ಎಸ್ಪಿಯಿಂದ ಫೋನ್ ಇನ್ ಕಾರ್ಯಕ್ರಮ: ಮಟ್ಕಾ ಜುಗಾರಿ ವಿರುದ್ಧ ತೀವ್ರ ಕ್ರಮ
ಉಡುಪಿ, ಸೆ. 2: ಜಿಲ್ಲೆಯಲ್ಲಿ ಮಟ್ಕಾ, ಜುಗಾರಿ ಅಪರಾಧದ ನಿಯಂತ್ರಣಕ್ಕೆ ಪೊಲೀಸರು ತೀವ್ರತರವಾದ ಕಾರ್ಯಾಚರಣೆ ನಡೆಸುತಿದ್ದು, ಈ ವರ್ಷದಲ್ಲಿ ಇದುವರೆಗೆ 221 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ.ಪಾಟೀಲ್ ಹೇಳಿದ್ದಾರೆ.
ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಮೂರು ವಾರಗಳಲ್ಲಿ ಮೂರನೇ ಬಾರಿ ಪೋನ್ ಇನ್ ಕಾರ್ಯಕ್ರಮ ನಡೆಸಿದ ಡಾ. ಪಾಟೀಲ್ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಇಂದು ಒಂದು ಗಂಟೆಯ ಅವಧಿಯಲ್ಲಿ ಒಟ್ಟು 38 ಕರೆಗಳು ಬಂದಿದ್ದು, ಹೆಚ್ಚಿನವು ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದರೂ, ಬೇರೆ ಇಲಾಖೆಗೆ ಸಂಬಂಧಿಸಿದ, ಕೌಟುಂಬಿಕ ಸಮಸ್ಯೆಗಳಿಗೂ ಜನರು ಪೊಲೀಸ್ ಅಧಿಕಾರಿಗೇ ಕರೆ ಮಾಡಿ ವಿಚಾರಿಸುತಿದ್ದರು.
ಮಟ್ಕಾ ಜುಗಾರಿ ನಿಯಂತ್ರಣಕ್ಕಾಗಿ ಗಂಭೀರ ಪ್ರಯತ್ನ ನಡೆಸಲಾಗುತ್ತಿದೆ. ಕೇವಲ ಕೇಸು ದಾಖಲಿಸಿ, ಬಂಧಿಸಿ ಬಿಡುವುದಿಲ್ಲ. ಅವರನ್ನು ಠಾಣೆಗಳಿಗೆ ಕರೆಸಿ, ಅಪರಾಧದ ಬಗ್ಗೆ ಎಲ್ಲಾ ಮಾಹಿತಿಗಳನ್ನು ಪಡೆಯಲಾಗುವುದು. ಅವರ ಹಣ ಎಲ್ಲಿಗೆ ಹೋಗುತ್ತಿದೆ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಅವರ ಚಟುವಟಿಕೆಗಳ ಮೇಲೆ ಕಣ್ಣಿಟ್ಟು, ಅಸಹಜತೆ ಕಂಡುಬಂದರೆ ಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.
ಫೋನ್ ಇನ್ ಆರಂಭಗೊಂಡ ಎರಡು ವಾರಗಳಲ್ಲಿ ಮಟ್ಕಾಕ್ಕೆ ಸಂಬಂಧಿಸಿ 72 ಪ್ರಕರಣಗಳನ್ನು ದಾಖಲಿಸಿದ್ದು 73 ಮಂದಿಯನ್ನು ಬಂಧಿಸಲಾಗಿದೆ. ಜೂಜಾಟಕ್ಕೆ ಸಂಬಂಧಿಸಿ8 ಪ್ರಕರಣ ದಾಖಲಾಗಿ 33 ಮಂದಿಯನ್ನು ಬಂಧಿಸಲಾಗಿದೆ. ನಕಲಿ ಮದ್ಯದ ನಾಲ್ಕು ಪ್ರಕರಣಗಳಲ್ಲಿ ಐದು ಮಂದಿಯ ಬಂಧನ, ಮಾದಕ ದ್ರವ್ಯ ಮಾರಾಟಕ್ಕೆ ಸಂಬಂಧಿಸಿ ನಾಲ್ಕು ಪ್ರಕರಣ ದಾಖಲಾಗಿದ್ದು ನಾಲ್ವರನ್ನು ಬಂಧಿಸಲಾಗಿದೆ.
ಕುಡಿದು ವಾಹನ ಚಾಲನೆ ಮಾಡಿದ ಬಗ್ಗೆ 68 ಕೇಸುಗಳು ದಾಖಲಾಗಿದೆ. ಕರ್ಕಶ ಹಾರ್ನ್ಗೆ ಸಂಬಂಧಿಸಿ 414 ಕೇಸು, ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿದ ಬಗ್ಗೆ 25 ಕೇಸುಗಳು ದಾಖಲಾಗಿವೆ ಎಂದು ಡಾ.ಪಾಟೀಲ್ ವಿವರಿಸಿದರು.
ಇದು ಬಂದ 38 ಕರೆಗಳಲ್ಲಿ ಹೆಚ್ಚಿನವುಗಳಲ್ಲಿ ಊರಿನಲ್ಲಿ ಮಟ್ಕಾ ನಡೆಯುವ ಬಗ್ಗೆ ದೂರುಗಳಿದ್ದವು. ಇನ್ನು ಕೆಲವು ಅಕ್ರಮ ಬಾರ್ಗಳ ಆರಂಭ, ರಸ್ತೆಯ ಬದಿಯಲ್ಲೇ ವಾಹನಗಳನ್ನು ಪಾರ್ಕ್ ಮಾಡಿ ಜನರ ಓಡಾಟಕ್ಕೆ ಅಡಚಣೆಯ ದೂರುಗಳು ಸಾಕಷ್ಟಿದ್ದವು. ಹೆಚ್ಚಿನ ದೂರವಾಣಿ ಕರೆಗಳು ಕುಂದಾಪುರ ತಾಲೂಕಿನಿಂದ ಬಂದಿದ್ದವು.
ಜಿಲ್ಲೆಯಲ್ಲಿ ಗಣೇಶೋತ್ಸವ ಹಾಗೂ ಬಕ್ರೀದ್ ಹಬ್ಬ ಶಾಂತಿಯುತವಾಗಿ ಕೊನೆ ಗೊಂಡ ಬಗ್ಗೆ ಎಸ್ಪಿಯವರು ಜಿಲ್ಲೆಯ ಜನತೆಗೆ ಧನ್ಯವಾದಗಳನ್ನು ತಿಳಿಸಿದರು. ಇನ್ನು ಮುಂದೆ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ಗ್ರಾಮಗಳಲ್ಲಿ ಪೊಲೀಸ್ ಬೀಟ್ಗಳನ್ನು ಚುರುಕುಗೊಳಿಸುವುದಾಗಿ ಅವರು ತಿಳಿಸಿದರು.ವಾರದಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಈ ಬಗ್ಗೆ ಜನರು ನೀಡುವ ಸಲಹೆ, ಸೂಚನೆಗಳನ್ನು ಸಹ ಅಳವಡಿಸಿಕೊಳ್ಳುವುದಾಗಿ ಅವರು ತಿಳಿಸಿದರು.
ಕ್ಲಾಕ್ಟವರ್ ಎದುರು ಇನ್ನು ಮುಂದೆ ಯಾವುದೇ ಪ್ರತಿಭಟನೆಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಅಲ್ಲಿ ಪ್ರತಿಭಟನೆ ನಡೆಸುವುದರಿಂದ ಜನರ ಹಾಗೂ ವಾಹನಗಳ ಸಂಚಾರಕ್ಕೆ ಅಡೆಚಣೆಯಾಗುತ್ತಿರುವುದಾಗಿ ಜನರು ತಿಳಿಸಿದ್ದಾರೆ. ಅಲ್ಲದೇ ನಗರ ಠಾಣೆಯಿಂದಲೂ ವರದಿ ಪಡೆಯಲಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಿ, ಪ್ರತಿಭಟನೆಗಳಿಗೆ ಬೇರೆ ಜಾಗವನ್ನು ಗುರುತಿಸುವಂತೆ ತಿಳಿಸಲಾಗಿದೆ ಎಂದರು.