ಇನ್ನರ್ವ್ಹೀಲ್ ಕ್ಲಬ್ನಿಂದ ಶಿಕ್ಷಕರಿಗೆ ಸನ್ಮಾನ
ಮೂಡುಬಿದಿರೆ, ಸೆ. 5: ಇಂದು ಸಮಾಜದಲ್ಲಿ ನಾಯಕತ್ವಕ್ಕಾಗಿ ಪೈಪೋಟಿ ಇದೆ. ಆದರೆ ಗುಣಮಟ್ಟದ ನಾಯಕರ ಕೊರತೆಯಿದೆ. ಒಳ್ಳೆಯ ಜನರು ಮೌನಿಗಳಾಗುತ್ತಿರುವುದು ಮತ್ತು ನಾಯಕತ್ವ ಪಡೆಯಲು ಹಿಂಜರಿಯುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ರೋಟರಿ ಕ್ಲಬ್ನ ನಿಯೋಜಿತ ಉಪ ರಾಜ್ಯಪಾಲ ಅಭಿನಂದನ್ ಶೆಟ್ಟಿ ಹೇಳಿದರು.
ಇಲ್ಲಿನ ಇನ್ನರ್ವ್ಹೀಲ್ ಕ್ಲಬ್ ವತಿಯಿಂದ ಸಮ್ಮಿಲನ್ ಹಾಲ್ನಲ್ಲಿ ನಡೆದ ಶಿಕ್ಷಕರಿಗೆ ಸನ್ಮಾನ ಮತ್ತು ನಾನಾ ಕೊಡುಗೆಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಜನರ ಹಾರೈಕೆ, ಆಶೀರ್ವಾದ ಅವ್ಯಕ್ತವಾಗಿ ಲಭಿಸುತ್ತದೆ. ಮಿತೃತ್ವ, ಸಮಾಜಮುಖಿ ಚಿಂತನೆಯೊಂದಿಗೆ ಬದುಕು ಸಾಗಿಸಿದಾಗ ಜೀವನ ಪರಿಪೂರ್ಣವಾಗುತ್ತದೆ ಎಂದು ಅವರು ಹೇಳಿದರು. ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಜಯಶ್ರೀ ಅಮರಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಕಾಮತ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಮಾತನಾಡಿದರು. ಕ್ಲಬ್ ಚೆಯರ್ಮನ್ ಡಾ.ವಿನಯ ಕುಮಾರ್ ಹೆಗ್ಡೆ, ಕಾರ್ಯದರ್ಶಿ ಶಾಲಿನಿ ಹರೀಶ್ ನಾಯಕ್, ಪ್ರಕಾಶಿನಿ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ನಾಗರತ್ನ ಶಿರೂರು, ಫಣಿರಾಜ್, ಬಾಲಕೃಷ್ಣ ರೆಖ್ಯ, ಸಿಸಿಲಿಯಾ, ಹೀಲ್ಡಾ ಸಿಕೆ್ವೀರಾ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಸ್ವ ಉದ್ಯೋಗ ಯೋಜನೆ ಕಲ್ಪಿಸಲು ಶೈಲಜಾ ನಾಗೇಶ್ ಅವರಿಗೆ ಹೊಲಿಗೆ ಯಂತ್ರ, ಸಮುದಾಯ ಆರೋಗ್ಯ ಕೇಂದ್ರಕ್ಕೆ ಕುಕ್ಕರ್, ಮಿಕ್ಸಿ, ಗ್ರೈಂಡರ್, ವಿಶ್ವನಾಥ ಪೂಜಾರಿ , ಇಂದಿರಾ ಭಟ್ ಎಂಬವರಿಗೆ ಗಾಲಿ ಕುರ್ಚಿ, ಮಿಜಾರು ಸರಕಾರಿ ಪ್ರಾಥಮಿಕ ಶಾಲೆಗೆ ಸುಮಾರು 19,500 ಮೌಲ್ಯದ ಪ್ರಿಂಟರ್, ಕ್ರೀಡಾ ಸಾಮಾಗ್ರಿಗಳು, ಮೂಡುಬಿದಿರೆ ಮೈನ್ ಶಾಲೆಗೆ 19,500 ಮೌಲ್ಯದ ಕ್ರೀಡಾ ಸಾಮಾಗ್ರಿಗಳು, ಕುರ್ಚಿ, ಟೇಬಲ್ಗಳು, ಡಯಾಬಿಟಿಸ್ನಿಂದ ಬಳಲುತ್ತಿರುವ ಕೇಶವ ಆಚಾರ್ಯ ಎಂಬ ಬಾಲಕನ ಔಷಧ ವೆಚ್ಚಕ್ಕಾಗಿ ನೆರವು, ಇಬ್ಬರು ಸಣ್ಣ ರೈತರಿಗೆ ಕೃಷಿಪರಿಕರಗಳನ್ನು ವಿತರಿಸಲಾಯಿತು. ಕಾರ್ಯದರ್ಶಿ ಶಾಲಿನಿ ಹರೀಶ್ ನಾಯಕ್ ವಂದಿಸಿದರು.