ನನ್ನ ಹಳ್ಳಿಮೇಸ್ಟ್ರನ್ನು ಮತ್ತೆ ಹುಡುಕುತ್ತಾ...
ಶಿಕ್ಷಕರ ದಿನಾಚರಣೆ
ಅದೊಂದು ಕಾಲವಿತ್ತು. ಅಷ್ಟೇಕೆ ಈಗಲೂ ಭಾರತದಲ್ಲಿ ಎಷ್ಟೋ ಕಡೆಗಳಲ್ಲಿ ಈ ಪರಿಸ್ಥಿತಿಯಿದೆ. ಮುಖ್ಯವಾಗಿ ಹಳ್ಳಿಗಳಲ್ಲಿ. ನನ್ನೂರಲ್ಲಿ ಒಂದು ಸರಕಾರಿ ಶಾಲೆ. ಶಾಲೆಗೆ, ಮನೆಗೆ ಮೂರು ಕಿ.ಮೀ. ಅಂತರ. ವಿದ್ಯಾರ್ಥಿಗಳೆಲ್ಲ ಬೆಳಗಿನ ಊಟ ಮುಗಿಸಿ ಎಲ್ಲರೂ ಒಟ್ಟಾಗಿ ನಡೆದುಕೊಂಡೇ ಶಾಲೆಗೆ ಹೋಗುವುದು. ಅದು ಮಳೆಗಾಲ ಇರಲಿ, ಬೇಸಿಗೆಗಾಲ ಇರಲಿ, ನಮ್ಮಲ್ಲಿ ಚಳಿಗಾಲ ಅಂತ ಪ್ರತ್ಯೇಕ ಇರುವುದಿಲ್ಲ. ಕರಾವಳಿಯವರಿಗೆ ಚಳಿಯನ್ನು ಅನುಭವಿಸುವ ಭಾಗ್ಯ ಕಡಿಮೆಯೇ! ಮಳೆಗಾಲ ಬಂದರೆ ನಮಗೆ ಸ್ವಲ್ಪಜಾಸ್ತಿನೇ ಕಿರಿಕಿರಿ. ಕಾರಣ ಕೊಡೆ ಇರುವುದಿಲ್ಲ. ಕೊಡೆ ಕೊಳ್ಳುವುದಕ್ಕೆ ಬಡತನ. ಹಾಗೆಯೇ ಶಾಲೆಗೆ ಹೋಗಲು ಸಾಧ್ಯವಿಲ್ಲ. ಜೋರಾಗಿ ಮಳೆಬಂದ ದಿನ, ಶಾಲೆಗೆ ರಜೆ ಘೋಷಣೆಯನ್ನು ಒಂದೋ ಶಾಲೆಯವರು ಮಾಡಬೇಕು, ಇಲ್ಲಾ ಅಂದ್ರೆ ನಾವೇ ಮಾಡಿಕೊಳ್ಳಬೇಕು.
ಎಂಥಾ ಪರಿಸ್ಥಿತಿ ನೋಡಿ! ಅಂತೂ ಆದಿನ ಶಾಲೆಗೆ ರಜೆ. ಹೊಟ್ಟೆ ನೋವೋ, ಇನ್ನೇನೋ ನೋವು ಅಂತ ಮನೆಯಲ್ಲೇ ನಾವು ಉಳಿದುಬಿಡೋದು. ಮನೆಯಲ್ಲಿ ಇದಕ್ಕೆ ಒಪ್ಪಿಗೆ ಇರಲ್ಲ. ಯಾರದ್ದಾದರೂ ಕೊಡೆ ತಗೊಂಡು ಹೋಗೋ ಮಾರಾಯಾ ಅಂತ ನಾಲ್ಕೈದು ಬಾರಿ ಒತ್ತಡ ತಂದ್ರೂ ಈ ನೋವು ಇದೆಯೆಲ್ಲ, ಇದು ಅವರ ಬಾಯನ್ನು ಮುಚ್ಚಿಸಿಬಿಡುತ್ತಿತ್ತು. ಕೇವಲ ನೋವಿನ ನೆಪ, ಮಳೆಯ ನೆಪ, ಇನ್ನಾವುದೇ ನೆಪ ಅಷ್ಟೇ ಅಲ್ಲ ತುಂಬಾ ಮನೆಗೆಲಸ ಇದ್ದಾಗಲೂ ನಮಗೆ ವಿಪರೀತ ನೋವು ಕಾಣಿಸಿಕೊಳ್ಳುತ್ತಿತ್ತು. ಆದಿನ ಕೂಡ ಶಾಲೆಗೆ ನಮ್ಮದು ಅನಧಿಕೃತ ರಜೆ ಘೋಷಣೆ ಇದ್ದದ್ದೇ! ಆದರೆ ನಮ್ಮ ಮೇಷ್ಟ್ರುಗಳು ಬಿಡಬೇಕಲ್ವಾ. ಅವರಿಗೆ ನಮ್ಮ ಬುದ್ಧಿ ನಮಗಿಂತ ಚೆನ್ನಾಗಿ ಗೊತ್ತಿರುತ್ತಿತ್ತು. ಮನೆಗೇ ಬಂದು ನಮ್ಮ ಕಿವಿ ಹಿಂಡಿ, ಅಗತ್ಯ ಬಿದ್ರೆ ನಾಲ್ಕು ಬಾರಿಸಿ ದರದರನೆ ಎಳೆದುಕೊಂಡೇ ಶಾಲೆಯನ್ನು ಮುಟ್ಟಿಸುತ್ತಿದ್ರು. ಅವರ ಈ ವರ್ತನೆಗೆ ನಮ್ಮ ಅಪ್ಪ, ಅಮ್ಮ, ಮನೆಯವರ್ಯಾರದ್ದೂ ಆಕ್ಷೇಪ ಇರುತ್ತಿರಲಿಲ್ಲ.
ಈಗಲೂ ನಾನು ಕಲಿತ ಶಾಲೆಯ ವ್ಯವಸ್ಥೆ ಹೆಚ್ಚು ಕಡಿಮೆ ಹೀಗೇ ಇದೆ. ಸ್ವಲ್ಪಬದಲಾವಣೆ ಅಂದ್ರೆ ಆಗಿನ ಮೇಷ್ಟ್ರುಗಳಿಲ್ಲ. ಯಾಕೆ ಯಾರೂ ಆಕ್ಷೇಪ, ಆರೋಪ ಮಾಡುತ್ತಿರಲಿಲ್ಲ ಅಂದ್ರೆ, ಮೇಷ್ಟ್ರು ಹೊಡೆದರಷ್ಟೇ ನಮ್ಮ ಮಕ್ಕಳು ಉದ್ಧಾರವಾಗೋದು ಎಂಬ ಬಲವಾದ ನಂಬಿಕೆ ನಮ್ಮನ್ನು ಹೆತ್ತವರಲ್ಲಿ ಇತ್ತು. ಮೇಷ್ಟ್ರು ಅಂದ್ರೆ ಭಯ, ಪ್ರೀತಿ, ಗೌರವ, ಅಭಿಮಾನ..... ಎಲ್ಲವೂ ಇದ್ದ ಕಾಲವದು. ಈಗಲೂ ಇಲ್ಲ ಅಂತ ನಾನು ಹೇಳುವುದಕ್ಕೆ ಸಿದ್ಧನಿಲ್ಲ. ಆದರೆ ಆ ಪ್ರಮಾಣದ್ದು ಇಲ್ಲ. ಈಗ ಕಾಲ ಬದಲಾಗಿದೆ. ಶಾಲೆಯೆಂಬ ಒಟ್ಟೂ ಆಕೃತಿಯೇ ಶುದ್ಧ ವ್ಯಾವಹಾರಿಕವಾದ ನೆಲೆಯಲ್ಲಿ ನಡೆಯುತ್ತಿದೆ. ದಾರಿಯಲ್ಲಿ ನಿಂತು ಮನೆಗೇ ಬಂದು ಕರ್ಕೊಂಡು ಹೋಗೋಕೆ ಮೇಷ್ಟ್ರುಗಳು ಬರೋಲ್ಲ. ಅಪ್ಪ- ಅಮ್ಮನೇ ತಮ್ಮ ಮಕ್ಕಳನ್ನು ಶಾಲೆಗೆ ಬಿಡಬೇಕು ಯಾ ಶಾಲಾ ವಾಹನದಲ್ಲೇ ಕಳುಹಿಸಬೇಕು. ಆಗೆಲ್ಲ ಶಾಲೆಗೆ ಮಕ್ಕಳನ್ನು ಸೇರಿಸೋದು ಬಹು ಸುಲಭವಾಗಿತ್ತು.
ಮೇಷ್ಟ್ರುಗಳೇ ಮನೆವರೆಗೆ ಬಂದು ನಮ್ಮ ಶಾಲೆಗೆ ‘‘ನಿಮ್ಮ ಮಗೂನಾ ಕಳಿಸಿ’’ ಅಂತ ಹೇಳಿ ಕರ್ಕೊಂಡು ಹೋಗೋರು. ಈಗ ಹಾಗಿಲ್ಲ. ಪ್ರತಿಷ್ಠಿತ ಶಾಲೆಗಳಲ್ಲಿ ಅಪ್ಲಿಕೇಶನ್ ಫಾರ್ಮ್ ಪಡೆಯುವುದಕ್ಕೇ ಶಾಲೆಯ ಗೇಟಾಚೆ ರಾತ್ರಿಯಿಡೀ ನಿದ್ದೆಬಿಟ್ಟು ನಿಲ್ಲಬೇಕು. ಸಾವಿರ, ಲಕ್ಷ ರೂ. ಕೊಟ್ಟು ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಇಂಥ ಶಾಲೆಗಳಲ್ಲಿ ಮೇಷ್ಟ್ರುಗಳು ಹೊಡೆಯೋ ಹಾಗಿಲ್ಲ, ಅಪ್ಪಿತಪ್ಪಿಒಂದೆರಡು ಏಟು ಹಾಕಿದರೆ ಅದು ಟಿವಿಯಲ್ಲಿ ಪ್ರಸಾರವಾಗುತ್ತೆ. ಕಾರಣ ಸಿಸಿಟಿವಿಗಳು ಶಾಲೆಯಲ್ಲಿ ಮೇಷ್ಟ್ರುಗಳನ್ನು ಮಾತ್ರ ನೋಡುತ್ತಾ ಇರುತ್ತೆ. ‘‘ನನ್ನ ಮಗ ಅಥವಾ ಮಗಳು ಡಿಸ್ಟಿಂಕ್ಷನ್ ತಗೋಲಿಲ್ಲ. ಆ ಮೇಷ್ಟ್ರು ಸರಿಯಾಗಿ ಪಾಠ ಮಾಡಲ್ಲ’’ ಅಂತ ಮ್ಯಾನೇಜ್ಮೆಂಟ್ಗೆ ದೂರು ಕೊಟ್ಟು, ಆ ಮೇಷ್ಟ್ರುಗಳ ಬದುಕಿನಲ್ಲೇ ಆಟವಾಡೋಕೆ ಪೋಷಕರು ಶುರು ಮಾಡ್ತಾರೆ. ಈ ಮ್ಯಾನೇಜ್ಮೆಂಟ್ ಮಂದಿ ಇರ್ತಾರಲ್ಲ, ಇವರಿಗೂ ಹಣ ಮುಖ್ಯ. ವಾಸ್ತವ ಏನು ಅಂತ ತಿಳಿಯೋದು ಮುಖ್ಯವಲ್ಲ. ಆರು ತಿಂಗಳಿಗೋ ವರ್ಷಕ್ಕೋ ಮೇಷ್ಟ್ರುಗಳನ್ನು ಬದಲಾಯಿಸುತ್ತಲೇ ಇವರು ಶಾಲೆಯನ್ನು ‘ಮ್ಯಾನೇಜ್’ ಮಾಡ್ತಾರೆ.
‘‘ಅಷ್ಟೆಲ್ಲ ಹಣಕೊಟ್ಟು ಅವರು ತಮ್ಮ ಮಕ್ಕಳನ್ನು ನಮ್ಮ ಶಾಲೆಯಲ್ಲಿ ಬಿಟ್ಟಿರುತ್ತಾರೆ. ಅವರ ಮಾತುಗಳನ್ನು ನಾವು ಕೇಳಬೇಕು. ಇಲ್ಲದೆ ಹೋದ್ರೆ ನಾವು ಶಾಲೆ ನಡೆಸೋದು ಹೇಗೆ ಅಂತ’’ ಮ್ಯಾನೇಜ್ಮೆಂಟ್ನವರು ಪ್ರಶ್ನಿಸುತ್ತಾರೆ. ಆಳುಗರಿಗೆ ಪಂಚೇಂದ್ರಿಯಗಳು ಸರಿಯಿಲ್ಲವಾದರೆ ಎಂಥ ಅನಾಹುತ ಸಂಭವಿಸುತ್ತದೆ ಎಂಬುದನ್ನು ಕಣ್ಣಾರೆ ಕಂಡ ದೇಶ ನಮ್ಮದು. ಶಾಲೆಯನ್ನು ನಡೆಸೋದು ಯಾರು ಅಂತಾನೋ ಗೊತ್ತಾಗುತ್ತಿಲ್ಲ. ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ನೋಡಿ! ಅಷ್ಟೆಲ್ಲ ಫೀಸು ಕೊಟ್ಟು, ಸಾಕಷ್ಟು ಖರ್ಚುಮಾಡಿ ದೊಡ್ಡದೊಡ್ಡ ಶಾಲೆಗೆ (ಅಂದರೆ ಕಟ್ಟಡಗಳು ದೊಡ್ಡದಾಗಿರುವ) ಮಕ್ಕಳನ್ನು ಸೇರಿಸಿ ಓದಿಸೋದು ಕೆಲವು ಪೋಷಕರಿಗೆ ಅದೊಂದು ಇನ್ವೆಸ್ಟ್ಮೆಂಟು.
ಇನ್ನು ಕೆಲವರಿಗೆ ಪ್ರತಿಷ್ಠೆಯ ಪ್ರಶ್ನೆ. ಈ ಪ್ರತಿಷ್ಠೆಯ ಪ್ರಶ್ನೆ ಬಿಡೋಣ. ಇನ್ವೆಸ್ಟ್ಮೆಂಟು ಅಂದರೆ ಮುಂದೊಂದು ದಿನ ತಮ್ಮ ಮಕ್ಕಳು ಕೆಲಸಕ್ಕೆ ಸೇರಿ ತಾವು ಮಾಡಿದ ಸಾಲ ತೀರಿಸುತ್ತಾರೆ. ತಾವು ನಿವೃತ್ತಿಯಾಗಿ ನೆಮ್ಮದಿಯ ಜೀವನ ಸಾಗಿಸಬಹುದು. ತಾವು ಹಾಕಿದ ದುಡ್ಡು ಬಡ್ಡಿ ಸಮೇತ ಬರುವಷ್ಟು ಮಗನ/ಳ ಸಂಬಳ ಇರುತ್ತೆ ಅಂತ ಕನಸು ಅವರದ್ದು. ಆದರೆ ಅಷ್ಟೊತ್ತಿಗೆ ಇವರಿಗೆಷ್ಟು ವಯಸ್ಸಾಗಿ ರುತ್ತೋ? ಬದುಕಿರುತ್ತಾರೋ ಇಲ್ಲವೋ? ಮಕ್ಕಳೇನಾದ್ರೂ ಇವರನ್ನು ಬಿಟ್ಟು ಅಮೆರಿಕದಲ್ಲೋ, ಇಂಗ್ಲೆಂಡಲ್ಲೋ ನೆಲೆಸಿದರೆ ಇವರ ಗತಿಯೇನು? ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಾಣಬೇಕು ನಿಜ. ಆದರೆ, ಅತಿಯಾದ ಕನಸು ಒಳ್ಳೆಯದಲ್ಲ.
ಎಲ್ಲವೂ ನಾವಂದು ಕೊಂಡಂತೆ ಇರುವುದಿಲ್ಲ. ಈ ರೀತಿಯ ಅತಿಯಾದ ಕನಸು ಕಾಣುವ ಹೆತ್ತವರೆಲ್ಲರೂ ತಮ್ಮ ವರ್ತಮಾನದ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವುದು ದುರಂತ ವಾಸ್ತವ. ಇದರ ಬದಲಿಗೆ ತಮ್ಮ ಮಕ್ಕಳಿಗೆ ಜೀವನ ಶಿಕ್ಷಣವನ್ನು ಹೆತ್ತವರು ಕೊಡಬಹುದಲ್ಲ! ಇವತ್ತಿನ ಕಾಲಕ್ಕೆ ತಕ್ಕ ಹಾಗೆ ಬೆಳೆಸಿ. ಅದೇ ರೀತಿ ಸಮಷ್ಟಿಯ ಪ್ರಜ್ಞೆಯನ್ನು ರೂಢಿಸಬಹುದು! ಸಮೂಹವೊಂದು ಸ್ವೀಕರಿಸಬಹುದಾದ ಗುಣ-ಸ್ವಭಾವ-ವ್ಯಕ್ತಿತ್ವವನ್ನು ನಮ್ಮ ನಮ್ಮ ಮಕ್ಕಳಲ್ಲಿ ಎಳವೆಯಲ್ಲೇ ಬೆಳೆಸಲು ಸಾಧ್ಯವಿದೆ. ಎಲ್ಲವನ್ನೂ ಶಾಲೆಯಿಂದಲೇ ಆಗಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ.
ಜಗತ್ತಿನ ಎಲ್ಲಾ ಅಪ್ಪ-ಅಮ್ಮಂದಿರಿಗೂ ತಮ್ಮ ಮಗನೋ, ಮಗಳೋ ತಮ್ಮಿಚ್ಛೆಯಂತೆ ಬೆಳೆಯಬೇಕು ಎಂಬ ಹಠ. ಚೆನ್ನಾಗಿ ಓದು, ಚೆನ್ನಾಗಿ ಕಾಸು ಸಂಪಾದನೆ ಮಾಡು ಅನ್ನುವುದು ಅವರ ಉಪದೇಶ. ಈ ಕಾರಣಕ್ಕೆ ನಮ್ಮ ಶಾಲೆಗಳಲ್ಲಿ ಸಂಗೀತ, ಕ್ರೀಡೆ, ಮೊದಲಾದ ವಿಭಾಗಗಳಲ್ಲಿ ನೈಪುಣ್ಯ ಹೊಂದಿರುವ ಶಿಕ್ಷಕರು ಇರುವುದು ಕಡಿಮೆ. ಕೆಲವು ಶಾಲೆಗಳಲ್ಲಿ ‘ಜಾಗಕ್ಕೊಂದು ಜನ’ ಎಂಬಂತೆ ಇರುತ್ತಾರೆ. ದೈಹಿಕ ಶಿಕ್ಷಕರು ಇದ್ದರೂ ಅವರಿಗೆ ಮಿಕ್ಕ ಶಿಕ್ಷಕರಿಗಿರುವ ಸ್ಥಾನಮಾನವಿರುವುದಿಲ್ಲ. ಸಂಗೀತದಂಥ ಇತರ ಚಟುವಟಿಕೆಗಳು ಪಠ್ಯ ಕಲಿಕೆಯ ನಡುವೆ ಬರುವ ವಿರಾಮ. ಇವತ್ತು ಶಾಲೆಯಲ್ಲಿ ‘‘ನೀನೇನು ಆಟ ಆಡಿದೆ ?’’ ಅಥವಾ ‘‘ಯಾವ ಹಾಡು ಹಾಡಿದೆ ಮಗಳೇ?’’ ಎಂದು ಕೇಳುವ ಹೆತ್ತವರಿಲ್ಲ.
‘‘ಏನು ಓದಿದೆ?’’ ಅಂತ ಕೇಳುವವರೇ ಜಾಸ್ತಿ. ಈ ಕಾಟದಿಂದಾಗಿಯೇ ಮಕ್ಕಳು ಮೊಬೈಲಿಗೆ ಮೊರೆ ಹೋಗುತ್ತಾರೆ. ಕ್ಲಾಸಿಗೆ ಚಕ್ಕರ್ ಹಾಕಿ ಸಿನೆಮಾ ನೋಡುವುದಕ್ಕೆ ಹೋಗುತ್ತಾರೆ. ಸುಳ್ಳು ಹೇಳುವುದಕ್ಕೆ ಕಲಿಯುತ್ತಾರೆ. ಪೋಷಕರು ಮನೆಯಲ್ಲೇ ಕುಳಿತು ಶಿಕ್ಷಕರಿಗೆ ಹಿಡಿಶಾಪ ಹಾಕುತ್ತಾರೆ. ಅವರಾದರೂ ಏನು ಮಾಡುತ್ತಾರೆ. ಅದೇ ಸಿಲಬಸ್ಸು, ಅದೇ ಮಕ್ಕಳು, ಎಲ್ಲರಿಗೂ ಅದೇ ಪಾಠವನ್ನು ಹೇಳಿದರೂ ಯಾಕೆ ಎಲ್ಲರೂ ತೊಂಬತ್ತೈದು ಪರ್ಸೆಂಟು ಅಂಕ ತೆಗೆಯುವುದಿಲ್ಲ ಎನ್ನುವ ಸಮಸ್ಯೆ ಅವರದ್ದು. ಇಲ್ಲಿಯೇ ಇನ್ನೊಂದು ಮುಖ್ಯವಾದ ವಿಚಾರವನ್ನು ಹೇಳಿಬಿಡಬೇಕು. ಇವತ್ತಿನ ಶಿಕ್ಷಣದ ಗುಣ-ಮಟ್ಟವೂ ಅಂದಿನಂತಿಲ್ಲ ಎಂಬ ವಾದವೂ ಕಾರಣವಾಗಿದೆಯೆನ್ನಬಹುದು. ಪಾಶ್ಚಾತ್ಯ ಶಿಕ್ಷಣ ಪದ್ಧತಿ ನಮ್ಮನ್ನು ಬಲವಾಗಿ ಕಾಡುತ್ತಿದೆ. ಪಾಶ್ಚಾತ್ಯರಿಗೆ ಬೇಕಾಗುವಂತೆ ನಮ್ಮ ನಮ್ಮ ಮಕ್ಕಳನ್ನು ನಾವು ಸಿದ್ಧಗೊಳಿಸುತ್ತಿದ್ದೇವೆ. ಸ್ಥಳೀಯತೆಯಿಂದ ಆರಂಭವಾಗಿ ರಾಷ್ಟ್ರೀಯತೆಯ ಪ್ರಜ್ಞೆ ನಮ್ಮ ಮಕ್ಕಳಲ್ಲಿ ಬೆಳೆಯುವಂತೆ ಮಾಡದೆ ಅವರ ಬೌದ್ಧಿಕ ಚಿಂತನೆಯನ್ನೇ ಪರಭಾರೆಯನ್ನಾಗಿಸುವತ್ತ ಕೊಂಡೊಯ್ಯುತ್ತಿದ್ದೇವೆ.
ಡಾ. ಯು.ಆರ್. ಅನಂತಮೂರ್ತಿ ಒಂದು ಮಾತನ್ನು ಹೇಳುತ್ತಾರೆ: ‘‘ಹೆಚ್ಚುತ್ತಿರುವ ಆಂಗ್ಲಮಾಧ್ಯಮದಿಂದ ನಮ್ಮ ಮಕ್ಕಳಲ್ಲಿ ಭಾಷಾ ದಾರಿದ್ರ್ಯವೂ, ವಿಷಯ ದಾರಿದ್ರ್ಯವೂ ಉಂಟಾಗುತ್ತಿದೆ’’ ಎಂದು. ಮಾತೃಭಾಷೆಯ ಪ್ರಭಾವವನ್ನೇ ಪ್ರಮುಖ ಸಂವಹನ ಮಾಧ್ಯಮವನ್ನಾಗಿ ಬಳಸಿಕೊಂಡ ಮಾಧ್ಯಮವು ಮಕ್ಕಳಲ್ಲಿ ಸೃಷ್ಟಿಶೀಲ ಚಿಂತನೆಯನ್ನು, ವಿದಾಯಕ ಕೌಶಲವನ್ನು ಬೆಳೆಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ನಮ್ಮ ಚಿಂತನೆಗಳು, ಆಲೋಚನೆಗಳು, ನಮ್ಮ ನೆಲದ ಸತ್ವವನ್ನು ಕಳೆದುಕೊಳ್ಳುತ್ತಿರುವುದರಿಂದಲೇ ನಮ್ಮಲ್ಲಿ ಸಮಾನತೆಯಿಲ್ಲ; ಒಗ್ಗಟ್ಟಿನ ಮಂತ್ರವಾಗಲೀ, ಭಾವೈಕ್ಯವಾಗಲೀ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ.
ಶಿಕ್ಷಣದಲ್ಲಿ ಸಮಾನತೆಯಿಲ್ಲದ ಸಮಾಜದಲ್ಲಿ ಯಾವುದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಮಕ್ಕಳನ್ನು ಜ್ಞಾನವಂತರನ್ನಾಗಿ, ಶೀಲವಂತರನ್ನಾಗಿ, ಗುಣವಂತರನ್ನಾಗಿ ಮಾಡಬೇಕಾದ ನಮ್ಮ ಶಿಕ್ಷಣ ವ್ಯವಸ್ಥೆ ಕೇವಲ ಯಾಂತ್ರಿಕ ಉತ್ಪಾದನೆಯಂತೆ ಅಂಕಗಳನ್ನೇ ಆಧರಿಸಿ ಬೇರನ್ನು ಕತ್ತರಿಸುತ್ತಿದೆ. ಈ ವ್ಯವಸ್ಥೆ ಹಣಕೊಟ್ಟು ಸೀಟುಗಳನ್ನು ಗಿಟ್ಟಿಸಿಕೊಳ್ಳುವುದು. ಅಂಕಗಳಿಲ್ಲ ಎಂದರೆ ದುಡ್ಡು ಅಂಕಗಳ ಸ್ಥಾನವನ್ನು ತುಂಬುವಂತೆ ಪ್ರೇರೇಪಿಸುತ್ತದೆ. ಏನು ಬೇಕಾದರೂ ಆಗಲಿ, ನೀನು ಅಂಕಗಳನ್ನು ಪಡೆಯಬೇಕು. ಇಲ್ಲ ಅಂದ್ರೆ ಸೀಟಿಗಾಗಿ ದುಡ್ಡನ್ನು ವ್ಯಯಿಸಬೇಕು ಎಂಬ ಸ್ಥಿತಿಯಲ್ಲಿ ವರ್ತಮಾನದ ಓದು-ಕಲಿಕೆ ನಡೆಯುತ್ತಿದೆ. ಅದಕ್ಕೆ ಶಿಕ್ಷಣವೂ ಬದಲಾಗಿದೆ. ಶಿಕ್ಷಕರೂ ಬದಲಾಗಿದ್ದಾರೆ. ವ್ಯವಸ್ಥೆಯೂ ಬದಲಾಗಿದೆ. ಇದು ನಮ್ಮ ಕಾಲದ ದುರಂತ. ಬುದ್ಧಿ-ಭಾವಗಳ ಸಮ್ಮಿಲನ ಇಲ್ಲಿ ಇಲ್ಲ. ಶಿಕ್ಷಣ ಅಂದರೆ ಪಠ್ಯಪುಸ್ತಕದಲ್ಲಿರುವ ಅಕ್ಷರಗಳನ್ನು ಮಿದುಳಲ್ಲಿ ಸೇವ್ ಮಾಡಿಕೊಳ್ಳುವುದು ಎಂಬ ಮನಸ್ಥಿತಿಯಿಂದ ನಾವು ತುರ್ತಾಗಿ ಹೊರಬರಬೇಕಾಗಿದೆ. ಕೈಯಲ್ಲಿ ಬೆತ್ತ ಹಿಡಿದುಕೊಂಡೇ, ಕಿವಿ ಹಿಂಡುತ್ತಾ ಬುದ್ಧಿ ಹೇಳಿದ ನನ್ನಂಥ ಲಕ್ಷಾಂತರ ಜನರ ಬದುಕಿನಲ್ಲಿ ಬುದ್ಧಿ-ಭಾವಗಳ ಸಮ್ಮಿಲನವನ್ನು ಚೈತನ್ಯಗೊಳಿಸಿ ಬದುಕಿನಲ್ಲಿ ದಾರಿ ತೋರಿದ ನನ್ನ ಹಳ್ಳಿ ಮೇಷ್ಟ್ರನ್ನು ಮತ್ತೆ ಹುಡುಕುತ್ತಿದ್ದೇನೆ