ಕುಟುಂಬವು ನಾಲ್ಕನೇ ವರ್ಷದ ಬೊಡಿನಮ್ಮೆಯನ್ನು ಆಯೋಜಿಸಿದ್ದು ತಮ್ಮೆಲ್ಲರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ ಕೊಡವ ಸಾಹಿತ್ಯ ಅಕಾಡಮಿಯು ಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ನಾನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಪುತ್ತರಿರ ಕುಟುಂಬಸ್ಥರು ಆಯೋಜಿಸಿರುವ ಬೊಡಿನಮ್ಮೆಗೆ ಕಳೆದ ವರ್ಷದಿಂದ ಸಹಕಾರ ನೀಡುತ್ತಾ ಬರುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳಿಗೆಲ್ಲ ಅಕಾಡಮಿ ಸಹಕಾರ ನೀಡಲಿದೆ ಎಂದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ ಕೊಡವರಿಗೆ ಕೋವಿಯ ಹಕ್ಕು ಮುಖ್ಯವಾಗಿದ್ದು, ಕೊಡವ ಮಕ್ಕಡ ಕೂಟವು ಹೋರಾಟ ಮಾಡುತ್ತಾ ಬರುತ್ತಿದೆ ಎಂದರು.
ನಿವೃತ್ತ ಏರ್ಫೋರ್ಸ್ ಅಧಿಕಾರಿ ಪುತ್ತರಿರ ಗಣೇಶ್ಭೀಮಯ್ಯ ಹಾಗೂ ಪ್ರೇಮಾ ಭೀಮಯ್ಯ ಸ್ವಾಗತಗೀತೆ ಹಾಡಿದರೆ, ಪುತ್ತರಿರ ಕರುಣ್ ಕಾಳಯ್ಯ ಸ್ವಾಗತಿಸಿದರು.
ವೇದಿಕೆಯಲ್ಲಿ ಪುತ್ತರಿರ ಕೆ. ಪೂವಯ್ಯ, ಪುತ್ತರಿರ ಎಂ. ಸೋಮಯ್ಯ, ನಿವೃತ್ತ ಕಾಮಾಂಡೆಂಟ್ ಪುತ್ತರಿರ ಟುಟ್ಟು ಕಾರ್ಯಪ್ಪ, ಪುತ್ತರಿರ ಜಗದೀಶ್ ಉತ್ತಯ್ಯ ಹಾಜರಿದ್ದರು.
ಕಾರ್ಯಕ್ರಮದ ಅಂಗವಾಗಿ 22, 12 ಬೋರ್ ನಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಹಾಗೂ ಏರ್ರೈಫಲ್ ಹಾಗೂ ಪಿಸ್ತೂಲ್ ಹಾಗೂ ರಿವಾಲ್ವರ್ನಿಂದ ಟಾರ್ಗೆಟಿಗೆ ಗುಂಡು ಹೋಡೆಯುವ ಸ್ಫರ್ಧೆ ಆಯೋಜಿಸಲಾಗಿತ್ತು. ಕೊಡಗಿನಲ್ಲದೆ ಹಲವು ಭಾಗಗಳಿಂದ ನುರಿತ ಶೂಟಿಂಗ್ ಪಟುಗಳು ಭಾಗವಹಿಸಿದ್ದರು.







