ಹೂಡೆ ಸಾಲಿಹಾತ್ನಲ್ಲಿ ಶಿಕ್ಷಕರ ದಿನಾಚರಣೆ
ಉಡುಪಿ, ಸೆ.6: ತೋನ್ಸೆ ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕೆಮ್ಮಣ್ಣು ಸೈಂಟ್ ಫಿಲೋಮಿನಾ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ರೋಜಾ ಡಿಸೋಜ, ತೋನ್ಸೆ ಖಂಡಿಗೆ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ರಾಮಪ್ಪ ಟಿ.ಸುವರ್ಣ ಹಾಗೂ ಕೆಮ್ಮಣ್ಣು ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಮಪ್ಪ ಪೂಜಾರಿ ಗುಳಿಬೆಟ್ಟು ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಮಾತ ನಾಡಿ, ಶಾಲೆಯು ಎಲ್ಲ ಪ್ರಾರ್ಥನಾಲಯಕ್ಕಿಂತ ಮಿಗಿಲಾದುದು. ಶಿಕ್ಷಣ ದಂಧೆ ಯಾದರೆ, ಮುದಿ ತಂದೆ ತಾಯಿ ಬೇಡವಾಗುತ್ತಾರೆ, ಆಗ ಶಿಕ್ಷಣದ ನೈಜ ಉದ್ದೇಶ ಈಡೇರುವುದಿಲ್ಲ. ಶಿಕ್ಷಕರು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ಹಿರಿಯ ಟ್ರಸ್ಟಿ ಆದಂ ಮೌಲಾನಾ, ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಪ್ರಾಂಶುಪಾಲರಾದ ಡಾ.ಸಬೀನಾ, ಮೆಹಜಬೀನ್ ಪಠಾಣ್, ಕುಲ್ಸುಮ್ ಅಬೂಬಕರ್, ಮುಖ್ಯ ಶಿಕ್ಷಕಿಯರಾದ ಸುನಂದಾ, ಲವೀನಾ ಕ್ಲಾರಾ, ಸಬೀಹಾ ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆಯ ವತಿಯಿಂದ ಶಿಕ್ಷಕಿಯರಿಗಾಗಿ ಹಗ್ಗಜಗ್ಗಾಟ, ಮಡಕೆ ಒಡೆಯುವುದು ಸಹಿತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.