ಮರಳನ್ನು ಎಲ್ಲಾ ಲಾರಿ, ಟೆಂಪೊಗಳಿಗೂ ನೀಡಬೇಕು: ಮರಳಿಗಾಗಿ ಹೋರಾಟ ಸಮಿತಿ ಆಗ್ರಹ
ಉಡುಪಿ, ಸೆ.2: ಚೆನ್ನೈ ಹಸಿರು ಪೀಠದ ತಡೆಯಾಜ್ಞೆಯಿಂದ 2016ರ ಮೇ 19ರಿಂದ ಸ್ಥಗಿತಗೊಂಡ ಜಿಲ್ಲೆಯ ಸಿಆರ್ಝಡ್ ವ್ಯಾಪ್ತಿ ಪ್ರದೇಶದ ಮರಳು ಗಾರಿಕೆ, ಜಿಲ್ಲೆಯ ಸರ್ವ ಸಂಘಟನೆಗಳ, ಕಾರ್ಮಿಕರ ಹಾಗೂ ನಾಗರಿಕರ ಸತತ ಹೋರಾಟದಿಂದ ಇದೀಗ ಜಿಲ್ಲೆಯಲ್ಲಿ ಪ್ರಾರಂಭಗೊಂಡಿದ್ದು, ತಮ್ಮ ಹಲವು ಬೇಡಿಕೆಗಳ ಕುರಿತಂತೆ ಗಮನ ಹರಿಸಬೇಕು ಎಂದು ಜಿಲ್ಲಾ ಕಟ್ಟಡ ಸಾಮಗ್ರಿ ಸಾಗಾಟ ಲಾರಿ, ಟೆಂಪೊ ಮಾಲಕರ ಸಂಘದ ಅಧ್ಯಕ್ಷ ಎಂ.ಜಿ. ನಾಗೇಂದ್ರ ಹೇಳಿದ್ದಾರೆ.
ಉಡುಪಿ ಜಿಲ್ಲೆ ಸರ್ವಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ನಾಗೇಂದ್ರ ಅವರು ಜಿಲ್ಲಾಡಳಿತ ಮರಳುಗಾರಿಕೆಗೆ ಸಂಬಂಧಿಸಿದಂತೆ ಕರೆಯುವ ಸಭೆಗೆ ನಮ್ಮ ಸಂಘ ಹಾಗೂ ಕಾರ್ಮಿಕ ಸಂಘಗಳ ಪ್ರತಿನಿಧಿಗಳನ್ನು ಕರೆಯಬೇಕು ಎಂದರು.
ಅಲ್ಲದೇ ಧಕ್ಕೆ ಮಾಲಕರು ಎಲ್ಲಾ ಲಾರಿ, ಟೆಂಪೋಗಳಿಗೆ ಮರಳನ್ನು ನೀಡುವಂತೆ ಆದೇಶ ನೀಡಬೇಕು. ಕೆಲವು ಮಾಲಕರು ತಮ್ಮ ವಾಹನಗಳಿಗೆ ಮಾತ್ರ ಮರಳನ್ನು ನೀಡುವ ಸಾಧ್ಯತೆ ಇದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.
ಮರಳು ಸಾಗಾಟದ ವಾಹನಗಳು ಜಿಪಿಎಸ್ನ್ನು ಅಳವಡಿಸಿದ್ದು, ಕಳೆದೆರಡು ವರ್ಷಗಳಿಂದ ಮರಳು ಸಾಗಾಟವಿಲ್ಲದೇ ನಿಂತಿದೆ.ಈ ವಾಹನಗಳ ಜಿಪಿಎಸ್ ದುರಸ್ತಿ ವೆಚ್ಚವನ್ನು, ಹಾಗೂ ಅದಕ್ಕೆ ಹಾಕುವ ತೆರಿಗೆಯನ್ನು ಮನ್ನಾ ಮಾಡಬೇಕು ಎಂದು ನಾಗೇಂದ್ರ ತಿಳಿಸಿದರು. ಜಿಪಿಎಸ್ ಯಂತ್ರದ ಬೆಲೆ ಬೇರೆ ರಾಜ್ಯಗಳಲ್ಲಿ 4,000ರೂ. ಇದ್ದರೆ, ಇಲ್ಲಿ 10,000ರೂ.ವಸೂಲಿ ಮಾಡಲಾಗುತ್ತಿದೆ ಎಂದರು.
ಹೊಯಿಗೆ ಧಕ್ಕೆಯಲ್ಲಿ ಪರವಾನಿಗೆ ಕೊಡದಿದ್ದಾಗ ಲಾರಿ, ಟೆಂಪೊ ಮಾಲಕರ ಮೇಲೆ ದಂಡ ವಿಧಿಸುವ ಬದಲು ಹೊಯಿಗೆ ಧಕ್ಕೆ ಮಾಲಕರಿಗೂ ದಂಡ ವಿಧಿಸಿ ಕ್ರಮ ಕೈಗೊಳ್ಳಬೇಕು. ಈಗಾಗಲೇ ಪರವಾನಿಗೆ ಪಡೆದಿರುವ ಧಕ್ಕೆ ಮಾಲಕರು ಉಡುಪಿ ಜಿಲ್ಲೆಗೆ ಮಾತ್ರ ಮರಳು ಪೂರೈಸುವಂತಾಗಬೇಕು. ಬೇರೆ ಜಿಲ್ಲೆಗಳಿಗೆ ಮರಳು ಸಾಗಿಸದಂತೆ ಜಿಲ್ಲಾಡಳಿತ ನಿಗಾ ವಹಿಸಬೇಕು ಎಂದು ನಾಗೇಂದ್ರ ತಿಳಿಸಿದರು.
ಈ ಕುರಿತು ತಾವು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸುವುದಾಗಿ ನಾಗೇಂದ್ರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕರಾವೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಜಿಲ್ಲಾ ಕಾರ್ಮಿಕ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ, ಕಾರ್ಮಿಕ ಪ್ರಕೋಷ್ಠದ ಸಂದೀಪ್ ಕುಮಾರ್, ರಾಘವೇಂದ್ರ ಶೆಟ್ಟಿ ಉಪಸ್ಥಿತ ರಿದ್ದರು.
ಏಕರೂಪದ ದರ ನಿಗದಿ
ಉಡುಪಿ ಜಿಲ್ಲೆಯ ಎಲ್ಲಾ ಧಕ್ಕೆ ಮಾಲಕರಿಗೂ ಏಕ ರೂಪದ ಧಾರಣೆಯನ್ನು ಹಾಗೂ ಮಾರಾಟ ದರವನ್ನು ಜಿಲ್ಲಾಧಿಕಾರಿಗಳೇ ನಿಗದಿ ಪಡಿಸಬೇಕು. ಇದರಿಂದ ಜಿಲ್ಲೆಯ ಬಡ ಗ್ರಾಹಕರಿಗೆ ಅನ್ಯಾಯವಾಗುವುದು ತಪ್ಪಿದಂತಾಗುತ್ತದೆ ಎಂದು ನಾಗೇಂದ್ರ ತಿಳಿಸಿದರು.
ಪರವಾನಿಗೆಯನ್ನು ಜಿಪಿಎಸ್ ಮೂಲಕವೇ ನೀಡುವುದರಿಂದ ರಸ್ತೆಯಲ್ಲಿ ಮರಳು ಸಾಗಾಟ ಮಾಡುವಾಗ ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಕಿರುಕುಳ ನೀಡದಂತೆ ಸ್ಪಷ್ಟವಾದ ಸುತ್ತೋಲೆಯನ್ನು ಹೊರಡಿಸಬೇಕು ಎಂದವರು ಆಗ್ರಹಿಸಿದರು.
ಪರವಾನಿಗೆಯನ್ನು ಜಿಪಿಎಸ್ ಮೂಲಕವೇ ನೀಡುವುದರಿಂದ ರಸ್ತೆಯಲ್ಲಿ ಮರಳು ಸಾಗಾಟ ಮಾಡುವಾಗ ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಕಿರುಕುಳ ನೀಡದಂತೆ ಸ್ಪಷ್ಟವಾದ ಸುತ್ತೋಲೆಯನ್ನು ಹೊರಡಿಸಬೇಕು ಎಂದವರು ಆಗ್ರಹಿಸಿದರು.