ವಾಟ್ಸಾಪ್ ಮೂಲಕ ಗಲಭೆಗೆ ಪ್ರಚೋದನೆ: ದೂರು
ಬ್ರಹ್ಮಾವರ, ಸೆ.6: ಬಾರ್ಕೂರು ಶ್ರೀಕಾಳಿಕಾಂಬಾ ದೇವಸ್ದಾನದ ಗೌರವಾಧ್ಯಕ್ಷ ಅಲೆವೂರು ಯೋಗೀಶ್ ಅಚಾರ್ಯ ವಾಟ್ಸಾಪ್ ಸಂದೇಶದ ಮೂಲಕ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆಂದು ಬಾರಕೂರು ರಂಗನಕೆರೆಯ ಪ್ರವೀಣ ಆಚಾರ್ಯ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಪಾದ ಪೂಜೆ ಮಾಡಿಸಿಕೊಂಡು ಹಣ ದೋಚುವ ಸ್ವಾಮಿ ಸನ್ಯಾಸಿಗಳು ನಮಗೆ ಬೇಕಾಗಿಲ್ಲ, ಸಮಾಜದ ಉನ್ನತಿಗಾಗಿ ಸೇವೆ ಮಾಡುವ ಗುರುಗಳು ಬೇಕಾಗಿದ್ದಾರೆ. ಹೊಲಸು ರಾಜಕೀಯದ ವ್ಯಕ್ತಿಗಳ ಚೇಲಗಳಾದ ಗುರುಗಳು ಬೇಕೆ?’ ಎಂಬ ವಾಟ್ಸಾಪ್ ಸಂದೇಶವನ್ನು ಅಲೆವೂರು ಯೋಗೀಶ್ ಆಚಾರ್ಯ ಜೂ.24ರಂದು ಸಾರ್ವಜನಿಕರಿಗೆ ಕಳುಹಿಸಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ ಅವರು ಬಾರ್ಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ಹೆಸರಿನಲ್ಲಿ ಹಲವಾರು ಮೋಸ ವಂಚನೆಗಳನ್ನು ಮಾಡಿದ್ದು, ವಿಶ್ವಕರ್ಮ ಸಮಾಜದ ದೇವ ಸ್ಥಾನ ಹಾಗೂ ವಿಶ್ವಕರ್ಮ ಒಕ್ಕೂಟದ ಖಾತೆಯ ಹಣವನ್ನು ದುರುಪಯೋಗ ಮಾಡಿ ವಿಶ್ವಕರ್ಮ ಸಮಾಜ ಭಾಂದವರೊಳಗಿದ್ದ ಒಗ್ಗಟ್ಟನ್ನು ಮುರಿದು ಒಕ್ಕೂಟದ ಸದಸ್ಯರೊಳಗೆ ಭಿನ್ನಾಭಿಪ್ರಾಯ ಗೊಂದಲ ಗಲಾಟೆಯಾಗಲು ಪ್ರಚೋದನೆ ನೀಡುತ್ತಿದ್ದಾರೆ ಎಂದು ದೂರಲಾಗಿದೆ.