ಕೊಕ್ಕರ್ಣೆ ಬಳಿ ಉರುಳಿಗೆ ಬಿದ್ದ ಚಿರತೆ ರಕ್ಷಣೆ
ಬ್ರಹ್ಮಾವರ, ಸೆ.2: ಕೊಕ್ಕರ್ಣೆ ಶಿರೂರಿನ ನೀರ್ಜೆಡ್ ಎಂಬಲ್ಲಿ ಖಾಸಗಿ ಜಾಗದಲ್ಲಿದ್ದ ತಂತಿಗಳ ಮಧ್ಯ ಸಿಕ್ಕಿಹಾಕಿಕೊಂಡ ಆಹಾರದ ಭೇಟೆಗಾಗಿ ಬಂದಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಿಸಿದ ಘಟನೆ ಇಂದು ನಡೆದಿದೆ.
ಬಹುಸಮಯದಿಂದ ಈ ಪ್ರದೇಶದಲ್ಲಿ ಚಿರತೆ ತಿರುಗುತ್ತಿದ್ದು, ನಿನ್ನೆ ರಾತ್ರಿ ಹೀಗೆ ಬಂದಾಗ ಮನೆಗಳಿಂದ ದೂರವಾದ ನಿರ್ಜನ ಪ್ರದೇಶದಲ್ಲಿ ಅಳವಡಿಸಿ ತಂತಿಗೆ ಅಕಸ್ಮಿಕವಾಗಿ ಸಿಕ್ಕಿಹಾಕಿಕೊಂಡಿತ್ತು. ಇಂದು ಬೆಳಗ್ಗೆ ಅದನ್ನು ನೋಡಿದ ಸ್ಥಳೀಯರು 8:30ರ ಸುಮಾರಿಗೆ ಅರಣ್ಯ ಇಲಾೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು.
ಬ್ರಹ್ಮಾವರದ ಪಶು ವೈದ್ಯಾಧಿಕಾರಿಗಳೊಂದಿಗೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು, ಅರವಳಿಕೆ ಇಂಜೆಕ್ಷನ್ ಮೂಲಕ ಪ್ರಜ್ಞೆ ತಪ್ಪಿಸಿದ ಬಳಿಕ ಚಿರತೆಯನ್ನು ಉರುಳಿನಿಂದ ರಕ್ಷಿಸಿ ಬೋನಿನೊಳಗೆ ಹಾಕಲಾಯಿತು.11 ಗಂಟೆಯ ಸುಮಾರಿಗೆ ಈ ಕಾರ್ಯಾಚರಣೆ ಮುಗಿಯಿತು. ಸುಮಾರು ಮೂರು ಗಂಟೆಯ ಬಳಿಕ ಮೂರು ವರ್ಷ ಪ್ರಾಯದ ಹೆಣ್ಣು ಚಿರತೆಗೆ ಪ್ರಜ್ಞೆ ಬಂದ್ದಿದ್ದು ಯಾವುದೇ ಗಾಯಗಳಿಲ್ಲದೇ ಆರೋಗ್ಯವಾಗಿತ್ತು. ಬಳಿಕ ಅದನ್ನು ರಕ್ಷಿತಾಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
ಈ ಚಿರತೆ ಕಳೆದ ಕೆಲವು ಸಮಯದಿಂದ ಇಲ್ಲಿ ತಿರುಗಾಡುತಿದ್ದು, ಊರಿನ ಜನರ ನಿದ್ದೆಗೆಡಿಸಿತ್ತು. ಅಕ್ಕಪಕ್ಕದ ಅನೇಕ ಮನೆಗಳ ನಾಯಿಗಳನ್ನು ಅದು ಎತ್ತಿಕೊಂಡು ಹೋಗಿತ್ತು. ಇಂದು ಅದು ಸೆರೆಸಿಕ್ಕಿರುವುದರಿಂದ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ, ಉಪವಲಯ ಅರಣ್ಯಾಧಿಕಾರಿ, ಜೀವನ್ದಾಸ್, ದಯಾನಂದ, ಅರಣ್ಯ ರಕ್ಷಕರಾದ ಗಣಪತಿ ನಾಯಕ್, ದೇವರಾಜ ಪಾಣರ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.