ಮಡಿಕೇರಿ: ಪತಿಯಿಂದ ಪತ್ನಿಯ ಕೊಲೆ
ಮಡಿಕೇರಿ, ಸೆ.3 :ಮದ್ಯ ಸೇವನೆಯ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮಾರಕಾಯುಧದಿಂದ ಥಳಿಸಿ ಹತ್ಯೆ ಮಾಡಿರುವ ಘಟನೆ ಸಮೀಪದ ಕೆದಕಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 7ನೇ ಮೈಲಿನ ನಿವಾಸಿ ಜಯಾ (58) ಎಂಬವರು ಹತ್ಯೆಗೀಡಾದ ಮಹಿಳೆ ಎಂದು ತಿಳಿದು ಬಂದಿದೆ. ಕೃತ್ಯವೆಸಗಿದ ಪತಿ ರಾಮಣ್ಣ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ರಾಮಣ್ಣ ಶನಿವಾರ ರಾತ್ರಿ ಪತ್ನಿ ಜಯಾರೊಂದಿಗೆ ಕಲಹ ನಡೆಸಿದ್ದ ಎನ್ನಲಾಗಿದ್ದು, ಪತಿ, ಪತ್ನಿಯ ನಡುವೆ ಮಾತಿಗೆ ಮಾತು ಬೆಳೆದು ಕಲಹ ವಿಕೋಪಕ್ಕೆ ತೆರಳಿದೆ. ಈ ಸಂದರ್ಭ ಕುಪಿತಗೊಂಡ ಆರೋಪಿ ರಾಮಣ್ಣ ಮಚ್ಚಿನಿಂದ ಪತ್ನಿ ಜಯಾಳ ಕುತ್ತಿಗೆಗೆ ಕಡಿದು ಘಾಸಿಗೊಳಿಸಿದ ಎಂದು ತಿಳಿದು ಬಂದಿತ್ತು.
ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಜಯಾ ಅವರನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಬಳಿಕ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೆಗೌಡ, ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.