ರಾಜಕೀಯ ಮುತ್ಸದ್ದಿಗಳ ಕೊರತೆಯಿಂದ ದೇಶದ ಪ್ರಗತಿಯ ದಿಕ್ಕು ಬೇರೆಡೆ ಸಾಗಿದೆ: ವಿ.ಗೋಪಾಲಗೌಡ
ಬೆಂಗಳೂರು, ಸೆ.3: ದೇಶದ ಪ್ರಗತಿಯ ದಿಕ್ಕು ಬೇರೆಡೆ ಸಾಗುತ್ತಿದೆ. ಇದಕ್ಕೆ ಕಾರಣ ಸರಿಯಾದ ರಾಜಕೀಯ ಮುತ್ಸದ್ದಿಗಳು ಇಲ್ಲದೆ ಇರುವುದು ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ವಿಷಾದ ವ್ಯಕ್ತಪಡಿಸಿದ್ದಾರೆ.
ರವಿವಾರ ಜಯನಗರದ ಬಿಇಎಸ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ದಿ ಭಾರತ್ ಕೋ-ಆಪರೇಟಿವ್ ಸೊಸೈಟಿಯ 7ನೆ ವರ್ಷಾಚರಣೆ ಹಾಗೂ ಸಹಕಾರ ರತ್ನ ಬಿ.ಎಲ್.ಲಕ್ಕೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಉತ್ತಮ ಅವಕಾಶಗಳು ಹಾಗೂ ನೈಸರ್ಗಿಕ ಸಂಪನ್ಮೂಲ ಹೇರಳವಾಗಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಇದರಿಂದ ಸರಿಯಾಗಿ ಮಳೆ-ಬೆಳೆ ಆಗುತ್ತಿಲ್ಲ ಹಾಗೂ ದೇಶ ಅಭಿವೃದ್ಧಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ರೈತರಲ್ಲಿ ಆತ್ಮಸ್ಥೈರ್ಯ ಕುಂದುತ್ತಿದ್ದು, ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ನಮ್ಮ ದೇಶ ಬಡದೇಶ ಎಂದು ಅನೇಕ ರಾಜಕಾರಣಿಗಳು ಹೇಳುತ್ತಾರೆ. ಇದನ್ನು ನಾನು ಒಪ್ಪುವುದಿಲ್ಲ. ನಮ್ಮ ದೇಶ ಬಹಳ ಉತ್ಕೃಷ್ಟ ಹಾಗೂ ಶ್ರೀಮಂತ ರಾಷ್ಟ್ರವಾಗಿದೆ ಎಂದರು.
ಬಡ ರೈತರ ಮಕ್ಕಳಿಗೆ ವೈದ್ಯಕೀಯ ಸೀಟು ಸಿಗುತ್ತಿಲ್ಲ. ಹೀಗಾಗಿ, ಲಕ್ಕೇಗೌಡರು ಗ್ರಾಮೀಣ ಮಕ್ಕಳಿಗಾಗಿ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಮನವಿ ಮಾಡಿರುವುದು ಉತ್ತಮ ಕಾರ್ಯ ಎಂದು ಹೇಳಿದರು.
ಈ ವೇಳೆ ದಿ ಭಾರತ್ ಸಹಕಾರ ಬ್ಯಾಂಕ್ ಹಾಗೂ ಭಾರತ್ ವಿದ್ಯಾಸಂಸ್ಥೆ ನಿರ್ದೇಶಕ ಟಿ.ನರಸಿಂಹಮೂರ್ತಿ, ಸಮಾಜ ಸೇವಕ ಡಿ.ಮಂಚೇಗೌಡ ಹಾಗೂ ವೈದ್ಯ ಟಿ.ಪ್ರಭು ಅವರಿಗೆ ಸಹಕಾರ ರತ್ನ ಬಿ.ಎಲ್.ಲಕ್ಕೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.







