ಬಿಜೆಪಿ ನಗರಸಭಾ ಸದಸ್ಯರ ಗೂಂಡಾಗಿರಿ ಖಂಡಿಸಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಉಡುಪಿ, ಸೆ.2: ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಬಿಜೆಪಿ ಸದಸ್ಯರ ಗೂಂಡಾಗಿರಿ ವರ್ತನೆ ಹಾಗೂ ಮಹಿಳಾ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ಅಗೌರವ ತೋರಿಸಿದ ಘಟನೆಯನ್ನು ಖಂಡಿಸಿ ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದು ನಗರದ ಜಟಕಾ ಸ್ಟಾಂಡ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವರೋನಿಕಾ ಕರ್ನೇಲಿಯೊ ಅವರು, ಮೊನ್ನೆ ನಡೆದ ಸಾಮಾನ್ಯಸಭೆಯಲ್ಲಿ ಬಿಜೆಪಿ ಸದಸ್ಯರು ತೋರಿದ ವರ್ತನೆಯನ್ನು ಮಹಿಳಾ ಕಾಂಗ್ರೆಸ್ ಉಗ್ರವಾಗಿ ಖಂಡಿಸುತ್ತದೆ. ಇದರಿಂದ ಸುಸಂಸ್ಕೃತರ ಜಿಲ್ಲೆ ಎನಿಸಿದ ಉಡುಪಿಯ ಹೆಸರಿಗೆ ಕಳಂಕ ತಂದಂತಾಗಿದೆ ಎಂದರು.
ನಗರಸಭೆಯ ಮಹಿಳಾ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅವರೊಂದಿಗೆ ಬಿಜೆಪಿ ತೋರಿದ ದುರ್ವತನೆಯನ್ನು ಮತದಾರರು ಖಂಡಿತ ಗಮನಿಸಿರುತ್ತಾರೆ. ಇಂಥ ವರ್ತನೆ ಚುನಾಯಿತ ಜನಪ್ರತಿನಿಧಿಗಳಿಗೆ ಕಳಂಕಪ್ರಾಯವಾದುದು. ಭಾಷಣದಲ್ಲಿ ಮಹಿಳೆಯರನ್ನು ಮಾತೆಯರು ಎಂದು ಕರೆಯುವ ಬಿಜೆಪಿಯ ಸದಸ್ಯರು ನಿಜ ಜೀವನದಲ್ಲಿ ಮಹಿಳೆಯರ ಬಗ್ಗೆ ಅವರ ಭಾವನೆ ಏನು ಎಂಬುದಕ್ಕೆ ಇದು ಉತ್ತಮ ನಿದರ್ಶನ ಎಂದರು.
ಜನಪ್ರತಿನಿಧಿಗಳ ಹಕ್ಕು-ಬಾದ್ಯತೆ, ಕರ್ತವ್ಯಗಳ ಕುರಿತಂತೆ ಉತ್ತಮ ಜ್ಞಾನ ಹೊಂದಿರುವ ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿ ಅವರು ನಗರಸಭಾ ಸದಸ್ಯರು ಸೇರಿದಂತೆ ಬಿಜೆಪಿಯ ಜನಪ್ರತಿನಿಧಿಗಳಿಗೆ ಸಭಾ ನಡವಳಿಯ ಕುರಿತಂತೆ ಒಂದು ದಿನದ ತರಬೇತಿ ನೀಡುವುದು ಉತ್ತಮ ಎಂದು ವರೋನಿಕಾ ಸಲಹೆ ನೀಡಿದರು.
ಬಿಜೆಪಿ ಸದಸ್ಯರು ಇಂಥ ಗೂಂಡಾ ವರ್ತನೆಯನ್ನು ಬಿಟ್ಟು, ಸೌಹಾರ್ದ ರೀತಿಯಲ್ಲಿ ಸಭೆಯಲ್ಲಿ ಭಾಗವಹಿಸಿ ಅಭಿವೃದ್ಧಿಯ ಕುರಿತಂತೆ ಚರ್ಚಿಸಲಿ. ಮೊನ್ನಿನ ಗಲಾಟೆಯ ಮೂಲಕ ಅವರು ಗಳಿಸಿದ್ದೇನಿಲ್ಲ. ಮತದಾರರ ದೃಷ್ಟಿಯಲ್ಲಿ ಕುಸಿದಿದ್ದಾರೆ ಅಷ್ಟೆ ಎಂದವರು ಹೇಳಿದರು.
ನಗರಸಭಾ ಸದಸ್ಯ ಜನಾರ್ದನ ಭಂಡಾರ್ಕರ್ ಮಾತನಾಡಿ, 40ವರ್ಷಗಳ ದುರಂಹಕಾರಿ ಆಡಳಿತದಿಂದ ರೋಸಿ ಕಳೆದ ಬಾರಿ ಜನರು ಸೋಲಿಸಿದ ಬಳಿಕ ಸಹ ಬುದ್ಧಿ ಕಲಿತಿಲ್ಲ. ಕಾಂಗ್ರೆಸ್ ಆಡಳಿತದ ಆರಂಭದಿಂದಲೂ ಬೆದರಿಕೆ, ಗೂಂಡಾ ಪ್ರವೃತ್ತಿಯ ಮೂಲಕ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಾ ಬಂದಿದ್ದಾರೆ. ಇಂಥ ದುವರ್ತನೆ ತೋರುವ ಸದಸ್ಯರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಯುವ ನಾಯಕ ಅಮೃತ ಶೆಣೈ ಮಾತನಾಡಿ ಉಡುಪಿಯ ಜನತೆ ನಿಮ್ಮ ಗೂಂಡಾಗಿರಿಯನ್ನು ನೋಡುತಿದ್ದು, ಮುಂದಿನ ಚುನಾವಣೆಯಲ್ಲಿ ನಿಮಗೆ ಖಂಡಿತ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕರಾಜ್, ಸದಸ್ಯರು, ಬ್ಲಾಕ್ ಮಹಿಳಾ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಎಂ.ಎ.ಗಫೂರ್, ನರಸಿಂಹ ಮೂರ್ತಿ, ದಿನೇಶ್ ಪುತ್ರನ್, ಉದ್ಯಾವರ ನಾಗೇಶ್ ಕುಮಾರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಭಾಸ್ಕರ ರಾವ್ ಕಿದಿಯೂರು ಮುಂತಾದವರು ಉಪಸ್ಥಿತರಿದ್ದರು.