ವಿಕಾಸ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಮಂಗಳೂರು, ಸೆ.5: ನಗರದ ವಿಕಾಸ್ ಕಾಲೇಜಿನಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆ ನಡೆಯಿತು. ಈ ಸಂದರ್ಭ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ಪಿ. ಶಾಂತಾರಾಮ್ ಮೊಗ್ರಾಲ್ ಹಾಗೂ ಡಾಕ್ಟರೇಟ್ ಪದವಿ ಪಡೆದ ವಿಕಾಸ್ ಕಾಲೇಜಿನ ಹಿಂದಿ ಉಪನ್ಯಾಸಕಿ ಡಾ.ಆಶಾ ಕುಮಾರಿಯವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಂತರಾಮ ಮೊಗ್ರಾಲ್ ಹೆತ್ತವರನ್ನು ಗೌರವಿಸುವಂತೆ ಶಿಕ್ಷಕರನ್ನು ಗೌರವಿಸಿ. ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಿರಬೇಕು, ಉಪನ್ಯಾಸಕರಲ್ಲಿರುವ ಧನಾತ್ಮಕ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷ ಸ್ಥಾನ ವಹಿಸಿದ ಕಾಲೇಜಿನ ಮುಖ್ಯಸ್ಥ ಹಾಗೂ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಕೇವಲ ಶಿಕ್ಷಕರ ದಿನಾಚರಣೆಯಂದು ಮಾತ್ರ ಗೌರವ ನೀಡದೆ ಜೀವನದುದ್ದಕ್ಕೂ ಗೌರವಿಸಬೇಕು. ಶಾಲೆ ಮತ್ತು ಕಾಲೇಜಿನ ದಿನಗಳಲ್ಲಿ ಶಿಸ್ತಿನಿಂದ ಇದ್ದರೆ ಜೀವನದುದ್ದಕ್ಕೂ ಅದು ನಮ್ಮನ್ನು ಕಾಪಾಡುತ್ತದೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಸಂಚಾಲಕ ಡಾ.ಡಿ.ಶ್ರೀಪತಿ ರಾವ್, ಸಲಹೆಗಾರ ಡಾ. ಅನಂತ್ ಪ್ರಭು ಜಿ., ಪ್ರಾಂಶುಪಾಲ ಟಿ. ರಾಜಾರಾಮ್ ರಾವ್, ಸಮನ್ವಯಾ ಧಿಕಾರಿ ಪಾರ್ಥಸಾರಥಿ ಪಾಲೆಮಾರ್, ಆಡಳಿತಾಧಿಕಾರಿ ವಿದ್ಯಾ ಕಾಮತ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನಿಹಾರಿಕ ಸ್ವಾಗತಿಸಿದರು. ಅನುಷಾ ವಂದಿಸಿದರು. ಪ್ರಥಮ್ ಕಾರ್ಯಕ್ರಮ ನಿರೂಪಿಸಿದರು.







