ಮಡಿಕೇರಿ: ಕೈಲ್ ಮುಹೂರ್ತ ಗ್ರಾಮೀಣ ಕ್ರೀಡಾಕೂಟ

ಮಡಿಕೇರಿ, ಸೆ.3: ಮೇಕೇರಿಯ ಸ್ವಾಗತ ಯುವಕ ಸಂಘ, ಜಿಲ್ಲಾ ಯುವ ಒಕ್ಕೂಟ, ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿಯ ನೆಹರು ಯುವ ಕೇಂದ್ರ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಮೇಕೇರಿಯ ಅಟಲ್ ಬಿಹಾರಿ ವಾಜಿಪೇಯಿ ಹೆಲ್ತ್ಲೈನ್, ಮೇಕೇರಿ ರೋಟರಿ ಸಮುದಾಯ ದಳ, ಜಿಲ್ಲಾ ಬಿ.ಎಂ.ಎಸ್, ಮೇಕೇರಿ ಸುಭಾಶ್ ಯುವ ಸಮಿತಿ ಮತ್ತು ಮೇಕೇರಿ ಛತ್ರಪತಿ ಸ್ವಸಹಾಯ ಸಂಘದ ಸಂಯುಕ್ತ ಆಶ್ರಯದಲ್ಲಿ 28ನೇ ವರ್ಷದ ಕೈಲು ಮುಹೂರ್ತ ಹಬ್ಬದ ಗ್ರಾಮೀಣ ಕ್ರೀಡಾಕೂಟವನ್ನು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕೈಲು ಮುಹೂರ್ತ ಹಬ್ಬದ ಗ್ರಾಮೀಣ ಕ್ರೀಡಾಕೂಟವನ್ನು ಕೊಡಗು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್ ಬಲೂನ್ಗೆ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೈಲು ಮುಹೂರ್ತ ಹಬ್ಬ ಕೊಡಗಿನ ವಿಶೇಷ ಮತ್ತು ವಿಶಿಷ್ಟವಾದ ಹಬ್ಬವಾಗಿದ್ದು, ಜಿಲ್ಲೆಯಲ್ಲಿ ಕೃಷಿ ಕಾರ್ಯ ಮುಗಿದ ನಂತರ ನೇಗಿಲು, ಕೋವಿ, ಹತ್ಯಾರುಗಳಿಗೆ ಪೂಜೆ ಸಲ್ಲಿಸಿ, ಬಂಧು-ಬಳಗ, ಮಿತ್ರರೊಡನೆ ಸಂಭ್ರಮದಿಂದ ಹಬ್ಬವನ್ನು ಆಚರಿಸಿ, ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಾರೆ. ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸೋಲು-ಗೆಲುವುಗಳನ್ನು ಸಮಾನಾಗಿ ಸ್ವೀಕರಿಸುವಂತಾಗಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯತ್ ಸದ್ಯಸೆ ಕುಮುದಾ ರಶ್ಮಿ ವೇದಿಕೆ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕೈಲು ಮುಹೂರ್ತ ಹಬ್ಬದ ಗ್ರಾಮೀಣ ಕ್ರೀಡಾಕೂಟದಲ್ಲಿ ಎಲ್ಲಾ ಗ್ರಾಮಸ್ಥರು ಭಾಗವಹಿಸಿದಾಗ ಕ್ರೀಡಾಕೂಟಕ್ಕೆ ಮೆರಗು ದೊರಕುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭೀಮಯ್ಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನಾಳಿಯಂಡ ನಾಚಪ್ಪ, ಸ್ವಾಗತ ಯುವಕ ಸಂಘದ ಅಧ್ಯಕ್ಷ ಜೆ. ಹರೀಶ್, ಕಾರ್ಯದರ್ಶಿ ಶ್ರೇಯಸ್, ಸಹಕಾರ್ಯದರ್ಶಿ ರಾಜೇಶ್, ಖಜಾಂಚಿ ಬಿ.ಎಸ್. ಅಶೋಕ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ: ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಬಿ. ಜೋಯಪ್ಪ, ಮೇಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ, ಆಧಿಶಕ್ತಿ ಮಹಿಳಾ ಸಂಘ ಅಧ್ಯಕ್ಷೆ ಇಂದಿರಾ ರೈ, ಮೇಕೇರಿ ಗ್ರಾಮ ಪಂಚಾಯತ್ ಸದಸ್ಯೆ ಅರ್ಪಿತಾ ಸಂದ್ಯ, ಅನುಸೂಯ, ಮೇಕೇರಿ ಸಹಿಪ್ರಾ ಶಾಲೆ ಮುಖ್ಯ ಶಿಕ್ಷಕಿ ಕುಸುಮಾವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಡಿಕೇರಿ ತಾಲೂಕು ಯುವ ಒಕ್ಕೂಟ ಅಧ್ಯಕ್ಷ ನವೀನ್ ದೇರಳೆ ಅಧ್ಯಕ್ಷತೆ ವಹಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.







