ಆಧಾರ್ ಮೇಲೆ ಆಗುವ ಪರಿಣಾಮಗಳ್ಯಾವುವು?
ಖಾಸಗಿತನ ಒಂದು ಮೂಲಭೂತ ಹಕ್ಕು

ಆಧಾರ್ ಕಾರ್ಡ್ಗೆ ನೋಂದಾವಣಿ ಮಾಡಿಸಿಕೊಳ್ಳುವಾಗ, ದತ್ತಾಂಶಗಳ ಬಳಕೆಯನ್ನು ವಿಸ್ತರಿಸಲು, ಯಾವ್ಯಾವ ಉದ್ದೇಶಗಳಿಗಾಗಿ ಒಬ್ಬ ವ್ಯಕ್ತಿ ನೀಡುವ ಮಾಹಿತಿಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿ ಅದಕ್ಕೆ ವ್ಯಕ್ತಿಯ ಒಪ್ಪಿಗೆಯನ್ನು ಸರಕಾರ ಪಡೆಯಲಿಲ್ಲ, ಪಡೆದಿರಲಿಲ್ಲ ಎಂಬುದು ಆಧಾರ್ ಕಾರ್ಡ್ ವಿರುದ್ಧ ಇರುವ ಒಂದು ಮುಖ್ಯ ದೂರು. ತಜ್ಞರ ತಂಡ ಶಿಫಾರಸು ಮಾಡಿರುವ ಮಾಹಿತಿ ಸಂಗ್ರಹಣೆ ಮತ್ತು ಉದ್ದೇಶ ಮಿತಿಗಳನ್ನು ಅನ್ವಯಿಸುವುದಾದಲ್ಲಿ ಸರಕಾರವು ಆಧಾರ್ ಬಳಕೆಗೆ ಒಂದು ಹೊಸ ಉದ್ದೇಶವನ್ನು ಪ್ರತೀ ಬಾರಿ ಸೃಷ್ಟಿಸಿದಾಗಲೂ, ಅದು ಪ್ರತೀ ಬಾರಿಯೂ ವ್ಯಕ್ತಿಯ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ.
ಸುಪ್ರೀಂ ಕೋರ್ಟಿನ ಒಂಬತ್ತು ಮಂದಿ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಭಾರತೀಯ ನಾಗರಿಕರಿಗೆ ಖಾಸಗಿತನದ ಒಂದು ಮೂಲಭೂತಹಕ್ಕು ಇದೆ ಎಂದು ಸರ್ವಾನುಮತದ ತೀರ್ಪು ನೀಡಿದೆ. ಖಾಸಗಿತನದ ಹಕ್ಕು ಬದುಕುವ ಹಕ್ಕನ್ನು ನೀಡುವ ಸಂವಿಧಾನದ 21ನೆ ಪರಿಚ್ಛೇದದ ಅವಿಭಾಜ್ಯ ಅಂಗವೆಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಹೀಗೆ ತೀರ್ಪು ನೀಡುವ ಮೂಲಕ ನ್ಯಾಯಾಲಯವು, ಖಾಸಗಿತನವೆಂಬುದು ಒಂದು ಸಾಮಾನ್ಯ ಹಕ್ಕು ಎಂದು ವಾದಿಸಿದ್ದ ಕೇಂದ್ರ ಸರಕಾರಕ್ಕೆ ಚಾಟಿ ಏಟು ಬೀಸಿದೆ. ತನ್ನ ಖಾಸಗಿತನದ ರಕ್ಷಣೆಗಾಗಿ ಈಗ ನಾಗರಿಕನೊಬ್ಬನಿಗೆ ನೇರವಾಗಿ ಸುಪ್ರೀಂ ಕೋರ್ಟಿಗೆ ಹೋಗುವ ಹಕ್ಕು ಲಭಿಸಿದೆ.
ಆಧಾರ್ನ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಒಂದು ಸವಾಲಿಗೆ ಪ್ರತಿಯಾಗಿ ಈ ತೀರ್ಪು ಬಂದಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನುಸುಳಿದ್ದ ಅಕ್ರಮಗಳನ್ನು ತಡೆಯಲು ಆಧಾರ್ ಅನಿವಾರ್ಯವೆಂದು ವಾದಿಸಿದ್ದ ಸರಕಾರ, ಕ್ರಮೇಣ ಮರಣ ಪ್ರಮಾಣ ಪತ್ರವೂ ಸೇರಿದಂತೆ ಸರಕಾರದ ಹಲವು ಸೇವೆ ಮತ್ತು ಸವಲತ್ತುಗಳನ್ನು ಪಡೆಯಲು ಆಧಾರ್ ಅನ್ನು ಕಡ್ಡಾಯಗೊಳಿಸಿತ್ತು.
ಆದರೆ ಖಾಸಗಿತನ ಒಂದು ಮೂಲಭೂತಹಕ್ಕು ಎಂಬ ಘೋಷಣೆ ಆಧಾರ್ಕಾರ್ಡ್ನ ಕಾನೂನುಬದ್ಧತೆಯ ಮೇಲೆ ಪರಿಣಾಮ ಬೀರುತ್ತದೆಯೇ? ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಈ ಬಗ್ಗೆ ಏನನ್ನೂ ಹೇಳಿಲ್ಲ. ಯಾಕೆಂದರೆ, ಆಧಾರ್ ಕಾಯ್ದೆಯ ಸಾಂವಿಧಾನಿಕತೆಯನ್ನು ಐವರು ನ್ಯಾಯಮೂರ್ತಿಗಳ ಒಂದು ಪ್ರತ್ಯೇಕ ಪೀಠ ಇನ್ನಷ್ಟೇ ನಿರ್ಧರಿಸಬೇಕಾಗಿದೆ. ಅದೇನಿದ್ದರೂ, ಇಂದಿನ ಮಾಹಿತಿಯುಗದಲ್ಲಿ ಖಾಸಗಿತನಕ್ಕೆ ಎದುರಾಗಿರುವ ಸವಾಲುಗಳನ್ನು ಉಲ್ಲೇಖಿಸುತ್ತ ನ್ಯಾಯಾಲಯವು ಮಾಹಿತಿ, ದತ್ತಾಂಶಗಳ ರಕ್ಷಣೆ ಅತ್ಯಂತ ಮಹತ್ವಪೂರ್ಣ ಎಂದು ಹೇಳಿದೆ ಈ ಅರ್ಥದಲ್ಲಿ ಆಧಾರ್ ಅನುಷ್ಠಾನಕ್ಕೆ ಒಂದು ದತ್ತಾಂಶ ಅಥವಾ ಮಾಹಿತಿ ರಕ್ಷಣಾ ಕಾನೂನು ಅನಿವಾರ್ಯವಾಗಬಹುದು. ಅದೇ ವೇಳೇ, ಸಾರ್ವಜನಿಕ ಹಿತಾಸಕ್ತಿಯು ಖಾಸಗಿತನದ ಹಕ್ಕಿಗೆ ಒಂದು ಮಿತಿಯಾಗ ಬಹುದು ಎಂದು ಕೂಡ ನ್ಯಾಯಾಧೀಶರು ಹೇಳಿದ್ದಾರೆ. ಆದ್ದರಿಂದ ಈಗ, ಸರಕಾರವು ಸಾರ್ವಜನಿಕ ಹಿತಾಸಕ್ತಿಗಾಗಿಯೇ ಆಧಾರ್ ಅನಿವಾರ್ಯವೆಂದು ವಾದಿಸಬಹುದು
ಮಾಹಿತಿ ಖಾಸಗಿತನ
ಒಂಬತ್ತು ನ್ಯಾಯಮೂರ್ತಿಗಳ ನ್ಯಾಯಪೀಠ ಆರು ಪ್ರತ್ಯೇಕ, ಆದರೆ ಸಹಮತವಿರುವ, ತೀರ್ಪುಗಳನ್ನು ಪ್ರಕಟಿಸಿದೆ. ನ್ಯಾಯಮೂರ್ತಿಗಳಾದ ಡಿ.ವೈ .ಚಂದ್ರಚೂಡ್, ರೋಹಿಂಟನ್ ನಾರಿಮನ್ ಮತ್ತು ಎಸ್.ಕೆ.ಕೌಲ್ ಮಾಹಿತಿ ಖಾಸಗಿತನದ ಬಗ್ಗೆ ಸಾಕಷ್ಟು ದೀರ್ಘವಾಗಿ ಬರೆದಿದ್ದಾರೆ. ಅಲ್ಲದೆ ತಂತ್ರಜ್ಞಾನ ಮತ್ತು ಅಂತರ್ಜಾಲದಲ್ಲಾಗಿರುವ ಆವಿಷ್ಕಾರಗಳು, ಬೆಳೆವಣಿಗೆಗಳು ದೈಹಿಕ ಖಾಸಗಿತನವನ್ನು ಮೀರಿದ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎಂದೂ ಹೇಳಿದ್ದಾರೆ.
‘‘ಡಿಜಿಟಲ್ ಯುಗದ ಪರಿಣಾಮವಾಗಿ ಅಂತರ್ಜಾಲದಲ್ಲಿ ನಾವು ಹಾಕುವ ಮಾಹಿತಿಯು ಶಾಶ್ವತವಾಗಿ ಉಳಿದು ಬಿಡುತ್ತದೆ. ಒಮ್ಮೆ ಹಾಕಿದ ಮಾಹಿತಿಯನ್ನು ಸಂಪೂರ್ಣವಾಗಿ ಅಳಿಸಲು ಸಾಧ್ಯವಾಗುವುದಿಲ್ಲ. ಹೆಜ್ಜೆ ಗುರುತುಗಳು ಉಳಿದು ಬಿಡುತ್ತವೆ. ಹೀಗೆ ಡಿಜಿಟಲ್ ಪ್ರಪಂಚದಲ್ಲಿ ಮಾಹಿತಿಯ ಸಂರಕ್ಷಣೆ ಒಂದು ಅಂಗೀಕೃತ ನಿಯಮವಾಗಿದೆ ಮತ್ತು ಮಾಹಿತಿಯನ್ನು ಮರೆಯುವುದು ಒಂದು ಹೋರಾಟವಾಗಿದೆ’’. ಎಂದಿದ್ದಾರೆ ಕೌಲ್.
ಕೌಲ್ ಮತ್ತು ಚಂದ್ರಚೂಡ್ ಇಬ್ಬರೂ, ಎಲ್ಲ ರೀತಿಯಲ್ಲೂ ನಾಗರಿಕರ ಮಾಹಿತಿಯನ್ನು ಸುರಕ್ಷಿತವಾಗಿಸಲು ಪ್ರಬಲವಾದ ಕಾನೂನಿನ ಒಂದು ಚೌಕಟ್ಟನ್ನು ನಿರ್ಮಿಸಬೇಕೆಂದು ಒತ್ತಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅವರು ಖಾಸಗಿತನದ ಕುರಿತು ಹಿಂದಿನ ಯೋಜನಾ ಆಯೋಗದ ತಜ್ಞರ ತಂಡವು 2012ರಲ್ಲಿ ಸರಕಾರಕ್ಕೆ ಸಲ್ಲಿಸಿದ ವರದಿಯನ್ನು ಉಲ್ಲೇಖಿಸಿದ್ದಾರೆ.ಆ ವರದಿಯು ನಾಗರಿಕರ ಮಾಹಿತಿಯನ್ನು ಸೂಚಿಸಿದೆ: ಮಾಹಿತಿ ಸಂಗ್ರಹಣೆ ಮಿತಿ ಮತ್ತು ಉದ್ದೇಶದ ಮಿತಿ. ಅಂದರೆ, ದತ್ತಾಂಶಗಳನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ಸಂಗ್ರಹಿಸಬೇಕು ಮತ್ತು ಈ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು.
ಆಧಾರ್ ಇಲ್ಲಿ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳಬಹುದು. ಯಾಕೆಂದರೆ ಸರಕಾರವು ಮಿತಿ ಇಲ್ಲದ ಮಾಹಿತಿ ಸಂಗ್ರಹ ವ್ಯವಸ್ಥೆೊಂದನ್ನು ಸ್ಥಾಪಿಸಿದೆ. ‘ಉತ್ತಮ ಆಡಳಿತ ಮತ್ತು ಸೇವೆಗಳ ಸಮರ್ಪಕ, ಪಾರದರ್ಶಕ ಪೂರೈಕೆಗಾಗಿ’ ಈ ವ್ಯವಸ್ಥೆ ಎಂದು ಅದು ಹೇಳಿದೆ.
ಇನ್ನು, ಉದ್ದೇಶದ ಮಿತಿಯ ಬಗ್ಗೆ ತಜ್ಞರ ತಂಡವು ವ್ಯಕ್ತಿಗಳ ಒಪ್ಪಿಗೆ ಪಡೆದ ಬಳಿಕ, ಸರಕಾರವು ತನ್ನ ಪ್ರಕಟನೆಯಲ್ಲಿ ಹೇಳಿರುವ ಉದ್ದೇಶಗಳಿಗಾಗಿ ಮಾತ್ರ ವೈಯಕ್ತಿಕ ಮಾಹಿತಿಯನ್ನು ಬಳಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ.
ಒಪ್ಪಿಗೆಯ ಪ್ರಶ್ನೆ
ಆಧಾರ್ ಕಾರ್ಡ್ಗೆ ನೋಂದಾವಣಿ ಮಾಡಿಸಿಕೊಳ್ಳುವಾಗ, ದತ್ತಾಂಶಗಳ ಬಳಕೆಯನ್ನು ವಿಸ್ತರಿಸಲು, ಯಾವ್ಯಾವ ಉದ್ದೇಶಗಳಿಗಾಗಿ, ಒಬ್ಬ ವ್ಯಕ್ತಿ ನೀಡುವ ಮಾಹಿತಿಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿ ಅದಕ್ಕೆ ವ್ಯಕ್ತಿಯ ಒಪ್ಪಿಗೆಯನ್ನು ಸರಕಾರ ಪಡೆಯಲಿಲ್ಲ, ಪಡೆದಿರಲಿಲ್ಲ ಎಂಬುದು ಆಧಾರ್ ಕಾರ್ಡ್ ವಿರುದ್ಧ ಇರುವ ಒಂದು ಮುಖ್ಯ ದೂರು. ತಜ್ಞರ ತಂಡ ಶಿಫಾರಸು ಮಾಡಿರುವ ಮಾಹಿತಿ ಸಂಗ್ರಹಣೆ ಮತ್ತು ಉದ್ದೇಶ ಮಿತಿಗಳನ್ನು ಅನ್ವಯಿಸುವುದಾದಲ್ಲಿ ಸರಕಾರವು ಆಧಾರ್ ಬಳಕೆಗೆ ಒಂದು ಹೊಸ ಉದ್ದೇಶವನ್ನು ಪ್ರತೀ ಬಾರಿ ಸೃಷ್ಟಿಸಿದಾಗಲೂ , ಅದು ಪ್ರತೀ ಬಾರಿಯೂ ವ್ಯಕ್ತಿಯ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ.
ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿಯೊಂದು ದತ್ತಾಂಶ ರಕ್ಷಣೆಯ ಬಗ್ಗೆ ಪರೀಶೀಲಿಸುತ್ತದೆ ಎಂದು ಸರಕಾರವು ಸುಪ್ರೀಂಕೋರ್ಟಿನಲ್ಲಿ ಹೇಳಿತ್ತು. ಕೌಲ್ ಮತ್ತು ಚಂದ್ರಚೂಡ ಸರಕಾರದ ಈ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ ಮತ್ತು ಕಾಲ್ ಒಂದು ಬಿಗ್ ಬ್ರದರ್ ಸರಕಾರದವನ್ನು ಸೃಷ್ಟಿಸುವ ಅಪಾಯದ ಕುರಿತು ಎಚ್ಚರಿಕೆ ನೀಡಿದ್ದಾರೆ. ವ್ಯಕ್ತಿಯ ಬಗ್ಗೆ ಇರುವ ಜ್ಞಾನವು ಆವ್ಯಕ್ತಿಯ ಮೇಲೆ ನಮಗೆ ಅಧಿಕಾರ ನೀಡುತ್ತದೆ. ಒಬ್ಬ ವ್ಯಕ್ತಿಯ ಬಗ್ಗೆ ಸಂಗ್ರಹಿಸಲಾದ ಮಾಹಿತಿಯು ಆ ವ್ಯಕ್ತಿಯು ನೀಡುವ ಅರ್ಜಿಗಳ ಮೇಲೆ , ಅಹವಾಲುಗಳ ಮೇಲೆ ಪ್ರಭಾವ ಬೀರ ಬಲ್ಲದು ಮತ್ತು ವರ್ತನೆಯನ್ನು ರೂಪಿಸಬಲ್ಲದು. ‘‘ ಬಿಗ್ ಬ್ರದರ್ ’’ (ಸರ್ವಾಧಿಕಾರಿ ) ಸರಕಾರವು ಮಾಡಿದಂತೆ ಆ ಮಾಹಿತಿಯನ್ನು ನಮ್ಮ ಮೇಲೆ ನಿಯಂತ್ರಣ ಹೇರಲು ಬಳಸಿಕೊಳ್ಳಬಹುದು. ಇದು ಭಿನ್ನಮತದ ಅಭಿವ್ಯಕ್ತಿ ಹಾಗೂ ಭಿನ್ನಾಭಿಪ್ರಾಯದ ಮೇಲೆ ಅಪಾರ ಪರಿಣಾಮ ಬೀರಬಹುದು. ಯಾವುದೇ ಪ್ರಜಾಪ್ರಭುತ್ವವು ಇದಕ್ಕೆ ಅವಕಾಶ ನೀಡಲಾಗದು.ಹೀಗಾಗಿ (ಮಾಹಿತಿಯ ದುರ್ಬಳಕೆಯಾಗದಂತೆ) ನಿಯಂತ್ರಿಸುವುದು ಎಂದಿಗಿಂತಲೂ ಇಂದು ಅತ್ಯವಶ್ಯಕವಾಗಿದೆ’’.
ಆದ್ದರಿಂದ, ಆಧಾರ್ ಕಾರ್ಡ್ನ್ನು ಉಳಿಸಲಿಕ್ಕಾಗಿ, ಸರಕಾರವು ತನ್ನ ಸಾರ್ವಜನಿಕ ಹಿತಾಸಕ್ತಿಯು ಖಾಸಗಿತನದ ಮೂಲಭೂತ ಹಕ್ಕಿಗಿಂತ ಹೆಚ್ಚು ಮುಖ್ಯ ಎಂದು ತೋರಿಸಲೇಬೇಕಾಗಿದೆ. ಹಾಗೆಯೇ, ಅದು ಆಧಾರ್ನ ವ್ಯಾಪ್ತಿಯನ್ನು ಸೀಮಿತಗೊಳಿಸಬೇಕು ಮತ್ತು ಯಾವ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೋ, ಆ ವ್ಯಕ್ತಿಗಳಿಂದ ಸ್ಪಷ್ಟವಾದ, ನೇರವಾದ ಒಪ್ಪಿಗೆ ಪಡೆಯುವುದನ್ನು ಖಾತರಿಗೊಳಿಸುವ ಒಂದು ದತ್ತಾಂಶ ರಕ್ಷಣೆ ಕಾನೂನನ್ನು ಕೂಡ ಅದು ಮಾಡಬೇಕು.







