ನಾರಾಯಣಗುರುಗಳ ಆದರ್ಶ ಯುವಜನತೆಗೆ ಮಾದರಿ : ಅಭಯಚಂದ್ರ
ಮೂಡುಬಿದಿರೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನಾಚರಣೆ
ಮೂಡುಬಿದಿರೆ,ಸೆ.6: ನಾರಾಯಣಗುರುಗಳ ಸಂದೇಶಗಳು ಸಮಾಜದಲ್ಲಿ ಎಲ್ಲೆಡೆ ಹರಡಿ ಶಾಂತಿಯುತ ಸಮಾಜಕ್ಕೆ ಅದು ಮುನ್ನುಡಿಯಾಗಬೇಕು. ಶಿಕ್ಷಣದ ಮಹತ್ವವನ್ನು ಅಂದೇ ವಿವರಿಸಿರುವ ಅವರ ತತ್ವಸಿದ್ಧಾಂತಗಳು ಈ ಕಾಲದಲ್ಲೂ ಪ್ರಸ್ತುತವೆನಿಸುತ್ತದೆ. ಶೈಕ್ಷಣಿಕ ಅಭಿವೃದ್ಧಿಯಿಂದ ಸಮಾಜದಲ್ಲಿ ಸಮಾನತೆ ಕಂಡುಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿರುವ ಗುರುಗಳು ಇಂದಿನ ಯುವಜನತೆಗೆ ಆದರ್ಶರಾಗಿದ್ದಾರೆ. ಪುಣ್ಯ ಪುರುಷರ ಜಯಂತಿಯನ್ನು ರಾಜ್ಯ ಸರ್ಕಾರವೇ ಆಚರಿಸುತ್ತಿರುವುದು ಅವರಿಗೆ ನೀಡುತ್ತಿರುವ ನಿಜವಾದ ಗೌರವವಾಗಿದೆ ಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಮೂಡುಬಿದಿರೆಯ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ಬುಧವಾರ ಸಂಘದ ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರುಗಳ 163ನೇ ಜನ್ಮದಿನಾಚರಣೆ ಹಾಗೂ ನಾರಾಯಣಗುರುಗಳ ಮೂರ್ತಿ ಪ್ರತಿಷ್ಠಾಪನೆಯ 31ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಘದ ಕಾಮಧೇನು ಸಭಾಭವನಕ್ಕೆ ರಾಜ್ಯ ಸರ್ಕಾರದಿಂದ 20 ಲಕ್ಷ ರೂ. ಅನುದಾನವನ್ನು ಮಂಜೂರು ಮಾಡಿಸುವಲ್ಲಿ ಶ್ರಮಿಸಿದ ಕೆ.ಅಭಯಚಂದ್ರ ಜೈನ್ ಅವರಿಗೆ ಅಭಿನಂದನೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಿಪ್ಅಪ್ ಡಾನ್ಸರ್ ಅವಿನಾಶ್ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮದ ಸದಸ್ಯರಾಗಿ ಆಯ್ಕೆಯಾದ ಚಂದ್ರಹಾಸ ಸನಿಲ್ ಅವರನ್ನು ಗೌರವಿಸಲಾಯಿತು.
ಹೊಲಿಗೆ ತರಬೇತಿ ಪಡೆದವರ ಅರ್ಹತಾ ಪತ್ರವನ್ನು ತರಬೇತುದಾರರಾದ ವನಿತಾ ಸ್ವೀಕರಿಸಿದರು. ಬಿಲ್ಲವ ಸಮುದಾಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಾರಾಯಣಗುರು ಸೇವಾದಳದ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾಮದೇನು ಸಮುದಾಯ ಭವನ ನಿರ್ಮಾನಕ್ಕೆ ನೆರವು ನೀಡಿದ ದಾನಿಗಳನ್ನು ಗೌರವಿಸಲಾಯಿತು.
ಸೇವಾ ಸಂಘದ ಅಧ್ಯಕ್ಷ ರವೀಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜನಪದ ವಿದ್ವಾಂಸ ಪ್ರೊ.ಗಣೇಶ್ ಅಮೀನ್ ಸಂಕಮಾರು, ಮೂಡುಬಿದಿರೆ ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಮುಖ್ಯ ಅತಿಥಿಯಾಗಿದ್ದರು.
ನಾರಾಯಣ ಗುರು ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಗೋಪಿನಾಥ್, ಸೇವಾದಳ ಅಧ್ಯಕ್ಷ ರಮೇಶ್ ಅಮೀನ್, ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಸದಾನಂದ ಬಿ.ಪೂಜಾರಿ, ಕೋಶಾಧಿಕಾರಿ ರವೀಂದ್ರ ಕರ್ಕೇರ, ಕ್ರೀಡಾ ಕಾರ್ಯದರ್ಶಿ ವಸಂತ ಸುವರ್ಣ, ಉಪಾಧ್ಯಕ್ಷರಾದ ವಾಸು ಪೂಜಾರಿ, ತುಕರಾಂ ಬಂಗೇರ, ಜೊತೆ ಕಾರ್ಯದರ್ಶಿಗಳಾದ ಗಿರೀಶ್ ಕುಮಾರ್ ಹಂಡೇಲು, ಶಶಿಧರ್ ಎಸ್.ಅಂಚನ್ ಎನಿಕ್ರಿಪಲ್ಲ, ಲೆಕ್ಕ ಪರಿಶೋಧಕ ಜಗದೀಶ್ ಪೂಜಾರಿ ಮಿಜಾರು, ಭಜನಾ ಸಮಿತಿ ಸಂಚಾಲಕ ಪ್ರಕಾಶ್ ಅಮೀನ್ ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಸದಸ್ಯರಾದ ಚಂದ್ರ ಕೆ.ಎಚ್ ಸ್ವಾಗತಿಸಿದರು. ಸುರೇಶ್ ಕೋಟ್ಯಾನ್, ದಿನೇಶ್ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಇನ್ನೋರ್ವ ಸದಸ್ಯ ರೋಹನ್ ಅತಿಕಾರಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಪ್ರವೀಶ್ ವಿದ್ಯಾರ್ಥಿವೇತನ ಪಡೆದವರ ವಿವರ ನೀಡಿದರು.