ಗ್ರಾಪಂ ನೌಕರರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಧರಣಿ

ಉಡುಪಿ, ಸೆ.4: ಗ್ರಾಪಂ ನೌಕರರು ಎದುರಿಸುತ್ತಿರುವ ಸಮಸ್ಯೆ ಮತ್ತು ಸರಕಾರ ವೇತನಕ್ಕೆ ನೀಡುವ ಅನುದಾನದ ಆದೇಶದಲ್ಲಿ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಗ್ರಾಮ ಪಂಚಾಯತ್ ನೌಕರರ ಸಂಘ(ಸಿಐಟಿಯು) ಸೋಮವಾರ ಮಣಿಪಾಲದಲ್ಲಿ ರುವ ಉಡುಪಿ ಜಿಪಂ ಕಚೇರಿ ಎದುರು ಧರಣಿ ನಡೆಸಿ, ಬಳಿಕ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು.
ಎಲ್ಲಾ ನೌಕರರಿಗೂ ಸರಕಾರದ ಅನುದಾನದಿಂದಲೇ ವೇತನ ಇಎಫ್ ಎಂಎಸ್ ಮೂಲಕ ಪಾವತಿ ಆಗಬೇಕು. ಪ್ರತಿ ಗ್ರಾಪಂಗೆ ಡಾಟಾ ಎಂಟ್ರಿ ಅಪರೇಟರ್ ಹುದ್ದೆ ಸೃಷ್ಟಿಸಬೇಕು. ಗ್ರೇಡ್ 2 ಕಾರ್ಯದರ್ಶಿ ಹುದ್ದೆಯ ನೇಮ ಕಾತಿಗೆ ಪಿಯುಸಿ ವಿದ್ಯಾಭ್ಯಾಸ ನಿಗದಿಪಡಿಸಿರುವುದನ್ನು ಪರಿಷ್ಕರಿಸಿ ಗ್ರಾಪಂ ನೌಕರ ಹುದ್ದೆಯಿಂದ ನೇಮಕವಾಗುವವರಿಗೆ ಹಿಂದಿನಂತೆ ಎಸೆಸೆಲ್ಸಿ ವಿದ್ಯಾರ್ಹತೆ ಮುಂದುವರಿಸಬೇಕು. ನೌಕರರಿಗೆ ಪಿಎಫ್ ಮತ್ತು ಇಎಸ್ಐ ಸೌಲಭ್ಯವನ್ನು ಒದಗಿಸಬೇಕು. ಕನಿಷ್ಠ ವೇತನವನ್ನು18,000 ರೂ.ಗೆ ಏರಿಸಬೇಕು. ನಿವೃತ್ತಿ ವೇತನ ಮತ್ತು ಉಪಧನಕ್ಕಾಗಿ ಪ್ರತ್ಯೇಕ ಅನುದಾನ ಒದಗಿಸಬೇಕು.
ಎಲ್ಲಾ ಗ್ರಾಪಂಗಳಿಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಸೃಷ್ಟಿಸಿ, ಗ್ರಾಪಂಗಳ ಸಿಬ್ಬಂದಿಗಳಿಗೆ ನೇಮಕಾತಿಗೆ ಅವಕಾಶ ಕಲ್ಪಿಸಬೇಕು. ಉಡುಪಿ ಜಿಲ್ಲೆಯಲ್ಲಿ ಖಾಲಿ ಇರುವ ಮೇಲಿನ ಹಂತದ 7ಪಿಡಿಒ, 20 ಗ್ರೇಡ್1 ಕಾರ್ಯದರ್ಶಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಗ್ರಾಪಂ ನೌಕರರಿಗೆ ಅವಕಾಶವನ್ನು ಒದಗಿಸಬೇಕು. ಗ್ರಾಪಂನ ಎಲ್ಲಾ ನೌಕರರನ್ನು ಸರಕಾರಿ ನೌಕರ ರಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. 10 ವರ್ಷಗಳ ಸತತ ಸೇವೆಯ ನೌಕರರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ನೌಕರರ ಕುಂದು ಕೊರತೆಗಳ ಬಗ್ಗೆ ತಾಲೂಕು ಮಟ್ಟದ ಸಭೆ ಕ್ರಮಪ್ರಕಾರವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಬಳಿಕ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಸಿ ಮತ್ತು ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಧರಣಿ ನಡೆಯುತಿದ್ದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ, ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶೀಘ್ರವೇ ಅಗತ್ಯದ ಕ್ರಮಕೈಗೊಳ್ಳಲಾಗುವುದು ಮತ್ತು ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಬೀಜಾಡಿ, ಪ್ರಧಾನ ಕಾರ್ಯದರ್ಶಿ ಕೆ. ರಮೇಶ್ ನಾಯ್ಕ್, ರಾಜ್ಯ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







